ಶಿಕ್ಷಣ ಜಗತ್ತಿನಲ್ಲಿಯೇ ಶ್ರೇಷ್ಠ ಸಂಪತ್ತು: ಬಸವಪ್ರಭು ಕಲ್ಮಠ ಶ್ರೀಗಳು
ರನ್ನ ಬೆಳಗಲಿ 06: ಜಗತ್ತಿನಲ್ಲಿಯೇ ಶ್ರೇಷ್ಠ ಸಂಪತ್ತು ಶಿಕ್ಷಣವಾಗಿದೆ. ವಿದ್ಯಾರ್ಥಿ ಜೀವನವು ಬಂಗಾರಮಯ ವಾಗಬೇಕಾದರೆ ಶಿಕ್ಷಣವನ್ನು ಕಲಿಯುವಾಗ, ಕಷ್ಟ ಪಡಲೇಬೇಕು. ಅಂದಾಗ ಮುಂದಿನ ಜೀವನ ಆನಂದ ದಾಯಕವಾಗುತ್ತದೆ ಎಂದು ಬಸವ ಪ್ರಭು ಕಲ್ಮಠ ಶ್ರೀಗಳು ತಿಳಿಸಿದರು. ಪಟ್ಟಣದ ನೆರೆಯ ಗ್ರಾಮ ನಾಗರಾಳ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ ಬನದ ವಸತಿ ಶಾಲೆಯಲ್ಲಿ ಮಂಗಳವಾರ ಜರುಗಿದ 5ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮಾನಂದ ನಾಗರಾಳ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಪತ್ರಕರ್ತರು, ಅಂಕಣಕಾರ ಮಲ್ಲಿಕಾರ್ಜುನ ಹೆಗ್ಗಳಗಿ ಪಾಲಕರ ಪೋಷಕರ ಕುರಿತು ಮಾತನಾಡುತ್ತಾ ಮನೆಗೆ ಹೊಂದಿಕೊಂಡಿರುವ ಹತ್ತಿರದಲ್ಲಿರುವ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಕ್ಕಳು ಮುಗಿಸುವಂತೆ ಜಾಗೃತಿ ವಹಿಸಬೇಕು. ನಮ್ಮ ಆಡಂಬರಕ್ಕಾಗಿ ಬಹಳ ಬಹಳ ದೂರದ ಶಾಲೆಗಳಿಗೆ ಸೇರಿಸಿ, ಲಕ್ಷ ಲಕ್ಷ ರೂಪಾಯಿಗಳನ್ನು ಖಾಸಗಿ ಶಾಲಾ ಶಿಕ್ಷಣ ಹೆಸರಲ್ಲಿ ಖರ್ಚು ಮಾಡುವುದು, ಒಂದು ಆಡಂಬರವಾಗಿದೆ. ಪಾಲಕರಿಂದ ಮಕ್ಕಳು ದೂರವಾದರೆ ಅವರು ಅನಾಥ ಭಾವದಿಂದ ಬದುಕಿ ತದನಂತರ ನಿಮ್ಮನ್ನು ದೂರ ಮಾಡುತ್ತಾರೆ ಎಂದು ಮಾರ್ಮಿಕವಾಗಿ ತಿಳಿಸಿಕೊಟ್ಟರು. ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ವಿದ್ಯಾರ್ಥಿ ಜೀವನದ ಉತ್ತಮ ಲಕ್ಷಣದ ಕುರಿತು. ನಿವೃತ್ತ ತಹಸಿಲ್ದಾರರಾದ ಡಿ ಜೆ ಸಮಾಜ ಕುಟುಂಬ ಮತ್ತು ಮಕ್ಕಳ ಪಾಲನೆ ಕುರಿತು. ಹಿರಿಯ ಬಯಲಾಟ ಕಲಾವಿದರಾದ ಕೃಷ್ಣಪ್ಪ ಪೂಜಾರ ಕಲಿಕೆ ಜೊತೆಗೆ ಗ್ರಾಮೀಣ ಕ್ರೀಡೆ ಮತ್ತು ಜಾನಪದ ಕಲಾ ಪ್ರತಿಭೆಗಳನ್ನು ಮಕ್ಕಳ್ಳಿ ಗುರುತಿಸಿ ಉತ್ತಮ ಕಲಾವಿದರನ್ನಾಗಿ ರೂಪಿಸುವ ಕುರಿತು ಮಾತನಾಡಿದರು. ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಗೌರವಿಸಿ ಸತ್ಕರಿಸಿದರು. 5 ಲಕ್ಷ ರೂಪಾಯಿ ಮೊತ್ತದ ಹೈಟೆಕ್ ಶೌಚಾಲಯವನ್ನು ಶ್ರೀಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲು ಜಗದಾಳ ಉದ್ಘಾಟಿಸಿದರು. ನಿವೃತ್ತ ಸೈನಿಕ ಬಸವರಾಜ ಬಳಿಗಾರ, ಮಾಧವಾನಂದ ಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಯಡಹಳ್ಳಿ, ಆದಮ್ ಮಕಾನದಾರ, ಮಲ್ಲಪ್ಪ ಹಸಬಿ, ಸಿದ್ದಪ್ಪ ನಾಗರಾಳ, ರಾಮಣ್ಣ ಶೆಂಡಗಿ ಇನ್ನಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಜಯಪ್ರಕಾಶ ಆನೂರ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕ ಪಿ ಆರ್ ಮಲ್ಲಾರಿ ವಂದಿಸಿದರು.