ಯುವಪೀಳಿಗೆ ಸಂವಿಧಾನವನ್ನು ಅರ್ಥೈಸಿಕೊಂಡು, ಅನುಸರಣೆ ಮಾಡುವುದು ಮುಖ್ಯವಾಗಿದೆ

ಯುವಪೀಳಿಗೆ ಸಂವಿಧಾನವನ್ನು ಅರ್ಥೈಸಿಕೊಂಡು, ಅನುಸರಣೆ ಮಾಡುವುದು ಮುಖ್ಯವಾಗಿದೆ It is important for the younger generation to understand and follow the Constitution

          ಕೊಪ್ಪಳ   27:  ಮಹಿಳೆಯರು, ಮಕ್ಕಳು, ಕಾರ್ಮಿಕರು ಸೇರಿದಂತೆ ಸಮಾಜದ ವಿವಿಧ ಸಮುದಾಯಗಳಲ್ಲಿ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ ಸ್ಥಾಪಿಸುವಲ್ಲಿ ಸಂವಿಧಾನ ಬುನಾದಿಯಾಗಿದ್ದು ಯುವಪೀಳಿಗೆ ಸಂವಿಧಾನವನ್ನು ಅರ್ಥೈಸಿಕೊಂಡು, ಅನುಸರಣೆ ಮಾಡುವುದು ಮುಖ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಚಂದ್ರಶೇಖರ್ ಹೇಳಿದರು. 

ಅವರು ಬುಧವಾರ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಸಂವಿಧಾನವು ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವ ಮಹಾಗ್ರಂಥವಾಗಿದೆ. ಪ್ರತಿಯೊಬ್ಬರೂ ಹಕ್ಕುಗಳ ಜೊತೆ ಕರ್ತವ್ಯಗಳನ್ನು ಸಹ ಪಾಲಿಸಬೇಕು. ಸಂವಿಧಾನದ ಮೂಲ ಆಶಯಗಳನ್ನು ಗೌರವಿಸಬೇಕೆಂದು ಹೇಳಿದರು. 

ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ನಿಕಾಯದ ಡೀನ್ ರಾದ ಪ್ರೊ. ವಿ ಸುದೇಶ ಅವರು ಮಾತನಾಡಿ, ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವಾಗಿ ಮುಂದುವರೆಯುತ್ತಿರುವುದಕ್ಕೆ , ಶಾಂತಿಯುತ ರಾಷ್ಟ್ರವಾಗಿರುವುದಕ್ಕೆ ಮೂಲ ಕಾರಣ ನಮ್ಮ ಸಂವಿಧಾನ ಎಂದರು. 

ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ಮಹಾಂತೇಶ ಎಸ್‌. ದರಗದ ಅವರು ಮಾತನಾಡಿ, ಈ ನೆಲದ ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಧರ್ಮಕ್ಕಿಂತಲೂ ಸಂವಿಧಾನ, ಅದರ ಪಾಲನೆ ಅವಶ್ಯಕತೆಯಾಗಿದೆ ಎಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ರವಿ ಅವರು ಮಾತನಾಡಿ, ಅವಕಾಶವಂಚಿತ ಸಮುದಾಯಕ್ಕೆ ಸಂವಿಧಾನ ಧ್ವನಿಯಾಗಿದೆ. ಅಂಬೇಡ್ಕರವರು ನೀಡಿದ ಈ ಸಂವಿಧಾನದಿಂದಾಗಿಯೇ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಲಭಿಸಿದೆ. ಸಂವಿಧಾನದ ಆಶಯಗಳ ಸಮಗ್ರ ಪಾಲನೆಯಿಂದ ಸಮ ಸಮಾಜ ನಿರ್ಮಾಣ ಸಾಧ್ಯವಿದ್ದು,ಪ್ರತಿಯೊಬ್ಬರೂ ಸಂವಿಧಾನವನ್ನು ಅಧ್ಯಯನ ಮಾಡಬೇಕೆಂದರು. 

ಇದೇ ವೇಳೆ ಕೋಲಾರದ ಕಾನೂನು ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ.ಗೋಪಾಲ ಅಂಜನಪ್ಪ ಮಾತನಾಡಿದರು.  

ಸಮಾರಂಭದಲ್ಲಿ ಸಂವಿಧಾನದ ಪೀಠಿಕೆ ಬೋಧನೆ, ವಿದ್ಯಾರ್ಥಿಗಳಿಂದ ಪ್ರಮಾಣವಚನ ಹಾಗೂ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪನಮನ ಕಾರ್ಯಕ್ರಮಗಳು ಸಹ ನಡೆದವು. ವಿ.ವಿ.ಯ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ನಾಡಗೀತೆ ನಡೆಯಿತು. ಕೊಪ್ಪಳ ವಿ.ವಿ .ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ ಮೇಟಿಯವರು ಸಂವಿಧಾನದ ದಿನಾಚರಣೆ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಾದ್ಯಾಪಕರಾದ ಡಾ.ಸುಧಾಕರ ಕಾರ್ಯಕ್ರಮ ನಿರೂಪಿಸಿದರು, ಡಾ ಬಸವರಾಜ ಗಡಾದ ವಂದಿಸಿದರು.