ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್: ಬಾಲ್ಯದ ಶಿಕ್ಷಣ ಬದುಕಿನ ಬುತ್ತಿ - ಕೆ.ಲಿಂಗಾರೆಡ್ಡಿ
ಬಳ್ಳಾರಿ 01: ಪ್ರವಾಸದಲ್ಲಿ ದಾರಿ ಬುತ್ತಿ ಇರುವಂತೆ ಬದುಕಿನಲ್ಲಿ ಶಿಕ್ಷಣವೆಂಬ ಬುತ್ತಿ ಮಕ್ಕಳಿಗೆ ಅಗತ್ಯವಾಗಿ ಬೇಕು. ದಾರಿ ಬುತ್ತಿ ಬರಿದಾಗುತ್ತದೆ. ಬಾಳಬುತ್ತಿ ಜೀವಿತದ ಕೊನೆಯವರೆಗೆ ಉಳಿದು ಬರುತ್ತದೆ ಎಂದು ಗುಳ್ಯಂನ ಪಿರಾಮಿಡ್ ಮಾಸ್ಟರ್ ಕೆ.ಲಿಂಗಾರೆಡ್ಡಿ ನುಡಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಹಳೇ ಮೋಕಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 311ನೇ ಮಹಾಮನೆ ಶ್ರೀ ಕೆ.ಎಂ.ಗವಿಸಿದ್ಧಯ್ಯ, ಸರೋಜಮ್ಮ ದತ್ತಿ ಕಾರ್ಯಕ್ರಮದಲ್ಲಿ 'ಬಾಲ್ಯದ ಬಸವ ಚಿಂತನೆ, ಬಾಳಿಗೆ ಬಲ' ಎಂಬ ವಿಷಯದ ಬಗ್ಗೆ ಮಾತನಾಡುತ್ತಾ, ಬಾಲಕ ಬಸವಣ್ಣ ತನ್ನ ಮನೆಯ ಸಂಸ್ಕಾರದ ಜೊತೆಗೆ ಸಮಾಜದ ಆಗುಹೋಗುಗಳನ್ನು ಗಮನಿಸುತ್ತಾ, ಬೆಳೆದರು. ತಮಗೆ ಅರ್ಥವಾಗದ ವಿಷಯಗಳನ್ನು ಕೇಳಿ ತಿಳಿಯುವ ಮೂಲಕ ವೈಚಾರಿಕತೆಯನ್ನು ಮೈಗೂಡಿಸಿಕೊಂಡರು. ಇಂದಿನ ಮಕ್ಕಳು ಬಸವಣ್ಣನ ಬಾಲ್ಯದ ಚರಿತ್ರೆಯನ್ನು ಓದುವುದರಿಂದ ತಮ್ಮ ಬದುಕಿನಲ್ಲೂ ನೈತಿಕ ಬಲವನ್ನು ಪಡೆಯಬಲ್ಲರೆಂದು ಅಭಿಪ್ರಾಯಪಟ್ಟರು. ಶಾಲಾ ಪ್ರಭಾರಿ ಮುಖ್ಯಗುರುಗಳಾದ ರತ್ನಾ ನಾಯಕ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕತೆಗಾರ, ಸಾಹಿತಿ ಭುವನೇಶ್ವರ ರವರು ಉಪಸ್ಥಿತರಿದ್ದರು.
ಶಿಕ್ಷಕರಾದ ಕೆ.ಪಾಲಾಕ್ಷಪ್ಪ ವಚನ ಪ್ರಾರ್ಥನೆ ಮಾಡಿದರು. ವಿದ್ಯಾರ್ಥಿಗಳಾದ ಇಸ್ರೆಲ್ ಜಹಾನ್ ಮತ್ತು ರಕ್ಷಿತಾ ವಚನ ವಾಚನ ಮಾಡಿದರು. ಪರಿಷತ್ ಅಧ್ಯಕ್ಷರಾದ ಕೆ.ಬಿ.ಸಿದ್ದಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿ ಪರಿಚಯವನ್ನು ಮಾಡಿದರು. ಶಿಕ್ಷಕ ಬಸವರಾಜ ಸ್ವಾಗತ ಕೋರಿ, ಕಾರ್ಯಕ್ರಮ ನಿರೂಪಿಸಿದರು. ದ.ರಾ.ಬೇಂದ್ರೆಯವರ ಜನ್ಮದಿನಾಚರಣೆ, ಅತಿಥಿ ಸನ್ಮಾನದೊಂದಿಗೆ ಕಾರ್ಯಕ್ರಮ ಮಂಗಳಗೊಂಡಿತು.