ಖರೀದಿಸಿದ ವಸ್ತುಗಳಿಗೆ ಕಡ್ಡಾಯವಾಗಿ ರಶೀದಿ ಪಡೆಯಬೇಕು -ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್
ಹಾವೇರಿ 14: ಹಣ ನೀಡಿ ವಸ್ತು ಖರೀದಿಸುವ ಹಾಗೂ ಸೇವೆ ಪಡೆಯುವ ಎಲ್ಲರೂ ಗ್ರಾಹಕರಾಗುತ್ತಾರೆ. ಗ್ರಾಹಕರು ಖರೀದಿಸಿದ ಪ್ರತಿ ವಸ್ತುಗಳಿಗೆ ಕಡ್ಡಾಯವಾಗಿ ರಶೀದಿ ಪಡೆಯಬೇಕು. ಒಂದು ವೇಳೆ ತಾವು ಖರೀದಿಸಿದ ವಸ್ತುಗಳಲ್ಲಿ ನ್ಯೂನ್ಯತೆಕಂಡುಬಂದಲ್ಲಿ ಗ್ರಾಹಕರ ವ್ಯಾಜ್ಯಗಳ ಆಯೋಗದಲ್ಲಿ ದೂರು ದಾಖಲಿಸುವ ಮೂಲಕ ಪರಿಹಾರ ಪಡೆದುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್. ಅವರು ಹೇಳಿದರು. ಹಾವೇರಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆರೋಗ, ಚೈತನ್ಯ ಸಂಸ್ಥೆ ಜಿಲ್ಲಾ ಮಾಹಿತಿ ಕೇಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ಹಾಗೂ ಶ್ರೀ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಎನ್.ಎಸ್.ಎಸ್.ಘಟಕ ಸಹಯೋಗದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಚೀನ ಕಾಲದ ನಾಗರಿಕರ ವ್ಯವಹಾರ ವ್ಯವಸ್ಥೆ ಬೇರೆಯಾಗಿತ್ತು, ನಾಗರೀಕತೆ ಬೆಳೆದಂತೆ ವಿವಿಧ ಬಳೆವಣಿಗಳಾಗಿವೆ. ಕೈಗಾರಿಕೆಗಳು ಬೆಳೆದಿವೆ, ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಗಳ ಒಪ್ಪಂದಗಳು ನಡೆಯುತ್ತಿವೆ. ನಮ್ಮಲ್ಲಿರುವ ವಸ್ತುಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ, ನಮಗೆ ಬೇಕಾದ ವಸ್ತುಗಳನ್ನು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ನಾವು ಖರೀದಿಸುವ ವಸ್ತುಗಳಲ್ಲಿ ಗುಣಮಟ್ಟ ಹಾಗೂ ಅಳತೆ, ತೂಕ ನೋಡಿ ಖರೀದಿಸಬೇಕು. ವಸ್ತುಗಳಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಪರಿಹಾರಕ್ಕೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಬೇಕು. ಈ ಕುರಿತು ಪ್ರ ಶಿಕ್ಷಣಾರ್ಥಿಗಳಾದ ತಾವು ತಿಳಿದುಕೊಂಡು ತಮ್ಮ ಕುಟುಂಬ ಹಾಗೂ ನೆರೆಹೊರೆಯವರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್.ಮುತಾಲಿಕದೇಸಾಯಿ, ಗ್ರಾಹಕರ ಹಕ್ಕುಗಳ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು. ಇಂದು ಆನ್ಲೈನ್ ವ್ಯವಹಾರ ಹೆಚ್ಚಾಗಿದೆ. ಆನ್ಲೈನ್ ಖರೀದಿಯಲ್ಲಿ ಅನೇಕ ಮೋಸಗಳು ಕಂಡುಬರುತ್ತಿವೆ. ಆನ್ಲೈನ್ನಲ್ಲಿ ವಸ್ತುಗಳ ಖರೀದಿ ಸಮಯದಲ್ಲಿ ಬಹಳ ಜಾಗರೂಕತೆಯಿಂದ ವ್ಯವಹಾರ ಮಾಡಬೇಕು. ಒಂದು ವೇಳೆ ಗ್ರಾಹಕರ ಹಕ್ಕುಗಳಿಗೆ ಚ್ಯುತಿಬಂದಾಗ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು ಎಂದರು. ಡಿಜಿಟಲ್ ವ್ಯವಹಾರ ಜಾಗರೂಕತೆಯಿಂದ ಮಾಡಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶ್ವರ್ಪ ಬಿ.ಎಸ್. ಅವರು ಮಾತನಾಡಿ, ಗ್ರಾಹಕರು ಡಿಜಿಟಲ್ ಹಣಕಾಸು ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಬೇಕು. ವಸ್ತುಗಳ ನಿಖರ ಬೆಲೆ, ಗುಣಮಟ್ಟ, ಎಕ್ಸಪೈರಿ ದಿನಾಂಕ ಖಾತ್ರಿಪಡಿಸಿಕೊಂಡು ಖರೀದಿಸಬೇಕು. ಯಾವುದೇ ಸೇವೆ ಪಡೆದರೆ ಹಾಗೂ ವಸ್ತು ಖರೀದಿಸಿದರೆ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಖರೀದಿಸಿದ ವಸ್ತುಗಳಲ್ಲಿ ಹಾಗೂ ಸೇವೆಯಲ್ಲಿ ದೋಷಗಳು ಕಂಡುಬಂದಲ್ಲಿ ಎರಡು ವರ್ಷದೊಳಗಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿ ಪರಿಹಾರ ಪಡೆಯಬಹುದು ಎಂದು ಹೇಳಿದರು. ಜಾಹೀರಾತುಗಳಿಗೆ ಮರುಳಾಗಬೇಡಿ: ಇಂದು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸೌಂದರ್ಯವರ್ಧಕ, ವಿವಿಧ ತಂಪು ಪಾನೀಯ ಸೇರಿದಂತೆ ವಿವಿಧ ವಸ್ತುಗಳ ಜಾಹೀರಾತುಗಳನ್ನು ವೈಭವಿಕರಿಸಿ ತೋರಿಸಲಾಗುತ್ತದೆ. ಈ ಜಾಹೀರಾತುಗಳಿಗೆ ಮರುಳಾಗಿ ಸಾರ್ವಜನಿಕರು ವಸ್ತುಗಳನ್ನು ಖರೀದಿಸುತ್ತಾರೆ. ನಾವು ಖರೀದಿಸುವ ವಸ್ತು ಎಷ್ಟು ಗುಮಟ್ಟದಿಂದ ಕೂಡಿದೆ ಎಂದು ತಿಳಿದುಕೊಳ್ಳಬೇಕು. ಜಾಹೀರಾತುಗಳ ಮೋಡಿಗೆ ಮರುಳಾಗಬಾರದು ಎಂದು ಸಲಹೆ ನೀಡಿದರು. ಆನ್ಲೈನ್ನಲ್ಲಿ ವಸ್ತು ಖರೀದಿಸುವಾಗ ನೀವು ಆಯ್ಕೆ ಮಾಡಿದ ವಸ್ತು ಬೇರೆಯಾಗಿರುತ್ತದೆ. ಆದರೆ ನಿಮಗೆ ಬಂದ ವಸ್ತು ಬೇರೆ ಯಾಗಿರುತ್ತದೆ. ಇಂತಹ ಮೋಸಗಳು ಕಂಡುಬಂದಾಗ ಖರೀದಿಸಿದ ರಸೀದಿಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿಬಹುದು. ಜಿಲ್ಲಾ ಮಟ್ಟದಲ್ಲಿ ರೂ.50 ಲಕ್ಷದವರೆಗೆ ಪರಿಹಾರ ಕೊಡಿಸಲು ಅವಕಾಶವಿದ್ದು, ಹೆಚ್ಚಿನ ಪರಿಹಾರಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಬಹುದು ಎಂದು ಮಾಹಿತಿ ನೀಡಿದರು. ಆನ್ಲೈನ್ ದೂರು: ಕಳೆದ ಎರಡು ತಿಂಗಳಿನಿಂದ ಇ-ಜಾಗೃತಿ ಪೋರ್ಟಲ್ ಆರಂಭಿಸಲಾಗಿದೆ. ವಸ್ತುಗಳ ಖರೀದಿ ಹಾಗೂ ಸೇವೆಯಲ್ಲಿ ನ್ಯೂನ್ಯತೆಗಳು ಕಂಡುಬಂದಲ್ಲಿ ಆನ್ಲೈನ್ನಲ್ಲಿ ಸಹ ದೂರು ದಾಖಲಿಸಬಹುದು ಎಂದು ಹೇಳಿದರು. ಉಪನ್ಯಾಸಕರಾಗಿ ಭಾಗವಹಿಸಿದ ಸಹಾಯಕ ಕಾನೂನು ನೆರವು ಅಭಿರಕ್ಷಣಾ ವಕೀಲ ಎನ್.ಎನ್.ಡಿಳ್ಳೆಪ್ಪನವರ ಅವರು ಮಾತನಾಡಿ, ರಾಜ-ಮಹಾರಾಜರ ಕಾಲದಿಂದಲೂ ಗ್ರಾಹಕರ ರಕ್ಷಣೆ ಮಾಡಲಾಗುತ್ತಿದೆ ಎಂದು ಕೌಟಿಲ್ಯ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ತಾಳಿಕೆ, ಬಾಳಿಕೆ ಹಾಗೂ ಗುಣಮಟ್ಟದ ವಸ್ತುಗಳ ಮಾರಾಟದ ಪರಿಕಲ್ಪನೆ ಮೂಡಿಸಲಾಗುತ್ತಿತ್ತು. ಆಧುನಿಕ ಸಮಾಜದಲ್ಲಿ ತಂತ್ರಜ್ಞಾನ ಬೆಳೆದಂತೆ ಆನ್ಲೈನ್ ಖರೀದಿ ಸಹ ಹೆಚ್ಚಾಗಿದ್ದು, ಗ್ರಾಹಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು. ವಸ್ತುಗಳನ್ನು ಖರೀದಿಸುವಾಗ ವಿವಿಧ ಸೇವೆಗಳನ್ನು ಪಡೆಯುವಾಗ ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಂಡು ವ್ಯವಹಾರ ಮಾಡಬೇಕು ಹಾಗೂ ಖರೀದಿಸಿದ ವಸ್ತುಗಳಿಗೆ ಹಾಗೂ ಸೇವೆಗೆ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ ಹಾಗೂ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಮಂಜುನಾಥ ವಡ್ಡರ ಅವರುಗಳು ಗ್ರಾಹಕರ ಕಾಯ್ದೆಗಳ ಕುರಿತು ಮಾತನಾಡಿದರು. ಸಾನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಎಂ.ಎಸ್.ರಮೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಉಮಾದೇವಿ ಎಸ್.ಹಿರೇಮಠ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಕುಮಾರ ವಡ್ಡನಕಟ್ಟಿ ಇತರರು ಉಪಸ್ಥಿತರಿದ್ದರು. ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ನಿರ್ದೇಶಕ ಎಸ್.ಎಚ್.ಮಜೀದ್ ಸ್ವಾಗತಿಸಿದರು.