ವಿಪತ್ತು ನಿರ್ವಹಣಾ ಅಣುಕು ಪ್ರದರ್ಶನ ಸಾರ್ವಜನಿಕರಿಗೆ ಗ್ಯಾಸ್ ಸೋರಿಕೆ ಬಗ್ಗೆ ಅರಿವು ಮೂಡಿಸುವುದು ಅವಶ್ಯ -ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ.

Disaster Management Nuclear Demonstration is necessary to make the public aware of gas leakage -Dis

ವಿಪತ್ತು ನಿರ್ವಹಣಾ ಅಣುಕು ಪ್ರದರ್ಶನ ಸಾರ್ವಜನಿಕರಿಗೆ ಗ್ಯಾಸ್ ಸೋರಿಕೆ ಬಗ್ಗೆ ಅರಿವು ಮೂಡಿಸುವುದು ಅವಶ್ಯ -ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ. 

ಹುಬ್ಬಳ್ಳಿ 29: ಸಾರ್ವಜನಿಕರಿಗೆ ಗ್ಯಾಸ್ ಸೋರಿಕೆ ಬಗ್ಗೆ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಜಿ.ಆರ್‌.ಜೆ ಹೇಳಿದರು.  

ಇಂದು ಶಲವಡಿಯ ಜಿಎಐಎಲ್ (ನ್ಯಾಚುರಲ್ ಗ್ಯಾಸ್ ಟ್ರಾನ್ಸಮಿಷನ್ ಕಂಪನಿ) ಇಂಡಿಯಾ ಲಿಮಿಟೆಡ್ ಮುಂಭಾಗದಲ್ಲಿ ಧಾರವಾಡ ಜಿಲ್ಲೆಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಜಿಎಐಎಲ್ (ನ್ಯಾಚುರಲ್ ಗ್ಯಾಸ್ ಟ್ರಾನ್ಸಮಿಷನ್ ಕಂಪನಿ) ಇಂಡಿಯಾ ಲಿಮಿಟೆಡ್ ವತಿಯಿಂದ ವಿಪತ್ತು ನಿರ್ವಹಣೆ ಅಣುಕು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಜಿಎಐಎಲ್ (ನ್ಯಾಚುರಲ್ ಗ್ಯಾಸ್ ಟ್ರಾನ್ಸಮಿಷನ್ ಕಂಪನಿ) ಇಂಡಿಯಾ ಲಿಮಿಟೆಡ್ ವತಿಯಿಂದ ಪ್ರತಿ ವರ್ಷ ಸಹ ಗ್ಯಾಸ್ ಸೋರಿಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅದರಂತೆ ಈ ವರ್ಷ ಸಹ ಶಲವಡಿ ಗ್ರಾಮದಲ್ಲಿ ಅಣುಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಗ್ಯಾಸ್ ಸೋರಿಕೆಯಾದಾಗ ಜನರು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಬೇಕಿದೆ. ಯಾವುದೇ ರೀತಿಯ ಜೀವ ಹಾನಿ ಹಾಗೂ ಆಸ್ತಿ ಹಾನಿ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿಯಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ಮೊದಲ ಹಂತ, ಎರಡನೇ ಹಂತ ಮತ್ತು ಮೂರನೇ ಹಂತದಲ್ಲಿ ಗ್ಯಾಸ್ ಸೋರಿಕೆ ಆದಾಗ ಯಾವ ರೀತಿಯಲ್ಲಿ ತಡೆಗಟ್ಟಬೇಕು ಎನ್ನುವುದರ ಬಗ್ಗೆ ತಿಳಿಸಲಾಯಿತು. ಅಲ್ಲದೇ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಣುಕು ಪ್ರದರ್ಶನದ ಮೂಲಕ ಜನರಿಗೆ ತಿಳಿಯಪಡಿಸಲಾಯಿತು ಎಂದರು.  

ಅಣುಕು ಪ್ರದರ್ಶನದ ಕುರಿತು ಜನರು ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಅಲ್ಲದೇ ಅವಘಡ ನಡೆದಾಗ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಸಣ್ಣ ವಿಡಿಯೋ ತುಣುಕಗಳ ಮೂಲಕ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ 30 ಮೀಟರ್‌ಗೆ ಒಂದು ಕಲ್ಲು ಅಳವಡಿಸಲಾಗಿದ್ದು, ಅದರಲ್ಲಿ ಮಾಹಿತಿ ಒದಗಿಸಲಾಗಿದೆ. ಪ್ರತಿ 1 ಕಿ.ಮೀ.ಗೆ ಸೂಚನಾ ಫಲಕವನ್ನು ಸಹ ಅಳವಡಿಸಲಾಗಿರುತ್ತದೆ. ಗ್ಯಾಸ್ ಸೋರಿಕೆಯಾದರೆ ಯಾವ ಸಂಖ್ಯೆಗೆ ಕರೆ ಮಾಡಬೇಕು ಎಂಬುದನ್ನು ಸಹ ತಿಳಿಯಪಡಿಸಲಾಗಿದೆ ಎಂದು ಅವರು ತಿಳಿಸಿದರು. 

ರೈತರು ಕೃಷಿ ಭೂಮಿಯಲ್ಲಿ ಬೋರವೆಲ್ ಕೊರೆಸುವಾಗ ಗ್ಯಾಸ್ ಪೈಪ್‌ಲೈನ್ ಒಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೇ ಚರಂಡಿ, ವಿದ್ಯುತ್ ಕಂಬ ಅಳವಡಿಕೆ ಹಾಗೂ ಇತರೆ ಪೈಪ್‌ಲೈನ್ ಕಾಮಗಾರಿಗಳನ್ನು ಕೈಗೊಳ್ಳುವಾಗಲೂ ಸಹ ಗ್ಯಾಸ್ ಪೈಪ್‌ಲೈನ್ ಒಡೆಯಬಹುದಾಗಿದೆ. ಹೀಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಸಂಘಟನೆಗಳು ಹಾಗೂ ಜನರಿಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.  


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಮಾತನಾಡಿ, ಗ್ಯಾಸ್ ಸೋರಿಕೆ ಪ್ರಕರಣಗಳನ್ನು ಸಂಭವಿಸಿದಾಗ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿರುತ್ತದೆ. ಗ್ಯಾಸ್ ಸೋರಿಕೆ ಸ್ಥಳದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಬೇಕು. ಗ್ಯಾಸ್ ಬಳಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಾರ್ವಜನಿಕರಿಗೆ ಗ್ಯಾಸ್ ಸೋರಿಕೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು. 

ಜಿಎಐಎಲ್ ಇಂಡಿಯಾ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕರಾದ ಸುಮಿತ ಶ್ರೀವಾಸ್ತವ ಮಾತನಾಡಿ, ಮಹಾರಾಷ್ಟ್ರದ ದಾಭೋಲ್‌ನಿಂದ ಕರ್ನಾಟಕದ ಬೆಂಗಳೂರಿನವರೆಗೆ ನೈಸರ್ಗಿಕ ಅನಿಲ ಪೈಪ್‌ಲೈನ್ ಅಳವಡಿಸಲಾಗಿದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಾದು ಹೋಗಿದೆ. ಇದು ಸುಮಾರು 1100 ಕಿ.ಮೀ.ವರೆಗೆ ಕರ್ನಾಟಕದಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ ಸರಿಸುಮಾರು 140 ಕಿ.ಮೀ.ನಷ್ಟು ಅಳವಡಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಗ್ಯಾಸ್ ಸೋರಿಕೆ ಕುರಿತು ಅಣುಕು ಪ್ರದರ್ಶನವನ್ನು ಏರಿ​‍್ಡಸಲಾಗಿದೆ ಎಂದು ತಿಳಿಸಿದರು.  


ಈ ಸಂದರ್ಭದಲ್ಲಿ ಜಿಎಐಎಲ್ ಇಂಡಿಯಾ ಲಿಮಿಟೆಡ್, ಅಗ್ನಿ ಶಾಮಕ ದಳ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳು ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದವು.  


ಕಾರ್ಯಕ್ರಮದಲ್ಲಿ ಅಣ್ಣಿಗೇರಿ ತಹಶೀಲ್ದಾರರಾದ ಮಂಜುನಾಥ ದಾಸಪ್ಪನವರ, ನವಲಗುಂದ ತಹಶೀಲ್ದಾರರಾದ ಸುಧೀರ ಸಾಹುಕಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ್, ಜಿಎಐಎಲ್ ಇಂಡಿಯಾ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕರಾದ ಪಿ. ನಂದಗೋಪಾಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.