ಜಿಲ್ಲೆಯಲ್ಲಿ ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನ ಸಮರ​‍್ಕ ಅನುಷ್ಠಾನಕ್ಕೆ ಸೂಚನೆ -ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನ ಸಮರ​‍್ಕ ಅನುಷ್ಠಾನಕ್ಕೆ ಸೂಚನೆ -ಜಿಲ್ಲಾಧಿಕಾರಿ  Instructions for implementation of the Sparsh Leprosy Awareness Campaign in the district - District

       ಹಾವೇರಿ 28 : “ಸ್ಪರ್ಶ್‌ ಕುಷ್ಠರೋಗ  ಅರಿವು ಆಂದೋಲನ” ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸಮರ​‍್ಕವಾಗಿ ಅನುಷ್ಠಾನ ಮಾಡಬೇಕು. ಕುಷ್ಠರೋಗ ಶಾಪವಲ್ಲ ಎಂ.ಡಿ.ಟಿ ಚಿಕಿತ್ಸೆಯಿಂದ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಸಾರ್ವಜನಿಕರಿಗೆ  ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ “ಸ್ಪರ್ಶ್‌ ಕುಷ್ಠರೋಗ  ಅರಿವು ಆಂದೋಲನ ಕಾರ್ಯಕ್ರಮ” ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ ಮೂಲಕ ಕುಷ್ಠರೋಗ ತಡೆಗೆ  ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. 

ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಈ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಬೇಕೆಂದು  ಆಯಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚನಬಸಯ್ಯ ವಿರಕ್ತಮಠ ಮಾತನಾಡಿ, ಜನೇವರಿ 30 ರಿಂದ ಫೆಬ್ರುವರಿ 13 ರವರೆಗೆ “ಸ್ಪರ್ಶ್‌ ಕುಷ್ಠರೋಗ  ಅರಿವು ಆಂದೋಲನ” ಕಾರ್ಯಕ್ರಮ ಜರುಗಲಿದೆ.   ಜಿಲ್ಲೆಯಲ್ಲಿ 2025-26 ರಲ್ಲಿ 10 ಪಿ.ಬಿ, 52 ಎಂ.ಬಿ  ಸೇರಿ ಒಟ್ಟು 62 ಪ್ರಕರಣಗಳಿಗೆ ಚಿಕಿತ್ಸೆ  ನೀಡಲಾಗುತ್ತಿದೆ. ಜಿಲ್ಲೆಯ 198 ಹಳ್ಳಿಗಳಲ್ಲಿ ಮಾತ್ರ ಕುಷ್ಠರೋಗ ಪ್ರಕರಣಗಳು ಕಂಡುಬಂದಿವೆ ಎಂದರು. 

ಬಸಾಪುರ, ಚಿಕ್ಕಮತ್ತೂರು, ಶಿರಬಡಗಿ ತಾಂಡ, ಯಲಿವಾಳ, ಅಗಡಿ ಮುಂತಾದ ಗ್ರಾಮಗಳಲ್ಲಿ ಕುಷ್ಠರೋಗ ಪ್ರಕರಣಗಳು ಹೆಚ್ಚಾಗಿದ್ದು, ಈ ಪ್ರದೇಶಗಳಲ್ಲಿ ಹೆಚ್ಚು ಒತ್ತು ಕೊಟ್ಟು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.