ರಸ್ತೆ ಅಪಘಾತದಲ್ಲಿ ಮೃತ ಶ್ವಾನಕ್ಕೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಹಾವೇರಿ 03 : ಬಾಂಬ್/ಸ್ಪೋಟಕ ಪತ್ತೇ ದಳದಲ್ಲಿ ಪರಿಣಿತಿ ಹೊಂದಿ, ಹಾವೇರಿ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕನಕ ಎಂಬ ಶ್ವಾನವು, ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ಸಕಲ ಸರ್ಕಾರಿ ಗೌರದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಈ ಶ್ವಾನವು ಲ್ಯಾಬ್ರಡರ್ ರಿಟ್ರಿವರ್ ಎಂಬ ತಳಿಯಾದ್ದಾಗಿತ್ತು. ಬೆಂಗಳೂರಿನಲ್ಲಿ 2019 ರಲ್ಲಿ 07 ತಿಂಗಳುಗಳ ಕಾಲ ತರಬೇತಿ ಪಡೆದು ನಂತರ ಹಾವೇರಿ ಜಿಲ್ಲೆಯಲ್ಲಿ ಕರ್ತವ್ಯಮಾಡುತ್ತಿತ್ತು. ಈ ಶ್ವಾನವು ಮೈಸೂರು ದಸರಾ, ಹಂಪಿ ಉತ್ಸವ, ಬೆಳಗಾವಿ ಅಧಿವೇಶನ, ವೈಮಾನಿಕ ಪ್ರದರ್ಶನ ಬೆಂಗಳೂರು ಮತ್ತು 2023 ರ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2024ನೇ ಸಾಲಿನ ಲೋಕಸಭಾ ಚುನಾವಣೆ ಕರ್ತವ್ಯ, ಸನ್ಮಾನ್ಯ ಪ್ರಧಾನ ಮಂತ್ರಿಗಳ ಬಂದೋಬಸ್ತ ಕರ್ತವ್ಯ ಹಾಗೂ ಅನೇಕ ಗಣ್ಯ ವ್ಯಕ್ತಿಗಳ ಬಂದೋಬಸ್ತ ಕರ್ತವ್ಯ ಹೀಗೆ ಒಟ್ಟು 80 ಕ್ಕಿಂತ ಹೆಚ್ಚು ಕಾರ್ಯಕ್ರಮಗಳ ಬಂದೋಬಸ್ತ್ರ ಕರ್ತವ್ಯ ನಿರ್ವಹಿಸಿರುತ್ತದೆ. ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಕರ್ತವ್ಯಕ್ಕೆ ಎ.ಎಸ್.ಸಿ ತಂಡದೊಂದಿಗೆ ತೆರಳಿದ್ದ ಶ್ವಾನವು ಮಾರ್ಚ್ 2 ಬೆಳಿಗ್ಗೆ ವಾಕಿಂಗ್ಗೆ ತೆರಳಿದ ಸಂದರ್ಭದಲ್ಲಿ ಕಮಲಾಪುರ ಕಡೆಯಿಂದ ಬರುತ್ತಿದ್ದ ಸಿಂಧನೂರು ಡೀಪೋದ ಕೆ.ಎಸ್.ಆರ್.ಟಿ.ಸಿ ಬಸ್, ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಶ್ವಾನಕ್ಕೆ ಡಿಕ್ಕಿ ಪಡಿಸಿದ ಅಂಗವಾಗಿ ಗಂಭೀರವಾಗಿ ಗಾಯಗೊಂಡ ಶ್ವಾನವನ್ನು ಚಿಕಿತ್ಸೆಗೆ ಹೊಸಪೇಟೆ ಪಶು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಸಹ ಚಿಕಿತ್ಸೆ ಫಲಿಸದೇ ಮೃತಪಟ್ಟಿತ್ತು. ಕನಕ ಶ್ವಾನವು ಹಾವೇರಿ ಜಿಲ್ಲಾ ಪೊಲೀಸ್ ಘಟಕದಲ್ಲಿ ಪ್ರಮುಖ ಬಂದೋಬಸ್ತಗಳ ನಿರ್ವಹಣೆಯನ್ನು ತುಂಬಾ ಯಶಸ್ವಿಯಾಗಿ ನಿರ್ವಹಿಸಿರುತ್ತದೆ. ಕನಕ ಶ್ವಾನದ ಮೃತಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ಘಟಕದಿಂದ ಸಂತಾಪ ಸೂಚಿಸಲಾಗಿದೆ.