ಸಂವಿಧಾನ ಮಹತ್ವದ ಬಗ್ಗೆ ಜಾಗೃತಿ ಅವಶ್ಯವಾಗಿದೆ

ಸಂವಿಧಾನ ಮಹತ್ವದ ಬಗ್ಗೆ ಜಾಗೃತಿ ಅವಶ್ಯವಾಗಿದೆ Awareness about the importance of the Constitution is necessary


          ಹಾವೇರಿ 27 :  ಸಂವಿಧಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು  ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿಗಳಾದ  ಶೈಲಜಾ ಎಚ್‌.ವಿ. ಅವರು ಹೇಳಿದರು. 

ಕಳ್ಳಿಹಾಳ ಪರಿಶಿಷ್ಟ ಜಾತಿ -ಪರಿಶಿಷ್ಟ ಪಂಗಡದ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬುಧವಾರ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಳ್ಳಿಹಾಳ ಪರಿಶಿಷ್ಟ ಜಾತಿ -ಪರಿಶಿಷ್ಟ ಪಂಗಡದ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಯೋಗದಲ್ಲಿ  ಸಂವಿಧಾನ ದಿನಾಚರಣೆ ಅಂಗವಾಗಿ ಜರುಗಿದ  ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಜಿಲ್ಲೆಯ ಎಲ್ಲ ಶಾಲಾ -ಕಾಲೇಜುಗಳಲ್ಲಿ ಸಂವಿಧಾನದ ಪ್ರಾಮುಖ್ಯತೆ ಕುರಿತು ಪ್ರಬಂಧ, ಚರ್ಚಾ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಭಾರತ ಸಂವಿಧಾನದ ಕುರಿತು ಅರಿವು ಮೂಡಿಸಬೇಕು. 1949 ರಲ್ಲಿ ಭಾರತದ ಸಂವಿಧಾನ ಅಂಗೀಕರಿಸಲಾಯಿತು. ಸಂವಿಧಾನವು 26 ಜನವರಿ 1950 ರಂದು ಜಾರಿಗೆ ಬಂದಿತು. ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು. 

ಕಾನೂನು ನೆರವು ಸಹಾಯಕ ಅಭಿರಕ್ಷಣಾ ವಕೀಲ ಎನ್‌.ಎನ್‌.ಡಿಳ್ಳೆಪ್ಪನವರ ಅವರು ಸಂವಿಧಾನ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. 

ಕಳ್ಳಿಹಾಳ ಪರಿಶಿಷ್ಟ ಜಾತಿ -ಪರಿಶಿಷ್ಟ ಪಂಗಡದ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಿ.ಟಿ.ಪಾಟೀಲ ಅಧ್ಯಕ್ಷತೆ  ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಸರ್ಕಾರಿ ಅಭಿಯೋಜಕ ಎಸ್‌.ಎಂ.ಗೆಜ್ಜಿಹಳ್ಳಿ ಅವರು ಭಾಗವಹಿಸಿದ್ದರು.