ಡೆಂಗೀ ನಿಂಯತ್ರಣಕ್ಕೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಡಿಸಿ ಸೂಚನೆ

ಡೆಂಗೀ ನಿಂಯತ್ರಣಕ್ಕೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಡಿಸಿ ಸೂಚನೆ DC instructs all departments to work in coordination to control dengue

ಲೋಕದರ್ಶನ ವರದಿ 

            ಹಾವೇರಿ  06: ನಿಂತ ನೀರಿನಲ್ಲಿ ಈಡೀಸ್  ಈಜಿಪ್ತಿ ಸೊಳ್ಳೆ ಉತ್ಪಾದನೆಯಿಂದ ಡೆಂಗೀ  ಹರಡುವ ಸಾಧ್ಯತೆ ಇದ್ದು,  ಡೆಂಗೀ ತಡೆಗೆ  ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಹಾಗೂ ಜಿಲ್ಲೆಯಲ್ಲಿ ಡೆಂಗೀ ನಿಂಯತ್ರಣಕ್ಕೆ ಆರೋಗ್ಯ ಇಲಾಖೆ ಜೊತೆಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು  ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು  ಘನತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿಮಾಡಬೇಕು ಹಾಗೂ ಗಟಾರುಗಳಲ್ಲಿ ನೀರು ಸರಿಯಾಗಿ ಹರಿದು ಹೋಗುವಂತೆ ಕ್ರಮವಹಿಸಬೇಕು ಎಂದು ತಿಳಿಸಿದರು. ಡೆಂಗಿ ನಿಯಂತ್ರಣಕ್ಕೆ ಕೈಜೋಡಿಸಿ: ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲ್ಛಾವಣಿ, ಕಲ್ಲು ಗಣಿಗಾರಿಕೆ ಮತ್ತು ಕೃಷಿ ಹೊಂಡಗಳಲ್ಲಿ, ಕೆ.ಎಸ್‌.ಆರ್‌.ಟಿ.ಸಿ. ಡಿಪೋಗಳಲ್ಲಿನ ಟೈಯರ್‌ನಲ್ಲಿ ನೀರು ನಿಂತು ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.  ಡೆಂಗಿ ತಡೆಗೆ  ಆರೋಗ್ಯ ಇಲಾಖೆಯೊಂದಿಗೆ ಸಾರಿಗೆ ಇಲಾಖೆ, ಕೃಷಿ, ತೋಟಗಾರಿಕೆ,  ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೈಜೋಡಿಸಬೇಕು ಎಂದು ಸೂಚನೆ ನೀಡಿದರು. 

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಜಗದೀಶ್ ಪಾಟೀಲ ಅವರು ಮಾತನಾಡಿ,  ಜನವರಿಯಿಂದ ಮಾರ್ಚ್‌ ಮಾಹೆ ವರೆಗೆ ಜಿಲ್ಲೆಯಲ್ಲಿ ಆರು ಡೆಂಗಿ ಪ್ರಕರಣಗಳು ಹಾಗೂ ಮೂರು ಚಿಕುನ್‌ಗುನ್ಯಾ ಪ್ರಕರಣಗಳು  ಪತ್ತೆಯಾಗಿವೆ. ಡೆಂಗಿ ಈಡೀಸ್ ಈಜಿಪ್ತಿ ಸೊಳ್ಳೆ ಹಗಲು ಹೊತ್ತು ಕಚ್ಚುವುದರಿಂದ  ಡೆಂಗಿ ಜ್ವರ ಬರುತ್ತದೆ.  ಇದು ಸಂಗ್ರಹಿಸಿದ ಸ್ವಚ್ಛ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. ಹಾಗಾಗಿ ಸಾರ್ವಜನಿಕ ಸ್ಥಳಗಳು, ಕಚೇರಿ ಹಾಗೂ ಮನೆ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮವಹಿಸಬೇಕು.  ಮನೆಗಳಲ್ಲಿ ಡ್ರಮ್ಮು, ಬ್ಯಾರಲ್, ಸಿಮೆಂಟ್ ತೊಟ್ಟಿ, ಕಲ್ಲುಬಾನಿ, ಟೈಯರ್, ತೆಂಗಿನ ಚಿಪ್ಪು ಹಾಗೂ ಇತರೆ ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದರು. 

ಜಿಲ್ಲೆಯಲ್ಲಿರುವ ಕೆರೆ, ಹೊಂಡ, ಬಾವಿ ಹಳ್ಳ ಮುಂತಾದ ನೀರಿನ ಮೂಲಗಳಿಗೆ  ಡೆಂಗಿ ಲಾರ್ವಾಹಾರಿ  ಗಪ್ಪಿ ಮತ್ತು ಗಂಬೂಸಿಯಾ ಮೀನುಗಳನ್ನು ಬಿಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಹೊಲ, ಗದ್ದೆ ಕಟ್ಟಡ, ನಿರ್ಮಾಣ ಪ್ರದೇಶ ಮತ್ತು ಇತರೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ, ಅಂಗನವಾಡಿ  ಹಾಗೂ ಶಾಲೆಗಳಲ್ಲಿ  ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಆರೋಗ್ಯ ಶಿಕ್ಷಣ ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಯಾನಂದ, ಡಾ. ಚನ್ನಬಸಯ್ಯ ವಿರಕ್ತ ಮಠ, ಡಾ.ಸರಿತಾ, ಡಾ. ನೀಲೇಶ, ತಾಲೂಕಾ ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.