ಕ್ರಿಯಾಶೀಲ ಬದುಕು ಜೀವನ ಶ್ರೇಯಸ್ಸಿಗೆ ಮೂಲ: ರಂಭಾಪುರಿಶ್ರೀ
ಕಡೆನಂದಿಹಳ್ಳಿ 01: ಚತುರ್ವಿಧ ಪುರುಷಾರ್ಥಗಳಾದ ಧರ್ಮ ಅರ್ಥ ಕಾಮ ಮೋಕ್ಷ ಇವುಗಳಲ್ಲಿ ಒಂದನ್ನಾದರೂ ಜೀವನದಲ್ಲಿ ಸಾಧಿಸದಿದ್ದರೆ ಮಾನವ ಜೀವನ ವ್ಯರ್ಥ. ಐಹಿಕ ಭೋಗ ಭಾಗ್ಯಗಳನ್ನು ಬಯಸುವ ಮನುಷ್ಯ ಧರ್ಮದ ಪರಿಪಾಲನೆ ಮಾಡದಿದ್ದರೆ ಯಾವ ಪ್ರಯೋಜನವೂ ಇಲ್ಲ. ಕ್ರಿಯಾಶೀಲ ಬದುಕು ಜೀವನ ಶ್ರೇಯಸ್ಸಿಗೆ ಮೂಲವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಮಳೆಮಲ್ಲೇಶ್ವರಸ್ವಾಮಿ ಜಾಗೃತ ಸ್ಥಳ ತಪೋಕ್ಷೇತ್ರ ಕಡೇನಂದಿಹಳ್ಳಿ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಜಗದ್ಗುರು ರೇಣುಕಾಚಾರ್ಯ ಗುರು ಪರಂಪರೆ ಜಾತ್ರೋತ್ಸವ, ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜಗದ್ಗುರು ರೇಣುಕಾಚಾರ್ಯರು ಬದುಕಿ ಬಾಳುವ ಮನುಷ್ಯರಿಗಾಗಿ ದಶ ಧರ್ಮ ಸೂತ್ರಗಳನ್ನು ಬೋಧಿಸಿದ್ದು ಅವು ಎಲ್ಲರಿಗೂ ಮಾನ್ಯವಾಗಿವೆ. ಮಠಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿ ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಬೆಳೆಸುವ ಕಾರ್ಯ ಮಾಡುತ್ತ ಬಂದಿವೆ. ವೀರಶೈವ ಧರ್ಮ ಮಾನವ ಧರ್ಮವನ್ನು ಎತ್ತಿ ಹಿಡಿದಿದೆ. ಇದರಲ್ಲಿರುವ ಧರ್ಮ ಚಿಂತನಗಳು ಎಲ್ಲರ ಉನ್ನತಿಗಾಗಿ ಇವೆಯೇ ಹೊರತು ಅವನತಿಗಾಗಿ ಅಲ್ಲ. ಏನೊಂದು ಇಲ್ಲದ ಸ್ಥಳದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ಕುಟೀರವೊಂದನ್ನು ಕಟ್ಟಿಕೊಂಡು ದಶಕದ ಅವಧಿಯಲ್ಲಿ ಇಷ್ಟೊಂದು ಗುಣಾತ್ಮಕ ಮತ್ತು ರಚನಾತ್ಮಕ ಕಾರ್ಯಗಳ ಮೂಲಕ ಎಲ್ಲರ ನೀರೀಕ್ಷೆ ಮೀರಿ ಅಭಿವೃದ್ಧಿ ಮಾಡಿರುವ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳಲ್ಲಿ ಅವರು 11 ತಿಂಗಳು ಮಾಡಿದ ಅನುಷ್ಠಾನದ ಶಕ್ತಿ ಅಡಗಿದೆ. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ದೂರದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿದ್ದು ಭಕ್ತರನ್ನು ಆದರ್ಶ ಮಾರ್ಗದ ಕಡೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದು ಅವರ ಎಲ್ಲ ಸತ್ಕಾರ್ಯಗಳಿಗೆ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ನಿರಂತರವಾಗಿ ಇರುತ್ತದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿ ದ್ವಾದಶ ಪಟ್ಟಾಧಿಕಾರ ಮಹೋತ್ಸವದ ಪ್ರಕಟಣೆಯನ್ನು ಬಿಡುಗಡೆ ಮಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ ಇಂದು ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮಕ್ಕೆ ನಾಡಿನಾದ್ಯಂತ ಭಕ್ತರು ಇರುವುದು ಸಂತೋಷ ಮತ್ತು ಅಭಿಮಾನದ ಸಂಗತಿಯಾಗಿದೆ. ರೇವಣಸಿದ್ದೇಶ್ವರ ಶಿವಾಚಾರ್ಯರು ಭಕ್ತರ ಶ್ರೇಯೋಭಿವೃದ್ಧಿಗಾಗಿ ತಮ್ಮನ್ನು ತಾವು ಸಮರ್ಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಕೆಲವರು ಹಿಂದೂ ಧರ್ಮವನ್ನು ಅವಹೇಳನ ಮಾಡುವ ಕಾರ್ಯ ಮಾಡುತ್ತಿದ್ದು ಇದು ಒಳ್ಳೆಯ ಬೆಳವಣಿಗೆ ಅಲ್ಲ. ರಂಭಾಪುರಿ ಜಗದ್ಗುರುಗಳು ಈ ಇಳಿ ವಯಸ್ಸಿನಲ್ಲಿಯೂ ಹಗಲಿರುಳೆನ್ನದೇ ಸಂಚರಿಸಿ ಧರ್ಮ ಜಾಗೃತಿ ಕಾರ್ಯ ಮಾಡುತ್ತಿದ್ದು ನಾವೆಲ್ಲ ಅವರ ಮಾರ್ಗದರ್ಶನದಲ್ಲಿ ಮುಂದುವರಿಯಬೇಕು ಎಂದರು.
ಮಹಾಮೃತ್ಯುಂಜಯ ಮಂತ್ರ ಬರಹ ಪತ್ರವನ್ನು ಬಿಡುಗಡೆ ಮಾಡಿದ ಗೌರಿಗದ್ದೆ ವಿನಯ ಗುರೂಜಿ ಮಾತನಾಡಿ ದುಡ್ಡಿದ್ದರೆ ಏನೆಲ್ಲ ಸಿಗಬಹುದು ಆದರೆ ಗುರು ಕಾರುಣ್ಯ ಪ್ರಾಪ್ತವಾಗುವುದು ಕಷ್ಟ. ಮನುಷ್ಯ ತನ್ನಲ್ಲಿರುವ ಅಹಂಕಾರವನ್ನು ತೊರೆದು ಶರಣಾದಾಗ ಮಾತ್ರ ಗುರುವಿನ ಆಶೀರ್ವಾದ ದೊರೆಯುವುದು. ಇಂದು ನಾಡಿನಲ್ಲಿ ಸಂಸ್ಕಾರ ಏನಾದರೂ ಉಳಿದಿದ್ದರೆ ಅದು ಮಠಗಳಿಂದ ಮಾತ್ರ. ನಾವು ರೇಣುಕರನ್ನು ನೋಡಿಲ್ಲ. ಆದರೆ ಪ್ರಸ್ತುತ ರಂಭಾಪುರಿ ಜಗದ್ಗುರುಗಳಲ್ಲಿ ರೇಣುಕರನ್ನು ಕಾಣುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಶಿಕಾರಿಪುರದ ಪ್ರಥಮ ದರ್ಜೆ ಗುತ್ತಿಗೆದಾರ ದೇವೇಂದ್ರ್ಪ ಪಿ.ಎಸ್. ಇವರಿಗೆ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನೇತೃತ್ವ ವಹಿಸಿದ ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ರಂಭಾಪುರಿ ಜಗದ್ಗುರುಗಳ ಕೃಪಾಶೀರ್ವಾದ ಮತ್ತು ಭಕ್ತರ ಸಹಕಾರದಿಂದಾಗಿ ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮುಂಬರುವ ದಿನಗಳಲ್ಲಿ ರಥವೊಂದನ್ನು ನಿರ್ಮಿಸಿ ಪ್ರತಿ ತಿಂಗಳು ರಥೋತ್ಸವ ಮಾಡುವ ಯೋಜನೆ ಇದೆ ಎಂದರು.
ಕನ್ನೂರು-ಸಿಂಧನೂರು ಸೋಮನಾಥ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು ರೇವಣಸಿದ್ಧೇಶ್ವರ ಶಿವಾಚಾರ್ಯರ ಕಾರ್ಯಕ್ಷಮತೆಯ ಬಗ್ಗೆ ಮತ್ತು ಈ ಭಾಗದ ಭಕ್ತರ ಸಹಕಾರದ ಬಗೆಗೆ ಮಾತನಾಡಿದರು.
ಚನ್ನಗಿರಿ ಡಾ.ಕೇದಾರಲಿಂಗ ಶಿವಾಚಾರ್ಯರು, ಜಕ್ಕಲಿ-ಹಾರನಹಳ್ಳಿ ವಿಶ್ವಾರಾಧ್ಯ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯರು, ನಂದೀಪುರದ ನಂದೀಶ್ವರ ಶಿವಾಚಾರ್ಯರು, ಗೋವಿನಕೋವಿ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿಗಳು, ಲಿಂಗಸುಗೂರಿನ ಮಾತಾ ಮಾಣಿಕ್ಕೇಶ್ವರಿ ಆಶ್ರಮದ ನಂದಿಕೇಶ್ವರಿ ಅಮ್ಮನವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಶಿಕಾರಿಪುರದ ಕೆ.ಎಸ್.ಗುರುಮೂರ್ತಿ, ತಹಶೀಲ್ದಾರ ಮಲ್ಲೇಶ್ ಪೂಜಾರ, ಸುಧೀರ ಮಾರವಳ್ಳಿ, ಕೊಣಂದೂರು ಕೆ.ಆರ್.ಪ್ರಕಾಶ್, ರುದ್ರಮುನಿ ಸಜ್ಜನ್, ಶಿವಕುಮಾರ ತಿಪ್ಪಶೆಟ್ಟಿ, ಬಸವರಾಜಪ್ಪ ಚನ್ನಳ್ಳೇರ, ವೀರೇಶ ವಡಕಪ್ಪಳಿ, ಅವಿನಾಶ ಬಿ., ಫಾಲಾಕ್ಷಗೌಡ ಪಾಟೀಲ ಭಾಗವಹಿಸಿದ್ದರು. ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶಿರ್ವದಿಸಿದರು.
ನಾಗರಾಜ ಹುಲ್ಲಿನಕೊಪ್ಪ ಸ್ವಾಗತಿಸಿದರು. ಶ್ವೇತಾ ಕಡೆನಂದಿಹಳ್ಳಿ ಪ್ರಾರ್ಥನಾ ಗೀತೆ ಹಾಡಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಣೆ ಮಾಡಿದರು. ಸಹಸ್ರಾರು ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ಆಶೀರ್ವಾದ ಪಡೆದರು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ನೆರವೇರಿತು.
ಬೆಳಿಗ್ಗೆ ದುರ್ಗಾ ಸಪ್ತಶತಿ ಪಾರಾಯಣ, ಸ್ವಯಂವರ ಪಾರ್ವತಿ ಯಾಗ ಜರುಗಿದವು. ಸಮಾರಂಭದ ನಂತರ 36 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿಗೆ ಭವ್ಯ ಬೆಳಕಿನ ವಿಶೇಷ ಆರತಿ ಕಾರ್ಯಕ್ರಮ ಜರುಗಿತು. ನಂತರ ದನ ಕಾಯೋರ ದೊಡ್ಡಾಟ ನಾಟಕ ಪ್ರದರ್ಶನಗೊಂಡಿತು.