CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ cm-dcm ರನ್ನು ಮಾತುಕತೆಗೆ ಕರೆಯಲಾಗುವುದು

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ cm-dcm ರನ್ನು ಮಾತುಕತೆಗೆ ಕರೆಯಲಾಗುವುದು CM chair fight: CM-DCM will be called for talks when necessary


ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಅಗತ್ಯವಿದ್ದಾಗ ಚರ್ಚೆಗಾಗಿ ದೆಹಲಿಗೆ ಕರೆಯಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯನ್ನು ಮಾತುಕತೆಗಾಗಿ ದೆಹಲಿಗೆ ಯಾವಾಗ ಕರೆಸಲಾಗುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖರ್ಗೆ, 'ಅಗತ್ಯವಿದ್ದಾಗಲೆಲ್ಲ ಪಕ್ಷವು ಅವರನ್ನು ಕರೆಯುತ್ತದೆ' ಎಂದು ಹೇಳಿದರು.

ನವೆಂಬರ್ 20 ರಂದು ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧವನ್ನು ಪೂರ್ಣಗೊಳಿಸಿದ ನಂತರ ಮುಖ್ಯಮಂತ್ರಿ ಬದಲಾವಣೆಯ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿರುವ ನಡುವೆ, ಆಡಳಿತ ಪಕ್ಷದೊಳಗಿನ ಜಗಳ ತೀವ್ರಗೊಂಡಿದೆ.

2023ರಲ್ಲಿ ಸರ್ಕಾರ ರಚನೆಯಾದ ಸಮಯದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ನಡೆದಿದೆ ಎನ್ನಲಾದ 'ಅಧಿಕಾರ ಹಂಚಿಕೆ' ಒಪ್ಪಂದದಿಂದಾಗಿ ವಿಚಾರ ಮುನ್ನೆಲೆಗೆ ಬಂದಿದೆ.

ಇತ್ತೀಚೆಗೆ ದೇವರಾಜ್ ಅರಸ್ ಅವರ ದಾಖಲೆಯನ್ನು ಮುರಿದು ರಾಜ್ಯದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಖ್ಯಾತಿ ಪಡೆದಿರುವ ಸಿದ್ದರಾಮಯ್ಯ, ಐದು ವರ್ಷಗಳು ತಾವೇ ಮುಖ್ಯಮಂತ್ರಿಯಾಗಿರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಅಂತಿಮ ನಿರ್ಧಾರವು ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟದ್ದು ಎಂದಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಭಾನುವಾರ, ತಮ್ಮ ಕಠಿಣ ಪರಿಶ್ರಮವೇ ರಾಜಕೀಯದಲ್ಲಿ ತಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ ಮತ್ತು ಕಾಂಗ್ರೆಸ್ ಪಕ್ಷದ ಭವಿಷ್ಯದ ನಿರ್ಧಾರದ ಬಗ್ಗೆ ತಮಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ