ಶೇಡಬಾಳ ಮಾಯಕ್ಕ ದೇವಿ ಎರೆಕೆರೆ ದೇವಸ್ಥಾನದಲ್ಲಿ ಜಾತ್ರೆ ಸಂಪನ್ನ

ಶೇಡಬಾಳ ಮಾಯಕ್ಕ ದೇವಿ ಎರೆಕೆರೆ ದೇವಸ್ಥಾನದಲ್ಲಿ ಜಾತ್ರೆ ಸಂಪನ್ನ Fair is auspicious at Shedbal Mayakka Devi Erekere Temple

ಕಾಗವಾಡ: ತಾಲೂಕಿನ ಶೇಡಬಾಳ ಪಟ್ಟಣದ ಮಾಯಕ್ಕಾ ದೇವಿ ಎರೆಕೆರೆ ದೇವಸ್ಥಾನದಲ್ಲಿ ಬುಧವಾರ ದಿ. 4ರಂದು ಜಾತ್ರೆಯು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇತಿಹಾಸ ಕಾಲದಿಂದಲೂ ಮಾಯಕ್ಕಾ ದೇವಿಯು ಚಿಂಚಲಿ ಗ್ರಾಮಕ್ಕೆ ತೆರಳುವಾಗ ಶೇಡಬಾಳ ಪಟ್ಟಣದ ಮಾಯವ್ವನ ಕೆರೆ ಹತ್ತಿರ ವಾಸ್ತವ ಹೂಡಿದ್ದರು ಎಂದು ಪ್ರತೀತಿಯಿದೆ. ಇಲ್ಲಿ ಅನೇಕ ವರ್ಷದಿಂದ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತ ಬಂದಿರುತ್ತದೆ.  

ಮಾಯಕ್ಕಾ ದೇವಿ ಅರ್ಚಕ ಶ್ರೀಕಾಂತ ಕೋಳಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಬಿರೇಶ್ವರ ಮಂದಿರದಿಂದ ಪಲ್ಲಕ್ಕಿಯು ಮಾಯಕ್ಕಾ ದೇವಿ ಮಂದಿರಕ್ಕೆ ವಾದ್ಯವೃಂದಗಳೊಂದಿಗೆ ಕುಂಭ ಹೊತ್ತ ಮಹಿಳಾ ಭಕ್ತರು ಸೇರಿ ಮೆರವಣಿಗೆಯಲ್ಲಿ ಪಾಲ್ಗೊಂಡು, ಮಾಯಕ್ಕಾ ದೇವಿ ಮಂದಿರಕ್ಕೆ ಆಗಮಿಸುತ್ತಾರೆ. ವಿಶೇಷವಾಗಿ ಶೇಡಬಾಳ ಪಟ್ಟಣದ ಗೌಡರ ಮನೆತನದವರು ಸೇರಿದಂತೆ ಎಲ್ಲ ವರ್ಗದವರು ಸೇರಿ ಜಾತಿ ಮತ ಭೇದಭಾವವಿಲ್ಲದೇ ಜಾತ್ರೆಯಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸುತ್ತಾರೆ. 

ಬಿರೇಶ್ವರ ಮಂದಿರದ ಪೂಜಾರಿಗಳಾದ ಮಹಾದೇವ ಕಟ್ಟಿಕರ, ಮಾಳಿಂಗರಾಯ ಪೂಜಾರಿ, ಮಹಾದೇವ ದೇವಋಷಿ, ಸುರೇಶ ದೇವಋಷಿ ಅವರು ದೇವಿಯ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ, ಈ ವರ್ಷ ಮಳೆ-ಬೆಳೆ ಕುರಿತು ಭವಿಷ್ಯ ನುಡಿದರು. 

ವಿನೋದ ಪಾಟೀಲ, ಸುನೀಲ ಪಾಟೀಲ, ಶುಭಂ ಪಾಟೀಲ, ಅಣ್ಣಾ ಅರವಾಡೆ, ಜಗದೀಶ ಕನಗಲೆ, ಪರಸು ಕಟಗೇರಿ, ಶಂಕರ ವಾಸರ, ಅಜೀತ ಪೂಜಾರಿ, ಸಂತೋಶ ಕೆಂಪವಾಡೆ, ಅಮೀತ ಉಗಾರೆ, ಗಣಪತಿ ಅಲಗೂರೆ, ರವಿ ಕಾತ್ರಾಳೆ, ಶ್ರೀಶೈಲ ಗಸ್ತಿ, ಮುತ್ತು ಬಡಚಿ ಸೇರಿದಂತೆ ಸಾವಿರಾರು ಭಕ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯ ಮಹಿಳೆಯರು ಉಪಸ್ಥಿತರಿದ್ದರು. ನಂತರ ಎಲ್ಲ ಭಕ್ತರಿಗೂ ಮಹಾಪ್ರಸಾದ ನೆರವೇರಿತು.