ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು

ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು Everyone should take care to enhance coexistence and human values

                 ಹಾನಗಲ್ 12 : ಧಾರ್ಮಿಕ ಆಚರಣೆ, ವೃತಗಳು ಸಮುದಾಯದಲ್ಲಿ ಏಕತೆ ಹಾಗೂ ಸಕಾರಾತ್ಮಕ ಚಿಂತನೆ ಬೆಳೆಸುವಲ್ಲಿ ಸಹಕಾರಿಯಾಗಿವೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.  ಇಲ್ಲಿನ ಗಂಗಾನಗರದ ವಿರಾಟನಗರ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅವರು ಸಮಾಜದಲ್ಲಿ ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರತಿಯೊಬ್ಬರೂ ಸಹ ಕಾಳಜಿ ವಹಿಸಬೇಕಿದೆ. ಇಂದು ಸಮಾಜ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಧಾರ್ಮಿಕ ಮೌಲ್ಯಗಳು ಸರಿದಾರಿ ತೋರಲಿವೆ.

                ಅಯ್ಯಪ್ಪಸ್ವಾಮಿಯ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಮಂತ್ರ ಜಾತಿ, ಮತ, ಭಾಷೆ ಎಂಬ ಬೇಧಗಳನ್ನು ಮೀರಿ ಮಾನವೀಯತೆ ಮತ್ತು ಸಮಾನತೆಯ ಸಂದೇಶ ಸಾರುತ್ತದೆ. 41 ದಿನಗಳ ವೃತಾಚರಣೆ, ಪರಿಶುದ್ಧ ಜೀವನಶೈಲಿ ಮತ್ತು ಆತ್ಮ ನಿಯಂತ್ರಣದ ಮೂಲಕ ಭಕ್ತನು ತನ್ನೊಳಗಿನ ಶಕ್ತಿಯನ್ನು ಅರಿಯಲು ಈ ಆರಾಧನೆ ಪ್ರೇರೇಪಿಸಲಿದೆ. ಇದು ಕೇವಲ ಧಾರ್ಮಿಕ ಆಚರಣೆ ಅಲ್ಲದೇ ವ್ಯಕ್ತಿತ್ವ ನಿರ್ಮಾಣದ ಮಾರ್ಗವಾಗಿದೆ ಎಂದು ತಿಳಿಸಿದರು.  ರಮೇಶ ಗುರುಸ್ವಾಮಿ, ತ್ಯಾಗರಾಜ ಗುರುಸ್ವಾಮಿ, ಮೇಲಾರಸ್ವಾಮಿ, ಬಾಬುಗೌಡಸ್ವಾಮಿ, ನಾಗರಾಜಸ್ವಾಮಿ, ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ರವಿ ದೇಶಪಾಂಡೆ, ಆದರ್ಶ ಶೆಟ್ಟಿ ಸೇರಿದಂತೆ ಅನೇಕರಿದ್ದರು.