ಭರದಿಂದ ಸಾಗಿದ ಅಂತಿಮ ಹಂತದ ಸಿದ್ಧತೆ: ಸಿಂಗಾರಗೊಂಡಿರುವ ಪೂಜಾ ಸಾಮಗ್ರಿಗಳ ಅಂಗಡಿಗಳು

ಭರದಿಂದ ಸಾಗಿದ ಅಂತಿಮ ಹಂತದ ಸಿದ್ಧತೆ: ಸಿಂಗಾರಗೊಂಡಿರುವ ಪೂಜಾ ಸಾಮಗ್ರಿಗಳ ಅಂಗಡಿಗಳು Final preparations in full swing: Puja shops decorated

 ಉಗರಗೋಳ : ಹೊಸ ವರ್ಷದ ಆರಂಭದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ನಡೆಯಲಿರುವ ಬೃಹತ್ ಜಾತ್ರೆಗೆ ಯಲ್ಲಮ್ಮನಗುಡ್ಡ ಸಜ್ಜಾಗುತ್ತಿದೆ. ಬನದ ಹುಣ್ಣಿಮೆ ಅಂಗವಾಗಿ ಜನವರಿ 3ರಂದು ಜಾತ್ರೆ ನಡೆಯಲಿದೆ. ದೇಶದ ನಾನಾ ಭಾಗಗಳಿಂದ ಬರುವ ಭಕ್ತರು ಲಕ್ಷಲಕ್ಷ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು. ಆದರೆ, ಜಾತ್ರೆಗೂ ಎರಡು ದಿನ ಮುಂಚೆಯಿಂದಲೇ ಅಂದರೆ, ಜನವರಿ 1ರಿಂದ ಯಲ್ಲಮ್ಮನ ಸನ್ನಿಧಿಯತ್ತ ಭಕ್ತರ ರಾಶಿ ಹರಿರುಬರಲಿದೆ. 

ಜಾತ್ರೆಗೆ ಪೂರ್ವಭಾವಿಯಾಗಿ ಜಿಲ್ಲಾಡಳಿತ, ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದವರು ಸಭೆ ಮಾಡಿ, ಕೈಗೊಳ್ಳಬೇಕಿರುವ ಸಿದ್ಧತೆ ಬಗ್ಗೆ ಚರ್ಚಿಸಿದ್ದಾರೆ. ಈಗ ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿವೆ. 

ಜಾತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನಿಗಾ ವಹಿಸಲಾಗಿದ್ದು, ನಾಲ್ಕು ಓವರ್‌ಹೆಡ್ ಟ್ಯಾಂಕ್ ಮತ್ತು 39 ಕುಡಿಯುವ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ ಲಕ್ಷಾಂತರ ಭಕ್ತರು ಬರುವುದರಿಂದ ವಸತಿ ವ್ಯವಸ್ಥೆ ಮಾಡುವುದು ಕಷ್ಟ. ಇದಕ್ಕಾಗಿ ವಸತಿ ಸಂಕೀರ್ಣ ಮತ್ತು ಪರಶುರಾಮ ವಸತಿ ನಿಲಯದಲ್ಲಿ 300ಕ್ಕೂ ಅಧಿಕ ಕೊಠಡಿ ಕಾಯ್ದಿರಿಸಲಾಗಿದೆ. 

ಗುಡ್ಡದ ಪರಿಸರದಲ್ಲಿ ಇರುವ ಸಾಮೂಹಿಕ ಶೌಚಗೃಹಗಳನ್ನು ದುರಸ್ತಿಗೊಳಿಸಿ, ಬಳಕೆಗೆ ಸಿದ್ಧಗೊಳಿಸಿ ಇರಿಸಲಾಗಿದೆ. ಭಕ್ತರಿಗೆ ಸುಲಭವಾಗಿ ದರ್ಶನ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. 

ಜಾತ್ರೆಗೆ ಇನ್ನೂ ಆರು ದಿನಗಳಷ್ಟೇ ಬಾಕಿ ಇದ್ದು, ವಿವಿಧ ಕಡೆಗಳಿಂದ ವ್ಯಾಪಾರಿಗಳು ಈಗಾಗಲೇ ಗುಡ್ಡಕ್ಕೆ ಲಗ್ಗೆ ಇಟ್ಟಿದ್ದಾರೆ. ತೆಂಗಿನಕಾಯಿ, ಕರ​‍್ೂರ, ಬಾಳೆಹಣ್ಣು, ಅರಿಶಿನಹಿಕುಂಕುಮ, ಆಟಿಕೆಗಳು, ಮಿಠಾಯಿ ಮತ್ತಿತರ ವಸ್ತುಗಳ ಮಾರಾಟಕ್ಕೆ ಅಂಗಡಿಗಳನ್ನು ಹಾಕುತ್ತಿದ್ದಾರೆ. 

ಜಾತ್ರೆಯಲ್ಲಿ ಭಕ್ತರ ಆರೋಗ್ಯ ದೃಷ್ಟಿಯಿಂದಲೂ ಕ್ರಮ ವಹಿಸಿದ್ದು, ಕೌಂಟರ್ ಸಂಖ್ಯೆ 1ರ ಬಳಿ ನಮ್ಮ ಕ್ಲಿನಿಕ್ ತೆರೆಯುತ್ತಿದ್ದೇವೆ. ಇದಲ್ಲದೆ, ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮೂರು ಪ್ರಥಮ ಚಿಕಿತ್ಸೆ ಘಟಕ ತೆರೆಯುತ್ತಿದ್ದೇವೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ತಲಾ ಒಂದು ಆಂಬುಲೆನ್ಸ್‌ ಮತ್ತು ಅಗ್ನಿಶಾಮಕ ವಾಹನ ಕಾಯ್ದಿರಿಸಿದ್ದೇವೆ. ಜಾತ್ರೆಯಯಲ್ಲಿ ಪ್ರಮುಖ ಬದಲಾವಣೆ ಬಗ್ಗೆ ಭಕ್ತರಿಗೆ ತ್ವರಿತ ಮಾಹಿತಿ ನೀಡಲು ಸೆಂಟ್ರಲ್ ಮೈಕ್ ಸಿಸ್ಟಮ್ ಮಾಡಿದ್ದೆವೆ ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಿದ್ದು ಹುಲ್ಲೋಳ್ಳಿ ಹೇಳಿದರು. 

ಬೆಳಗಾವಿಯಿಂದ ಯಲ್ಲಮ್ಮನಗುಡ್ಡಕ್ಕೆ 25 ಬಸ್ ಬಿಡುತ್ತಿದ್ದು, ಭಕ್ತರ ದಟ್ಟಣೆ ಹೆಚ್ಚಿದಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸುವುದಾಗಿ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್‌.ಗುಡೆನ್ನವರ ಹೇಳಿದರು. 

ಈ ಬಾರಿ ಜಾತ್ರೆಯಲ್ಲಿ ಭದ್ರತೆಗೆ ಒತ್ತು ಕೊಟ್ಟಿದ್ದು, 300 ಪೊಲೀಸರನ್ನು ನಿಯೋಜಿಸಿದ್ದೇವೆ. 400 ಗೃಹರಕ್ಷಕ ದಳ ಸಿಬ್ಬಂದಿಯೂ ಇರಲಿದ್ದಾರೆ. ನಾಲ್ಕು ವಾಚ್ ಟವರ್ ನಿರ್ಮಿಸಿದ್ದೇವೆ ಎಂದು ರಾಮದುರ್ಗ ಡಿವೈಎಸ್‌ಪಿ ಚಿದಂಬರ ಮಡಿವಾಳರ ತಿಳಿಸಿದರು. 

ಗುಡ್ಡದಲ್ಲಿ 120 ಮಂದಿ ನಿಯಮಿತವಾಗಿ ಕೆಲಸ ಮಾಡುತ್ತಾರೆ. 45 ಸ್ವಚ್ಛತಾ ಕಾರ್ಮಿಕರಿದ್ದಾರೆ. ಇದಲ್ಲದೆ ಬೇಡಿಕೆ ಅನುಸಾರವಾಗಿ ಹಂಗಾಮಿ ಸಿಬ್ಬಂದಿ ಬಳಸಿಕೊಳ್ಳಲು ಯೋಜಿಸಿದ್ದಾರೆ. ದೇವಸ್ಥಾನ, ದೇವಸ್ಥಾನದ ಪ್ರಾಂಗಣ, ಟಿಕೆಟ್ ಕೌಂಟರ್ ಆಯಕಟ್ಟಿನ ಸ್ಥಳಗಳಲ್ಲಿ 68 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.