ಬಳ್ಳಾರಿ: ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಗೆ ರಾಜ್ಯ ಕೃಷಿ ವಿಚಕ್ಷಣಾ ದಳ ತಂಡ ಭೇಟಿ ಪರೀಶೀಲನೆ

ಬಳ್ಳಾರಿ: ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಗೆ ರಾಜ್ಯ ಕೃಷಿ ವಿಚಕ್ಷಣಾ ದಳ ತಂಡ ಭೇಟಿ ಪರೀಶೀಲನೆ Bellary: State Agriculture Vigilance Team visits and inspects agricultural implement sales outlets

                   ಬಳ್ಳಾರಿ 09 :  ರಾಜ್ಯ ಕೃಷಿ ವಿಚಕ್ಷಣಾದಳ, ಕಲಬುರಗಿ ವಿಭಾಗದ ಜಂಟಿ ಕೃಷಿ ನಿರ್ದೇಶಕರ ನೇತೃತ್ವದ ತಂಡವು ಜಿಲ್ಲೆಯಲ್ಲಿ ಇತ್ತೀಚೆಗೆ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆ ಹಾಗೂ ಸಿ, ಎಫ್ ಗೋದಾಮುಗಳ ಮೇಲೆ ಅನಿರಿಕ್ಷೀತ ದಾಳಿ ನಡೆಸಿ ಪರೀಶೀಲನೆ ಕೈಗೊಂಡಿದ್ದು, ನಿಯಮಬಾಹಿರವಾಗಿ ರಸಗೊಬ್ಬರ/ಪೀಡೆನಾಶಕ ಮಾರಾಟ ಮಾಡಿದ ಮಳಿಗೆ ಮತ್ತು ಗೋದಾಮುಗಳಿಗೆ ನೋಟಿಸ್ ಜಾರಿ ಮಾಡಿದೆ. ಬಳ್ಳಾರಿಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಪ್ರಮುಖ ಕೃಷಿ ಬೆಳೆಗಳಾಗಿ ಭತ್ತ, ಮೆಕ್ಕೆ ಜೋಳ, ಜೋಳ, ತೊಗರಿ, ಕಡಲೆ ಮತ್ತು ತೋಟಗಾರಿಕೆ ಪ್ರಮುಖ ಬೆಳೆಗಳಾಗಿ ಮೆಣಸಿನಕಾಯಿ, ಅಂಜೂರ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೆಚ್ಚಿನ ಕೃಷಿ ಪ್ರದೇಶ ತುಂಗಭದ್ರ ಅಚ್ಚುಕಟ್ಟು ಪ್ರದೇಶವಾಗಿದ್ದು, ಮೂರು ಹಂಗಾಮುಗಳಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿದೆ.

                  ಬೆಳೆಗಳಿಗೆ ಸಕಾಲದಲ್ಲಿ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ರೈತರಿಗೆ ಅಗತ್ಯ ಪ್ರಮಾಣದಲ್ಲಿ ದೊರಕುವಂತೆ ಮಾಡುವುದು ಕೃಷಿ ಇಲಾಖೆಯ ಪ್ರಮುಖ ಕರ್ತವ್ಯವಾಗಿದೆ.ರಾಜ್ಯ ಕೃಷಿ ವಿಚಕ್ಷಣಾ ದಳ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಶಿವಕುಮಾರ್ ಅವರು ಮಾತನಾಡಿ, ವಿವಿಧ ಸಂಸ್ಥೆಗಳ ಬಯೋಸ್ಟಿಮ್ಯುಲಂಟ್‌/ಜೈವಿಕ ಗೊಬ್ಬರ ಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡುತ್ತಿದ್ದ ರಸಗೊಬ್ಬರ/ಪೀಡೆನಾಶಕಗಳ ಪರಿಕರಗಳಾದ ಸ್ಟೇನ್ಸ್‌ ಗ್ರೀನ್ ಮಿರಾಕಲ್, ಅಗ್ಫೋರ್ಟ್‌, ಬ್ರಾಸ್ಸೋಫಿಟ್, ಜಾಂಥೋನಿಲ್, ವಿವಾ, ಎಂಸಿಸೆಟ್, ಸೂಪರ್ 8, ರೈಸ್, ಆಸ್ಕೋಮ್ಯಾಕ್ಸ್‌, ಬಯೋವಿಟಾ, ಫ್ಯೂಜಿಕೋ-ಎಫ್‌ಎಸ್, ಐಸಾಬಿಯಾನ ಸೇರಿ ಒಟ್ಟು 12 ಮಾದರಿಗಳನ್ನು ನಿಯಮಾನುಸಾರ ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವಿಶ್ಲೇಷಣಾ ವರದಿ ಬಂದ ನಂತರ ಯಾವುದಾದರೂ ನಿಯಮಬಾಹಿರ ವಸ್ತುಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸಂಸ್ಥೆ ಮತ್ತು ಮಾರಾಟ ಮಳಿಗೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

                     ಅದೇರೀತಿಯಾಗಿ ಕಾನೂನು ಉಲ್ಲಂಘನೆ ಮಾಡಿ ವಿವಿಧ ಕೃಷಿ ಪರಿಕರಗಳ ದಾಸ್ತಾನು ಹಾಗೂ ಮಾರಾಟ ಮಾಡುತ್ತಿದ್ದ ಸಿ,ಎಫ್‌/ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಮಾರಾಟ ತಡೆ ಆದೇಶ ಸೂಕ್ತ ವಿವರಣೆ ನೀಡಲು ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿದೆ. ಮಾರಾಟ ಮಳಿಗೆಗಳಿಗೆ ಸಂಬಂಧಿಸಿದವರು ಸೂಕ್ತ ಸಮಜಾಯಿಷಿ ನೀಡದಿದ್ದರೆ ಸಂಬಂಧಪಟ್ಟ ಮಾರಾಟ ಮಳಿಗೆ ಮತ್ತು ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.ಈ ಹಿಂದೆ ಅಪರ ಕೃಷಿ ನಿರ್ದೇಶಕರು, ರಾಜ್ಯ ಕೃಷಿ ವಿಚಕ್ಷಣಾದಳ, ಬೆಂಗಳೂರು ಇವರ ನೇತೃತ್ವದಲ್ಲಿ ತಂಡವು ವಿವಿಧ ಸಿ,ಎಫ್ ಗೋದಾಮುಗಳ ಮೇಲೆ ಇತ್ತೀಚೆಗೆ ಅನೀರೀಕ್ಷಿತ ದಾಳಿ ನಡೆಸಿ ಮೆಸ್ಸರ್ಸ್‌ ಘರ್ಡಾ ಕೆಮಿಕಲ್ಸ್‌ ಲಿಮಿಟೆಡ್ ಸಂಸ್ಥೆಯ ಡೈಮಿಥೋಯೇಟ್ 30ಅ ಇಸಿ 800 ಲೀ. ಸುಮಾರು ರೂ.10.02 ಲಕ್ಷ, ಬಿಹೆಚ್‌ಎಲ್ ರಸಾಯನ್ ಉದ್ಯೋಗ್ ಪ್ರೈ.ಲಿ. ಸಂಸ್ಥೆಯ ಕ್ಲೋರ್‌ಪೈರಿಫಾಸ್ 10 ಗ್ರಾಂ., 1060 ಕೆಜಿ ಸುಮಾರು ರೂ.4.04 ಲಕ್ಷ ಮತ್ತು ಜು ಅಗ್ರಿ ಕ್ರಾಪ್ ಸೈನ್ಸ್‌ ಲಿಮಿಟೆಡ್ ಸಂಸ್ಥೆಯ ಕ್ಲೋರ್‌ಪಿರಿಫೋಸ್ 20ಅ ಇಸಿ 1620 ಲೀ. ಸುಮಾರು ರೂ.8.90 ಲಕ್ಷ ಮೌಲ್ಯದ ಕೀಟನಾಶಕಗಳ ಸೇರಿದಂತೆ ಒಟ್ಟು ರೂ.23.15 ಲಕ್ಷ ಮೌಲ್ಯದ ಕೀಟನಾಶಕಗಳನ್ನು ಕಾನೂನು ಬಾಹಿರವಾಗಿ ದಾಸ್ತಾನು ಮತ್ತು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

                  ಕೀಟನಾಶಕಗಳನ್ನು ಜಪ್ತಿ ಮಾಡಿ ಘನ ನ್ಯಾಯಾಲಯದಲ್ಲಿ ಸಂಬಂಧಪಟ್ಟ ಸಂಸ್ಥೆ ಮತ್ತು ಮಾರಾಟ ಮಳಿಗೆಗಳ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಎಂದು ಅವರು ಹೇಳಿದ್ದಾರೆ.ಪ್ರಸ್ತುತ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವವರ ಬಗ್ಗೆ ತೀವ್ರ ನಿಗಾವಹಿಸಲಾಗಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೃಷಿ ಪರಿಕರ ಪರೀವೀಕ್ಷಕರುಗಳು ಪ್ರತಿಯೊಂದು ಕೃಷಿ ಪರಿಕರ ಮಾರಾಟ ಮಳಿಗೆಗೆ ಅನೀರೀಕ್ಷಿತ ಭೇಟಿ ನೀಡುತ್ತಿರುವುದರ ಜೊತೆಗೆ ಸುರಕ್ಷಿತ ಕೀಟನಾಶಕಗಳ ಬಳಕೆ, ಅನಧಿಕೃತ ಕೃಷಿ ಪರಿಕರ, ಮಾರಾಟಗಾರರಿಂದ ಕೃಷಿ ಪರಿಕರಗಳನ್ನು ಖರೀದಿಸಬಾರದು ಹಾಗೂ ಇತರೆ ಪ್ರಮುಖ ವಿಷಯಗಳ ಕುರಿತು ಮಾಹಿತಿ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ದಾಳಿ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕ ಮೃತ್ಯುಂಜಯ, ಸಹಾಯಕ ಕೃಷಿ ನಿರ್ದೇಶಕರಾದ ಪ್ರವೀಣ್ ಹಾಗೂ ಶೇಖಪ್ಪ, ಬಳ್ಳಾರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿಗಳಾದ ಸೌಮ್ಯ, ಬಸವರಾಜ್, ಹಾಗೂ ಸಹಾಯಕ ಕೃಷಿ ಅಧಿಕಾರಿ ಸುಷ್ಮಾ ಸೇರಿದಂತೆ ಉಪ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿಗಳು ಹಾಜರಿದ್ದರು.