ಬಡವರು, ನಿರ್ಗತಿಕರಿಗೆ ಸೇವೆ ಮಾಡಿದರೆ ಮನಸ್ಸಿಗೆ ನೆಮ್ಮದಿ: ದೇಸಾಯಿ
ಯರಗಟ್ಟಿ 29: ಬಡವರು ಹಾಗೂ ನಿರ್ಗತಿಕರಿಗೆ ಕೈಲಾದಷ್ಟು ಸೇವೆ ಮಾಡಿದರೆ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಬೈಲಹೊಂಗಲ ಕಲ್ಪವೃಕ್ಷ ಮಾದರಿ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಅನ್ನಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಲೆಯಿಂದ ವೃದ್ಧಾಶ್ರಮ ಹಾಗೂ ಅನಾಥಾಶ್ರಮಕ್ಕೆ ಇಂತಹ ಮಹತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದನ್ನು ಶ್ಲಾಘಿಸಿ ಪ್ರತಿ ಮನೆಯಿಂದಲೂ ಅಕ್ಕಿ, ಗೋಧಿ, ದವಸ ಧಾನ್ಯಗಳನ್ನು ನೀಡಬೇಕು ಎಂದು ಗ್ರಾಮಸ್ಥರಿಗೆ ಹೇಳಿದರು.
ಬೈಲಹೊಂಗಲ ಕಲ್ಪವೃಕ್ಷ ಮಾದರಿ ಶಾಲೆಯ ಶಿಕ್ಷಕ ಸಂತೋಷ ವನಕಿ ಮಾತನಾಡಿ, ಸಂಗ್ರಹಿಸಿದ ಧವಸ ಧಾನ್ಯಗಳನ್ನು ಫೆಭ್ರುವರಿತಿಂಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಬೈಲಹೊಂಗಲ, ಬೆಳಗಾವಿ, ಹಿಡಕಲ, ನಾಗನೂರು, ಕಲಭಾವಿ ಸೇರಿದಂತೆ ಎಲ್ಲ ವೃದ್ಧಾಶ್ರಮ ಹಾಗೂ ಅನಾಥಾಶ್ರಮಕ್ಕೆ ವಿತರಿಸಲಾಗುವದು ಎಂದು ಹೇಳಿದರು.
ವಿಶ್ರಾಂತ ಮುಖ್ಯ ಶಿಕ್ಷಕ ಎ.ವಿ.ಇಂಗಳೆ, ದೀಪಕ ಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಬಸವರಾಜ ಪೂಜೇರ, ಮುಖಂಡ ಶಂಕರಗೌಡ ಪಾಟೀಲ, ವಿನಯ ಕರಿಕಟ್ಟಿ, ನೀಲಕಂಠ ಹಂಜಿ, ಕಸ್ತೂರಿ ಮೇಟಿ, ನಿವೇಧಿತಾ ಕಟ್ಟಿ, ಸರಸ್ವತಿ ಬನ್ನಿಗಿಡದ, ರವಿಕುಮಾರ ಅಣ್ಣಿಗೇರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.