ಕವಿ ನಾಗೇಶ್ ಜೆ. ನಾಯಕ್ ಅವರಿಗೆ ‘ರಾಷ್ಟ್ರೀಯ ಗಜಲ್ ರತ್ನ’ ಪ್ರಶಸ್ತಿ

ಕವಿ ನಾಗೇಶ್ ಜೆ. ನಾಯಕ್ ಅವರಿಗೆ ‘ರಾಷ್ಟ್ರೀಯ ಗಜಲ್ ರತ್ನ’ ಪ್ರಶಸ್ತಿ  'Rashtriya Ghazal Ratna' Award for Poet Nagesh J. Nayak


ಬೆಳಗಾವಿ 03:  ಖ್ಯಾತ ಕವಿ ಹಾಗೂ ವಿಮರ್ಶಕ ನಾಗೇಶ್ ಜೆ. ನಾಯಕ್ ಅವರಿಗೆ ಗದಗಿನ ಅಕ್ಷರ ದೀಪ ಫೌಂಡೇಶನ್ ವತಿಯಿಂದ ನೀಡಲಾಗುವ ‘ರಾಷ್ಟ್ರೀಯ ಗಜಲ್ ರತ್ನ’ ಪ್ರಶಸ್ತಿ ಲಭಿಸಿದೆ. ನಾಗೇಶ್ ನಾಯಕ್ ಅವರು ಸಮಾಜಮುಖಿ ಚಿಂತನೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ ಉಟಕೇರಿಯಲ್ಲಿ ಕಳೆದ 24 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಕವಿತೆ, ಕಥೆ ಹಾಗೂ ಅಂಕಣ ಬರಹಗಳನ್ನು ಪ್ರಕಟಿಸುತ್ತಿದ್ದಾರೆ.  

ಇದುವರೆಗೆ 28 ಕೃತಿಗಳನ್ನು ಹೊರತಂದಿರುವ ನಾಗೇಶ್ ನಾಯಕ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಇಂಚಲ ಕಾವ್ಯ ಪ್ರಶಸ್ತಿ, ಆಜೂರು ಪುಸ್ತಕ ಪ್ರಶಸ್ತಿ, ಅಡ್ವೈಸರ್ ಪುಸ್ತಕ ಪ್ರಶಸ್ತಿ, ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, ಸಿರಿಗನ್ನಡ ಪುಸ್ತಕ ಪ್ರಶಸ್ತಿ, ವೀರಶೈವ ಪ್ರತಿಷ್ಠಾನದ ಪ್ರಶಸ್ತಿ, ಬಾಗಲಕೋಟೆ ಗ್ರಾಮೀಣ ಸಾಹಿತ್ಯ ವೇದಿಕೆಯ ಬಹುಮಾನ, ಎಸ್‌.ಎಂ. ಕುಲಕರ್ಣಿ ಷಷ್ಠ್ಯಬ್ದಿ ದತ್ತಿ ಪ್ರಶಸ್ತಿ, ಶಿವಕವಿ ಉಳ್ಳವೀಶ ಹುಲೆಯಪ್ಪನವರಮಠ ದತ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ನಾಡಿನ ಪ್ರತಿಷ್ಠಿತ ‘ಅಮ್ಮ’ ಪ್ರಶಸ್ತಿಯೂ ಇವರಿಗೆ ಲಭಿಸಿದೆ.