ಕೇರಳ ರಾಜ್ಯಪಾಲರಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ದೂರು

ಕೇರಳ ರಾಜ್ಯಪಾಲರಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ದೂರು Border Development Authority complains to Kerala Governor


ಬೆಂಗಳೂರು: ಕೇರಳ ವಿಧಾನಸಭೆಯು ಇತ್ತೀಚೆಗೆ ಅನುಮೋದಿಸಿರುವಮಲಯಾಳಂ ಭಾಷಾ ವಿಧೇಯಕ- 2025’ಕ್ಕೆ ಅನುಮೋದನೆ ನೀಡದಂತೆ ಕೇರಳ ರಾಜ್ಯಪಾಲರಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ದೂರು ನೀಡಿದೆ.

ಬೆಂಗಳೂರಿನ ಕೋಗಿಲು ಬಡಾವಣೆ ಒತ್ತುವರಿ ತೆರವು ವಿಚಾರದಲ್ಲಿ ರಾಜಕಾರಣ ಮಾಡಲು ಬಂದಿದ್ದ ಕೇರಳ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮೂಲಕ ತೀಕ್ಷ್ಣವಾದ ತಿರುಗೇಟು ನೀಡಿದೆ. ಅಲ್ಲದೆ, ಕನ್ನಡ ಭಾಷೆಯ ರಕ್ಷಣೆಗೂ ಮುಂದಾಗಿದೆ.

ಬುಧವಾರದಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿರುವ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಹಾಗೂ ಪ್ರಾಧಿಕಾರದ ಸದಸ್ಯರ ನಿಯೋಗವು ಯಾವುದೇ ಕಾರಣಕ್ಕೂ ಸಂವಿಧಾನ ವಿರೋಧಿಯಾದ ಮಲಯಾಲಂ ಭಾಷಾ ವಿಧೇಯಕಕ್ಕೆ ಅನುಮೋದನೆ ನೀಡದಂತೆ ಮನವಿ ಮಾಡಿದೆ.

2017ರಲ್ಲಿ ಇದೇ ವಿಧೇಯಕ ಜಾರಿಗೆ ತರಲು ಪ್ರಯತ್ನಿಸಿದ್ದ ಕೇರಳದ ಪ್ರಯತ್ನಕ್ಕೆ ರಾಷ್ಟ್ರಪತಿಗಳು ಅವಕಾಶ ಕೊಟ್ಟಿರಲಿಲ್ಲ. ಮತ್ತೀಗ ಅದೇ ವಿಧೇಯಕನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ವಿಧೇಯಕವು ಅಸಾಂವಿಧಾನಿಕ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿರುವ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರ ವಿರುದ್ಧವಾಗಿದೆ. ಸಂವಿಧಾನದ 30, 347, 350, 350 () 350 (ಬಿ) ಪರಿಚ್ಛೇದಗಳಡಿ ಭಾಷಾ ಅಲ್ಪಸಂಖ್ಯಾತರಿಗೆ ನೀಡಿರುವ ಹಕ್ಕುಗಳ ಉಲ್ಲಂಘನೆಯಾಗಿದೆ.

ಮಲಯಾಲಂ ಭಾಷಾ ವಿಧೇಯಕದ ಸೆಕ್ಷನ್ 2 (6) ರಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10 ನೇ ತರಗತಿವರೆಗೆ ಮಲಯಾಲಂ ಭಾಷೆಯನ್ನು ಕಡ್ಡಾಯವಾಗಿ ಪ್ರಥಮ ಭಾಷೆಯಾಗಿ ತೆಗೆದುಕೊಳ್ಳಬೇಕೆಂದು ಹೇಳಿದೆ. ಬಲವಂತದಿಂದ ಮಲಯಾಲಂ ಭಾಷೆಯನ್ನು ಕನ್ನಡಿಗರು ಕಲಿಯಬೇಕಾದ ಒತ್ತಡವನ್ನು ಸರ್ಕಾರ ಹೇರುತ್ತಿದೆ ಎಂದು ದೂರಿದೆ.