ಸಹಕಾರವೇ ಯಶಸ್ವಿಗೆ ಕಾರಣ: ಎಸ್ ಬಿ ಕೆಂಬೋಗಿ

ಸಹಕಾರವೇ ಯಶಸ್ವಿಗೆ ಕಾರಣ: ಎಸ್ ಬಿ ಕೆಂಬೋಗಿ   Cooperation is the key to success: SB Kembogi

ಇಂಡಿ 10: ನಗರದ ಬಸವೇಶ್ವರ ವೃತ್ತದ ಬಳಿ ಕರ್ನಾಟಕ ರಾಜ್ಯ ರೈತ ಹಸಿರು ಸೇನೆ ಕಾರ್ಯಕರ್ತರು ಹಾಗೂ ರೈತ ಸಂಘದಿಂದ ಕಬ್ಬಿನ ಬೆಲೆ ನಿಗದಿ ಮಾಡಬೇಕು ಎಂದು ನ. 3ರಿಂದ 9ರವರೆಗೆ ನಡೆದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಸಹಕರಿಸಿ ಯಶಸ್ವಿಗೊಳಿಸಿದ ಸರ್ವರಿಗೂ ತುಂಬಾ ಧನ್ಯವಾದಗಳು ಎಂದು ಜಿಲ್ಲಾ ರೈತ ಹಸಿರು ಸೇನೆ ವಿಜಯಪೂರ ಜಿಲ್ಲಾ ಅಧ್ಯಕ್ಷ ಎಸ್ ಬಿ ಕೆಂಬೋಗಿ ಹೇಳಿದರು. ಇಂಡಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರಿಗೆ 3500 ರೂಪಾಯಿ ಬೆಲೆ ನಿಗದಿ ಮಾಡಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೆವೆ. ಸರಕಾರ ಒಂದು ಹಂತದಲ್ಲಿ ನಮಗೆ ಮೂರು ಸಾವಿರದ ಮೂರು ನೂರು ರೂಪಾಯಿ ಕೊಡಲು ಒಪ್ಪಿಕೊಂಡಿದ್ದು ಸಂತಸವಾಗಿದೆ. ನಮ್ಮ ಹೋರಾಟಕ್ಕೆ ಸಹಕರಿಸಿದ ವಕೀಲರ ಸಂಘ, ಎಪಿಎಮ್‌ಸಿ ವ್ಯಾಪಾರಸ್ಥರು, ಕರ್ನಾಟಕ ರಕ್ಷಣಾ ವೇದಿಕೆ, ಬಸವ ದಳ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಆಟೋಚಾಲಕರ ಸಂಘ ರೈತರಿಗೆ ಹಾಗೂ ಪಕ್ಷಾತೀತವಾಗಿ ಸಹಕರಿಸಿದ ಎಲ್ಲ ಪಕ್ಷದ ಮುಖಂಡರ ಸಹಕಾರ ಜನಸಾಮಾನ್ಯರ ಬೆಂಬಲದಿಂದ ನಮ್ಮ ಹೋರಾಟ ಯಶಸ್ವಿಯಾಗಲು ಕಾರಣವಾಯಿತು ಎಂದು ಹೇಳಿದರು.ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆ ಆಗಿದೆ ಬೆಳೆ ಹಾನಿ ಆಗಿದೆ ಆದರೂ ರೈತರಿಗೆ ಪರಿಹಾರ ನೀಡಬೇಕು. ಹಾಗೂ ಪ್ರಧಾನ ಮಂತ್ರಿ ಭೀಮಾ ಫಸಲು ಯೋಜನೆಯಡಿಯಲ್ಲಿ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಆ ಎಲ್ಲಾ ರೈತರಿಗೆ ಶೀಘದಲ್ಲಿ ಬೆಳೆ ವಿಮೆ ಹಣ ಕೊಡಬೇಕು  ಹಾಗೂ ಭವಿಷ್ಯದಲ್ಲಿ ಇಂಡಿ ಜಿಲ್ಲೆಯನ್ನಾಗಿ ಮಾಡುತ್ತೆನೆ ಎಂದು ಹೇಳುವ ಇಂಡಿ ಶಾಸಕರು ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸುಧಾರಣೆ ಮಾಡಬೇಕು. ಇಲ್ಲವಾದರೆ ನಾವು ಎಲ್ಲಾ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ತಾಲೂಕು ರೈತ ಸಂಘದ ಅಧ್ಯಕ್ಷ ಮಲ್ಲು ಗುಡ್ಲ ರೈತ ಸಂಘದ ಸದಸ್ಯರಾದ ಸಿದ್ದರಾಮ ತಳವಾರ, ಮಲ್ಲಿಕಾರ್ಜುನ ನಾವದಗಿ, ಮಲ್ಲಿಕಾರ್ಜುನ ಹೋರ್ತಿ, ಸೋಮನಾಥ ಗುಡ್ಲ, ತಮ್ಮರಾಯ ಆಳಸಂಗಿ, ಹಣಮಂತ ಗುಡ್ಲ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.