25 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶ: ಮುಖ್ಯಾಧಿಕಾರಿ ಸುರೇಖಾ
ದೇವರಹಿಪ್ಪರಗಿ 09: ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಪ.ಪಂ. ಅಧಿಕಾರಿಗಳು ತಂಡ 25 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಿ, ರೂ.2,500 ದಂಡ ವಿಧಿಸಿದ್ದಾರೆ ಎಂದು ಪ.ಪಂ.ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಹೇಳಿದ್ದಾರೆ.
ಬಸ್ ನಿಲ್ದಾಣದ ಹತ್ತಿರ ಮಳಿಗೆಗಳು, ಮೊಹರೆ ವೃತ್ತ, ಟಿಪ್ಪು ಸುಲ್ತಾನ್ ವೃತ್ತದ ರಸ್ತೆ, ಸಂತೆ ಮೈದಾನ ರಸ್ತೆ, ವಿಜಯಪುರ ಹಾಗೂ ಇಂಡಿ ರಸ್ತೆ ಸೇರಿದಂತೆ ವಿವಿಧೆಡೆ ದಾಳಿ ನಡೆಸಲಾಯಿತು ಎಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು,ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾರಾಟ ಮಾಡದಂತೆ ಪಟ್ಟಣದ ಅಂಗಡಿ ಉದ್ದಿಮೆ ಮಾಲೀಕರಿಗೆ ಸಾಕಷ್ಟು ಬಾರಿ ಸೂಚನೆ ನೀಡಲಾಗಿದೆ. ಹೀಗಿದ್ದರೂ ಹಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾರಾಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಶುಕ್ರವಾರದಂದು ನಡೆದ ದಾಳಿಯ ಸಂದರ್ಭದಲ್ಲಿ ನಿಷೇಧಿತ ಪ್ಲಾಸ್ಟಿಕ್ 25ಕೆ.ಜಿ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದರು. ಪ್ಲಾಸ್ಟಿಕ್ ಮಾರಾಟ ವಿರುದ್ದ ಕಾರ್ಯಾಚರಣೆ ಸಂದರ್ಭದಲ್ಲಿ ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ ನಿಷೇಧ ಇರುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡುವ ದೆಸೆಯಲ್ಲಿ ನಿರಂತರವಾಗಿ ನಿಷೇಧಿತ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗುವುದು ಎಂದು ಇದೆ ವೇಳೆ ತಿಳಿಸಿದರು.
ಪ್ಲಾಸ್ಟಿಕ್ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ, ಬಳಕೆ ಸಂಬಂಧ ಸರ್ಕಾರದ ಜಾರಿಯಲ್ಲಿರುವ ನಿಯಮಗಳನ್ನು ಎಲ್ಲರಿಗೂ ಮನದಟ್ಟು ಮಾಡಿಕೊಡಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸಲು ಪ.ಪಂ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ಸಾರ್ವಜನಿಕರ ಸಹಕಾರ ಕೋರಲಾಗುತ್ತಿದೆ ಎಂದೂ ಸಹ ತಿಳಿಸಿದರು.
ಪ.ಪಂ ಜೈ.ಇ. ಗುರುರಾಜ ಬಿರಾದಾರ, ಸಿಬ್ಬಂದಿ ವರ್ಗದವರಾದ ಮುತ್ತುರಾಜ ಹಿರೇಮಠ, ಎಸ್. ಆರ್. ಘತ್ತರಗಿ, ಮಾರ್ತುಂಡ ಗುಡಿಮನಿ, ಖಾಜೆಸಾಬ ವಾಲಿಕಾರ ಹಾಗೂ ಸದಸ್ಯರ ಪ್ರತಿನಿಧಿಯಾದ ವಿನೋದ ಚವ್ಹಾಣ ಸೇರಿದಂತೆ ಹಲವಾರು ಜನ ಪೌರಕಾರ್ಮಿಕರು ಉಪಸ್ಥಿತರಿದ್ದರು.