ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ನಿಗದಿ ಪಡಿಸಲು ಆಗ್ರಹ

ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ನಿಗದಿ ಪಡಿಸಲು ಆಗ್ರಹ Demand for fixing appropriate price for maize


 ನರೇಗಲ್  07: ಬಯಲು ಸೀಮೆಯ ಒಣ ಬೇಸಾಯದ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ನಿಗದಿ ಪಡಿಸಿ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ರೈತ ಮುಖಂಡ ಗೀರೀಶ ವಿರೂಪಾಕ್ಷಪ್ಪ ಹೆಗ್ಗಡದಿನ್ನಿ ಆಗ್ರಹಿಸಿದರು.  ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರ ಕೇವಲ ಕಬ್ಬು ಬೆಳೆಯುವ ರೈತರ ಬಗ್ಗೆ ಮಾತ್ರ ಮಾತನಾಡುತ್ತಿದೆ, ಆದರೆ ಇತರೆ ಬೆಳೆ ಬೆಳೆದವರನ್ನು ನಿರ್ಲಕ್ಷಿಸುತ್ತಿದೆ. ರಾಜ್ಯದ ಪ್ರತಿಯೊಂದು ಭಾಗದ ಮಣ್ಣಿಗೂ ತನ್ನದೆಯಾದ ಗುಣಲಕ್ಷ್ಣವಿದೆ. ಅದರಂತೆ ಆಯಾ ಭಾಗದಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಮುಂಗಾರಿನ ಅತಿವೃಷ್ಟಿಯಲ್ಲಿ ಸಿಲುಕಿ ಪರದಾಡಿರುವ ರೈತರಿಗೆ ಸೂಕ್ತ ದರ ಸಿಕ್ಕಿಲ್ಲ. ಪ್ರತಿ ವರ್ಷ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ ?2200 ಕ್ಕೂ ಹೆಚ್ಚು ಬೆಲೆ ನೀಡುತ್ತಿದ್ದರು. ಆದರೆ ಈ ಬಾರಿ ರೈತರು ಸೂಕ್ತ ದರ ಸಿಗದ ಕಾರಣ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ಕೇವಲ ?1700 ಗೆ ಕೊಡುವ ಮೂಲಕ ಕೈ ಸುಟ್ಟುಕೊಂಡಿದ್ದಾರೆ.   ಇದರಿಂದಾಗಿ ರೈತರು ಬೀಜ, ಗೊಬ್ಬರ, ಕೂಲಿ, ರಂಟೆ, ಕುಂಟೆ ಸೇರಿದಂತೆ ಕೃಷಿ ಚಟುವಟಿಕೆಗಾಗಿ ಮಾಡಿದ ಖರ್ಚು ಸಿಗದಂತಾಗಿದೆ. ಆದ್ದರಿಂದ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ  2400ಕ್ಕಿಂತ ಹೆಚ್ಚಿನ ದರ ನಿಗದಿಪಡಿಸಬೇಕು ಮತ್ತು ಆದಷ್ಟು ಬೇಗನೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.