ಜಿಲ್ಲೆಯಲ್ಲಿ ಸಹಜ ಹೆರಿಗೆಗೆ ಆದ್ಯತೆ ನೀಡಿ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ

Give priority to natural childbirth in the district: DC Prashant Kumar Mishra

ಜಿಲ್ಲೆಯಲ್ಲಿ ಸಹಜ ಹೆರಿಗೆಗೆ ಆದ್ಯತೆ ನೀಡಿ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ 30:ಗಂಡಾಂತರ ಗರ್ಭಿಣಿಯರಿಗೆ ರಕ್ತಹೀನತೆಯನ್ನು ಆರಂಭದಲ್ಲಿಯೇ ನಿಯಂತ್ರಿಸಲು ಕಬ್ಬಿಣಾಂಶ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಲು ವ್ಯಾಪಕ ಪ್ರಚಾರ ನೀಡಬೇಕು. ರಕ್ತಹೀನತೆ ಉಂಟಾಗುವುದು ತಡೆಗಟ್ಟುವ ಮೂಲಕ ಜಿಲ್ಲೆಯಲ್ಲಿ ಸಹಜ ಹೆರಿಗೆಯೊಂದಿಗೆ ತಾಯಿ ಮಗು ಮನೆಗೆ ಸಂತಸದಿಂದ ಮರಳುವಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಏರಿ​‍್ಡಸಿದ್ದ ಜಿಲ್ಲಾ ಮಟ್ಟದ ತಾಯಿ ಮತ್ತು ಶಿಶು ಮರಣ ತಡೆಗಟ್ಟುವಿಕೆ ಕುರಿತ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಟುಂಬದ ಸದಸ್ಯರಿಗೆ ತಮ್ಮ ಮನೆಯಲ್ಲಿರುವ ಗರ್ಭಿಣಿ ಮಹಿಳೆಗೆ ವೈದ್ಯರ ಬಳಿ ತಪಾಸಣೆಗೆ ಒಳಪಟ್ಟ ನಂತರ ರಕ್ತ ಹೀನತೆಯನ್ನು ತಡೆಗಟ್ಟಲು ಕಬ್ಬಿಣಾಂಶ ಮಾತ್ರೆಗಳನ್ನು ನಿರ್ಲಕ್ಷ್ಯವಹಿಸದೇ ತೆಗೆದುಕೊಳ್ಳಲು ಸೂಕ್ತ ಮಾಹಿತಿ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ತಾಯಂದಿರ ಆರೈಕೆ ಕುರಿತು ಕುಟುಂಬದ ಸದಸ್ಯರಿಗೆ ತಿಳಿ ಹೇಳಬೇಕು. ಚೊಚ್ಚಲು ಗರ್ಭಿಣಿ ಅವಧಿಯಲ್ಲಿ ಆರೋಗ್ಯ ಇಲಾಖೆಯು ವೈದ್ಯಕೀಯ ಕಾರಣಗಳಿಂದ ಗುರ್ತಿಸಲ್ಪಡುವ ಗಂಡಾಂತರ ಗರ್ಭಿಣಿ ಸಂದರ್ಭದಲ್ಲಿ ಹೆಚ್ಚಿನ ಕಾಳಜಿ ವಹಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.ಕ್ಷೇತ್ರ ಮಟ್ಟದಲ್ಲಿ ವೈದ್ಯಾಧಿಕಾರಿಗಳಿಂದ ಹಿಡಿದು ಪ್ರತಿಯೊಬ್ಬ ಸಿಬ್ಬಂದಿಯವರು ಗಂಡಾಂತರ ಗರ್ಭಿಣಿ ಎಂದು ತಿಳಿದ ದಿನದಿಂದಲೇ ಕಬ್ಬಿಣಾಂಶ ಮಾತ್ರೆಗಳ ಕುರಿತು ಪಾಲಕರಲ್ಲಿ ತಪ್ಪು ನಂಬಿಕೆಗಳು ಇದ್ದಲ್ಲಿ ಹೆಚ್ಚಿನ ಜಾಗೃತಿ ನೀಡಬೇಕು. ಮಾತ್ರೆಗಳನ್ನು ಪ್ರತಿದಿನ ತಪ್ಪದೇ ನುಂಗಲು ತಿಳಿಸಬೇಕು. ವೈದ್ಯರ ಸಲಹೆ ಮೇರೆಗೆ ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಹೆಚ್‌.ಐ.ವಿ ಪರೀಕ್ಷೆ, ಅಗತ್ಯವೆನಿಸುವ ಇತರೆ ಪರೀಕ್ಷೆಗಳನ್ನು ಕಾಲ ಕಾಲಕ್ಕೆ ಮಾಡಿಸಲು ಸೂಚಿಸಬೇಕು ಎಂದರು.ತಾಯಿ ಕಾರ್ಡ್‌ನಲ್ಲಿ ಎಲ್ಲಾ ದಾಖಲೆಗಳ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಗರ್ಭಿಣಿ ಮಹಿಳೆಯು ಯಾವುದೇ ಆಸ್ಪತ್ರೆಗೆ ತಪಾಸಣೆಗೆ ಹೋದ ಸಂದರ್ಭದಲ್ಲಿ ತಾಯಿ ಕಾರ್ಡ್‌ ಆಧಾರದ ಮೇಲೆ  ಚಿಕಿತ್ಸೆ ಮುಂದುವರೆಸಬೇಕು. 

ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳ ನೀರಿನ ಸಂಗ್ರಹಗಳನ್ನು ಪರೀಕ್ಷಿಸಬೇಕು. ಸೂಕ್ತ ಕಾರ್ಯ ಯೋಜನೆಯೊಂದಿಗೆ ಪೌಷ್ಟಿಕ ಆಹಾರ ಒದಗಿಸಬೇಕು ಎಂದು ಸೂಚಿಸಿದರು.  

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ಗರ್ಭಿಣಿಯರ ದ್ವಿತೀಯ ತ್ರೈಮಾಸಿಕ ಆರಂಭದ ನಂತರ ಒಂದು ಅಲ್ಬೆಂಡಜೋಲ್ ಮಾತ್ರೆಯನ್ನು ನೀಡಲಾಗುತ್ತಿದ್ದು, ರಕ್ತದಲ್ಲಿ ಹೆಚ್‌.ಬಿ ಪ್ರಮಾಣ 10 ಕ್ಕಿಂತ ಮೇಲ್ಪಟ್ಟವರಿಗೆ ಪ್ರತಿ ದಿನ ಒಂದರಂತೆ 180 ಕಬ್ಬಿಣಾಂಶ ಮಾತ್ರೆಗಳು, ಹೆಚ್‌.ಬಿ ಪ್ರಮಾಣ 9 ರಿಂದ 10 ಮಧ್ಯೆದಲ್ಲಿರುವವರಿಗೆ ಪ್ರತಿ ದಿನ 2 ರಂತೆ 360 ಕಬ್ಬಿಣಾಂಶ ಮಾತ್ರೆಗಳು, ಹೆಚ್‌.ಬಿ.ಪ್ರಮಾಣ 7 ರಿಂದ 9 ಇರುವವರಿಗೆ 5 ಬಾರಿ ಐರನ್ ಸುಕ್ರೋಸ್ ಚುಚ್ಚುಮದ್ದು ನೀಡಲಾಗುವುದು ಎಂದು ಸಭೆಗೆ ತಿಳಿಸಿದರು. 

ಒಂದು ವೇಳೆ 7 ಕ್ಕಿಂತ ಕಡಿಮೆ ಇದ್ದಲ್ಲಿ ರಕ್ತ ಹಾಕಿಸುವ ಕಾರ್ಯ ಮಾಡಲಾಗುತ್ತಿದ್ದು, ಎಲ್ಲಾ ಗರ್ಭಿಣಿಯರಿಗೂ ಕ್ಯಾಲ್ಶಿಯಂ ಮಾತ್ರೆಯನ್ನು ನೀಡಲಾಗುತ್ತಿದೆ. ಪ್ರತಿ ತಿಂಗಳು ವೈದ್ಯರ ಮೂಲಕ ತಪಾಸಣೆಯನ್ನು 7ನೇ ತಿಂಗಳವರೆಗೆ, 7 ರಿಂದ 9 ತಿಂಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ತಪಾಸಣೆ ಹಾಗೂ 9 ತಿಂಗಳ ನಂತರ ಪ್ರತಿ ವಾರ ವೈದ್ಯರ ಮೂಲಕ ತಪಾಸಣೆ ಮಾಡಿಸುವ ಜೊತೆಗೆ ಪ್ರತಿ ತಿಂಗಳು 09ನೇ ಮತ್ತು 20ನೇ ತಾರೀಖುನಂದು ಎಲ್ಲಾ ಗರ್ಭಿಣಿಯರ ತಪಾಸಣೆ ಕೈಗೊಂಡು ಜಾಗೃತಿ ನೀಡಲಾಗುತ್ತಿದೆ ಎಂದು ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಎಸ್‌.ಸಂಕನೂರು, ಬಿಮ್ಸ್‌ ನಿರ್ದೇಶಕ ಡಾ.ಗಂಗಾಧರ ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್ ಬಸರೆಡ್ಡಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಬಿಮ್ಸ್‌ ತಜ್ಞರಾದ ಡಾ.ಚಂದ್ರಶೇಖರ್, ಡಾ.ಶ್ರೀಕಾಂತ, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.