ಭಿಕ್ಷಾಟನೆ ನಿರ್ಮೂಲನೆ ಕಾರ್ಯಕ್ರಮ: 16 ಜನ ಭಿಕ್ಷುಕರ ರಕ್ಷಣೆ

ಭಿಕ್ಷಾಟನೆ ನಿರ್ಮೂಲನೆ ಕಾರ್ಯಕ್ರಮ: 16 ಜನ ಭಿಕ್ಷುಕರ ರಕ್ಷಣೆ Begging eradication program: 16 beggars rescued


ಕೊಪ್ಪಳ  06: ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರೆಯ ನಿಮಿತ್ಯ “ಭಿಕ್ಷಾಟನೆ ಮುಕ್ತ ಶ್ರೀಗವಿಸಿದ್ದೇಶ್ವರ ಜಾತ್ರೆ” ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098, ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಘ, ಹೈಬ್ರಿಡ್ ನ್ಯೂಸ್, ಕೊಪ್ಪಳ ಹಾಗೂ ಭಿಕ್ಷುಕರ ಪುರ್ನವಸತಿ ಕೇಂದ್ರ, ಬಳ್ಳಾರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಭಿಕ್ಷಾಟನೆ ನಿರ್ಮೂಲನೆಗಾಗಿ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಅನೀರೀಕ್ಷಿತ ದಾಳಿಯನ್ನು ಆಯೋಜಿಸಲಾಗಿತ್ತು.  

ಈ ದಾಳಿಗೆ ಚಾಲನೆಯನ್ನು ನೀಡಿ, ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ  ಅವರು, ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ -1975 ರನ್ವಯ ಯಾರೇ ವ್ಯಕ್ತಿ ಭಿಕ್ಷೆಯನ್ನು ಬೇಡುವುದು ಅಪರಾಧವಾಗಿದೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ, ರಕ್ಷಿಸಿ, ನಿರ್ಗತಿಕರ ಪುರ್ನವಸತಿ ಕೇಂದ್ರದಲ್ಲಿರಿಸಿ ಅಗತ್ಯ ಪುನರ್ವಸತಿಯನ್ನು ಕಲ್ಪಿಸಲಾಗುತ್ತಿದೆ. ಈ ವೆಚ್ಚವನ್ನು ಸ್ಥಳೀಯ ಸರಕಾರಗಳು ಶೇ.3 ಸೆಸ್‌ನ್ನು ಸಂಗ್ರಹಿಸುವ ಮೂಲಕ ಭರಿಸುತ್ತವೆ. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಕಲಂ 76ರನ್ವಯ ಮಕ್ಕಳು ಭಿಕ್ಷೆ ಬೇಡುವುದನ್ನು ಮತ್ತು ಮಕ್ಕಳಿಂದ ಭಿಕ್ಷೆ ಬೇಡಿಸುವುದನ್ನು ಹಾಗೂ ಮಕ್ಕಳಿಂದ ಭಿಕ್ಷೆಯನ್ನು ಬೇಡಿಸಿ ಅದರಿಂದ ಬಂದ ಸಂಪನ್ಮೂಲದಿಂದ ಬದುಕುವುದು ಮತ್ತು ಭಿಕ್ಷೆಯ ಉದ್ದೇಶಕ್ಕಾಗಿ ಮಕ್ಕಳ ಅಂಗಾಂಗವನ್ನು ಊನಗೊಳಿಸುವುದು ಸಹ ಶಿಕ್ಷಾರ್ಹ ಅಪರಾಧವಾಗಿದೆ.  ಈ ಕೃತ್ಯಕ್ಕೆ 7 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.1 ಲಕ್ಷ ದಂಡವನ್ನು ವಿಧಿಸಬಹುದಾಗಿದೆ. ಆದ್ದರಿಂದ ಯಾರೇ ವ್ಯಕ್ತಿಗಳು, ಭಿಕ್ಷುಕರಿಗೆ ಮತ್ತು ಮಕ್ಕಳಿಗೆ ಭಿಕ್ಷೆಯನ್ನು ನೀಡದೆ, ಅಂತಹವರನ್ನು ಅರ್ಹ ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಿ ಅಥವಾ ತುರ್ತು ಸಹಾಯವಾಣಿಗಳಾದಹಿ 112 ಅಥವಾ ಮಕ್ಕಳ ಸಹಾಯವಾಣಿ-1098ಗೆ ಮಾಹಿತಿಯನ್ನು ನೀಡಿ ಎಂದರು.  

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿ, ಮಕ್ಕಳು ಭಿಕ್ಷೆ ಬೇಡುವುದನ್ನು ಸರಕಾರವು ನಿಷೇಧಿಸಿದ್ದು, ಇದೂಂದು ಅನಿಷ್ಟ ಪದ್ಧತಿಯಾಗಿದೆ. ಅಂತಹ ಮಕ್ಕಳನ್ನು ಸಹ ಪೋಷಣೆ ಮತ್ತು ರಕ್ಷಣೆ ವ್ಯಾಪ್ತಿಗೆ ಸೇರಿಸಿದೆ. ಇಂತಹ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸುವ ಮೂಲಕ ಅಗತ್ಯ ಪುನರ್ವಸತಿಯನ್ನು ಕಲ್ಪಿಸಲಾಗುತ್ತಿದೆ. ಆದ್ದರಿಂದ ಮಕ್ಕಳಿಗೆ ಭಿಕ್ಷೆಯನ್ನು ನೀಡಬೇಡಿ, ಶಿಕ್ಷಣಕ್ಕೆ ಪ್ರೋತ್ಸಾಹಿಸಿ. ಒಂದು ವೇಳೆ ಮಕ್ಕಳು ಭಿಕ್ಷೆ ಬೇಡುತ್ತಿರುವುದು ಕಂಡು ಬಂದಲ್ಲಿ ಅಂತಹ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಅಥವಾ ಮಕ್ಕಳ ಸಹಾಯವಾಣಿ-1098/112ಗೆ ಮಾಹಿತಿಯನ್ನು ನೀಡಿ ಎಂದು ತಿಳಿಸಿದರು.