200ಕ್ಕೂ ಹೆಚ್ಚು ಜನರಿಗೆ ಹೃದಯ ತಪಾಸಣೆ : ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ!
ಧಾರವಾಡ 12: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ವತಿಯಿಂದ ಆಯೋಸಿದ್ದ ಉಚಿತ ಹೃದಯರೋಗ ತಪಾಸಣಾ ಶಿಬಿರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಯಿತು, ಬೆಳಿಗ್ಗೆ ಯಿಂದಲೇ ಗುಂಪು ಗುಂಪಾಗಿ ಬಂದ ಜನರು ಉಚಿತ ಬಿಪಿ, ಶುಗರ್, ಇಸಿಜಿ, ಇಕೋ ತಪಾಸಣೆಗೊಳಗಾಗಿ ತಜ್ಞ ವೈದ್ಯರ ಸಮಾಲೋಚನೆ ಪಡೆದರು. ಹುಬ್ಬಳ್ಳಿ-ಧಾರವಾಡ ನಾಗರಿಕರ ಪರಿಸರ ಸಮಿತಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರ ಸಂಯುಕ್ತಾಶ್ರಯದಲ್ಲಿ ನಗರದ ಪರಿಸರ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದ ಸುಮಾರು 200 ಕ್ಕೂ ಅಧಿಕ ಜನರು ಇದರ ಸದುಪಯೋಗ ಪಡೆದುಕೊಂಡರು. ಶಿಬಿರ ಉದ್ಘಾಟಿಸಿದ ಮುಖ್ಯ ಅತಿಥಿ ಪ್ರದೀಪ ಶೆಟ್ಟಿ, ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರು ಮಾತನಾಡಿ ಮಹಿಳಾ ದಿನಾಚರಣೆ ನಿಮಿತ್ತ ಮುಖ್ಯವಾಗಿ ಮಹಿಳೆಯರಿಗೆ ತಪಾಸಣೆ ಮಾಡಿರುವ ಕಾರ್ಯವನ್ನು ಮೆಚ್ಚಿ ನಾರಾಯಣ ಹಾರ್ಟ್ ಸೆಂಟರ್ನ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್ ನ ಮಾರುಕಟ್ಟೆ ವಿಭಾಗದ ಹಿರಿಯ ಮೇಲ್ವಿಚಾರಕ ಅಜಯ ಹುಲಮನಿ ರವರು ಮಾತನಾಡಿ ಇಂದಿನ ದಿನದಲ್ಲಿ ಹೃದಯರೋಗದ ಹೆಚ್ಚಳ, ಕಾರಣ ಮತ್ತು ಶಿಬಿರದ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿಯವರು ಮಾತನಾಡಿ ಹೃದಯ ರೋಗದ ಹೆಚ್ಚಳಕ್ಕೆ ಕಳವಳ ವ್ಯಕ್ತಪಡಿಸಿದರು. ಇಂದಿನ ಸಮಾಜಕ್ಕೆ ಇಂತಹ ಶಿಬಿರಗಳ ಅವಶ್ಯಕತೆ ಇದೆ. ಕಾರಣ ಸಂಘ ಸಂಸ್ಥೆಗಳು ಇಂತಹ ಶಿಬಿರಗಳಿಗೆ ಹೆಚ್ಚು ಮಹತ್ವ ನೀಡಬೇಕಾಗಿದೆ. ಮತ್ತು ಜನರ ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಹವ್ಯಾಸಗಳನ್ನು, ಒಳ್ಳೆಯ ಜೀವನಶೈಲಿಗಳನ್ನು ಅನುಸರಿಸಬೇಕೆಂದರು. ನಿರೂಪಣೆ, ಸ್ವಾಗತ ಹಾಗೂ ವಂದರ್ನಾಪಣೆಯನ್ನು ದುಂಡೇಶ ತಡಕೋಡ ಮಾಡಿದರು. ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್ನ ವೈದ್ಯ ಡಾ. ಮಹಾಂತೇಶ ಉಳ್ಳಾಗಡ್ಡಿ ಮತ್ತು ಸಿಬ್ಬಂದಿಗಳಾದ ನಾಗರಾಜ ಬಡಿಗೇರ ಹಾಗೂ ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿಯ ಕಾರ್ಯದರ್ಶಿ ಡಾ. ಉಲ್ಲಾಸ ಕುಲಕರ್ಣಿ, ಸಹಕಾರ್ಯದರ್ಶಿ ಐ.ಎಲ್. ಪಾಟೀಲ ಮತ್ತು ಎಸ್.ಜಿ. ಬೆಟಗೇರಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಅಧಿಕಾರಿ ಅಶೋಕ ಕೆ. ಮತ್ತು ಮಯೂರ ಜೋರಸ್ಕರ್ ರವರು ಉಪಸ್ಥಿತರಿದ್ದರು.