ಮುರುಗಿ ಸ್ವಾಮಿಮಠದಲ್ಲಿ ಜ್ಞಾನದೀಪೋತ್ಸವ ಕಾರ್ಯಕ್ರಮ

ಮುರುಗಿ ಸ್ವಾಮಿಮಠದಲ್ಲಿ ಜ್ಞಾನದೀಪೋತ್ಸವ ಕಾರ್ಯಕ್ರಮ Jnandeepotsava program at Murugi Swami Math

                       ಹಾವೇರಿ  25 : ಕಾಗಿನೆಲೆ ರಸ್ತೆಯಲ್ಲಿರುವ ಶಿ್ಭೂ ಮುರುಗಿಸ್ವಾಮಿಮಠದಲ್ಲಿ ಕಾರ್ತಿಕ ಮಾಸದ ನಿಮಿತ್ಯ ಜ್ಞಾನದೀಪೋತ್ಸವ ಕಾರ್ಯಕ್ರಮ ಜರುಗಿತು.  ಸಮಾರಂಭದ ಸಾನ್ನಿಧ್ಯವಹಿಸಿದ್ದ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ  ಜ್ಞಾನದ ಬಲದಿಂದ ಅಜ್ಞಾನದ ಕೇಡುನೋಡಯ್ಯಾ.ಜ್ಯೋತಿಯ ಬಲದಿಂದ ತಮಂಧದ ಕೇಡುನೋಡಯ್ಯಾ. ಸತ್ಯದ ಬಲದಿಂದ ಆ ಸತ್ಯದ ಕೇಡು ನೋಡಯ್ಯಾ.ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ. ಕೂಡಲಸಂಗನ ಶರಣರ ಅನುಭವದಿಂದ ಎನ್ನ  ಭವದ ಕೇಡು ನೋಡಯ್ಯಾ. ಬಸವಣ್ಣನವರ ವಚನದಲ್ಲಿ ಹೇಳಿದ್ದಾರೆ.ದೀಪ ಲೌಕಿಕ ಜಗತ್ತಿಗೆ ಬೆಳಕು ನೀಡಿದರೆ.

                  ಜ್ಞಾನದೀಪ ಅಲೌಕಿಕ ಬದುಕಿನ ಮಾರ್ಗ ತೋರಿಸುತ್ತಿದೆ. ಕಾರ್ಗತ್ತಲು ಕವಿದಿರುತ್ತದೆ.ಆದರೆ ಅದು ಶಾಶ್ವತವೇನೂ ಅಲ್ಲ ಕತ್ತಲೆಯ ಕೊಳವೆಯ,ಆಚೆಗೆ ಬೆಳಕು ಇದ್ದೆ ಇದೆ. ಬೆಳಕಿನ ಎದುರು ಕತ್ತಲು ತಡೆದು ನಿಲ್ಲುವುದಿಲ್ಲ.ಬೆಳಕು ಹರಿದಂತೆ ಕತ್ತಲು ಕರಗಿ ಹೋಗುತ್ತದೆ.ಪ್ರತಿಯೊಬ್ಬರ ಜೀವನದಲ್ಲಿ ಅಸಹಾಯಕತೆಯನ್ನು. ನಿರಾಶೆಯ ಭಾವನೆ ಬೇಡ. ದೀಪದಂತೆ ಬೆಳಕು ನೀಡುವ-ಭರವಸೆ ಇರಬೇಕು.ಮನುಷ್ಯನು ತಾನೇನನ್ನು ಪ್ರೀತಿಸುವನೋ ಅದರೊಂದಿಗೆ ಬದುಕಿರಬೇಕು ಆದರೆ ದ್ವೇಷದೊಂದಿಗೆ ಬದುಕಿರಬಾರದು.ದ್ವೇಷವು ಒಂದು ವಿಧದ ವಿಷ ಇದ್ದಂತೆ.ದ್ವೇಷ ಮಾಡುವವನು ಇನ್ನೊಬ್ಬರನ್ನು ಅಣಿಕೆಸುವುದಕ್ಕೋಸುಗ ತನ್ನ ಮುಖವನ್ನೇ ತಿರುಚಿ ವಿಕಾರ ಮಾಡಿಕೊಂಡಿರುತ್ತಾನೆ.ದ್ವೇಷ ಮನೋಭಾವನೆಯನ್ನು ಬೆಳೆಸಿಕೊಂಡು ಅವನು ಎಲ್ಲರನ್ನೂ ದ್ವೇಷಿಸುತ್ತಾನೆ.

                  ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತ ತನ್ನ ದೇಶವನ್ನೇ ದ್ವೇಷಿಸುತ್ತಾನೆ.ನಾವು ದ್ವೇಷಿಸಬೇಕಾದ ಸಂಗತಿಗಳಿವೆ. ಆಷಾಢ ಭೂತಿತನವನ್ನು ದ್ವೇಷಿಸಬೇಕು.ಅನ್ಯಾಯ-ಹಿಂಸೆಗಳನ್ನು ದ್ವೇಷಿಸಬೇಕು.ಶೋಷಣೆಗಳನ್ನು ದ್ವೇಷಿಸಬೇಕು ಎಂದು ಶ್ರೀಗಳು ಆಶೀರ್ವಚನ ನೀಡಿದರು. ಜ್ಞಾನ ದೀಪೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಹನುಮಂತಗೌಡ ಗೊಲ್ಲರ,ಮಲ್ಲಿಕಾರ್ಜುನ ಇಂಚಿಗೇರಿ,  ಪರಶುರಾಮ ಹರ್ಲಾಪುರ.ಗೂಳಪ್ಪ ಅರಳಿಕಟ್ಟಿ ಮಾತನಾಡಿದರು.ಈ ಸಂದರ್ಭದಲ್ಲಿ ಜಯದೇವ ಕೆರೂಡಿ.ಶಿವಶಂಕರ​‍್ಪ ಹೇರುಂಡಿ.ರಾಜೇಂದ್ರ ಸಜ್ಜನ,ನಿರಂಜನ ಹೇರೂರ,ಅಶೋಕ ಹೇರೂರ ಸೇರಿದಂತೆ ಶ್ರೀ ಮಠಭಕ್ತರು ಪಾಲ್ಗೊಂಡಿದ್ದರು.ಗ್ರಾಪಂ ಸದಸ್ಯರಾದ ನಿಂಗಪ್ಪ ಆರೇರ ನಿರೂಪಿಸಿದರು.ಕು ಹರಿಪ್ರಿಯಾ ವಚನ ಪ್ರಾರ್ಥನೆ ಮಾಡಿದರು.