ಸಿರಿಗೇರಿಯಲ್ಲಿ ಸಂಭ್ರಮದ ವೀರಭದ್ರೇಶ್ವರ ಜಯಂತ್ಯೋತ್ಸವ

ಸಿರಿಗೇರಿಯಲ್ಲಿ ಸಂಭ್ರಮದ ವೀರಭದ್ರೇಶ್ವರ ಜಯಂತ್ಯೋತ್ಸವ  Grand Virabhadreshwara Jayanthi Celebrations in Sirigeri

ಬಳ್ಳಾರಿ, ಸೆ.14: ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಸಮಿತಿ ವತಿಯಿಂದ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಸ್‌.ಎಂ. ನಾಗರಾಜಸ್ವಾಮಿ ಮಾತನಾಡಿ, ವೀರಭದ್ರ ದೇವರು ಸತ್ಯ, ಶುದ್ಧ ಸನ್ನಡತೆ ಹಾಗೂ ನೈತಿಕ ಶಕ್ತಿಯ ಪ್ರತೀಕವಾಗಿದ್ದು, ನಮ್ಮ ಸಂಸ್ಕೃತಿಯ ವಿಶಿಷ್ಟ ದೈವಶಕ್ತಿಯ ಮಹಾ ಅವತಾರವಾಗಿದ್ದಾರೆ ಎಂದರು.  

ಭಾದ್ರಪದ ಮಾಸದ ಮೊದಲ ಮಂಗಳವಾರದಂದು ವೀರಭದ್ರೇಶ್ವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸುವುದು ವಾಡಿಕೆಯಾಗಿದೆ. ದೇಶದ ವಿವಿಧ ದೇವಾಲಯಗಳು ಹಾಗೂ ಮನೆಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಜಯಂತ್ಯೋತ್ಸವ ಆಚರಿಸುತ್ತಾರೆ. ವೀರಭದ್ರೇಶ್ವರ ಜಯಂತಿಯನ್ನು ಸಂಭ್ರಮದಿಂದ ಆಚರಿಸುವುದರೊಂದಿಗೆ ಪ್ರತಿಯೊಬ್ಬರೂ ವಿಭೂತಿ ಹಾಗೂ ಇಷ್ಟಲಿಂಗ ಧರಿಸಿ ಮಾನವ ಜನ್ಮ ಸಾರ್ಥಕಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.  

ಕಾರ್ಯಕ್ರಮದಲ್ಲಿ ಪುರೋಹಿತರಾದ ಕೆ.ಎಂ. ಗಂಗಾಧರಯ್ಯ ಸ್ವಾಮಿ, ಎಚ್‌.ಎಂ. ಕೋಟ್ರೇಶ ಸ್ವಾಮಿ ಸೇರಿದಂತೆ ಗಣ್ಯರು ವೀರಭದ್ರೇಶ್ವರ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಗ್ರಾಮ ಹಿರಿಯ ಮುಖಂಡರು, ದೇವಸ್ಥಾನ ಸಮಿತಿ ಸದಸ್ಯರು, ಭಜನಾ ಮಂಡಳಿ, ಗಣೇಶ ಮಂಡಳಿ, ಯುವಕ-ಯುವತಿ ಹಾಗೂ ಮಹಿಳಾ ಸಂಘಗಳ ಸದಸ್ಯರು ಮತ್ತು ಭಕ್ತರು ಭಾಗವಹಿಸಿದ್ದರು.  ಜಂಗಮ ಮೂರ್ತಿಗಳು ಹಾಗೂ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.