'30 ವರ್ಷ ಮೇಲ್ಪಟ್ಟವರು ಪ್ರತಿ 6 ತಿಂಗಳಿಗೊಮ್ಮೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷಿಸಿಕೊಳ್ಳಿ'

'30 ವರ್ಷ ಮೇಲ್ಪಟ್ಟವರು ಪ್ರತಿ 6 ತಿಂಗಳಿಗೊಮ್ಮೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷಿಸಿಕೊಳ್ಳಿ' 'People above 30 years of age should get their blood pressure and diabetes checked every 6 months'

ಲೋಕದರ್ಶನ ವರದಿ

ಬಳ್ಳಾರಿ 05 : 30 ವರ್ಷ ಮೇಲ್ಪಟ್ಟವರು ಪ್ರತಿ 6 ತಿಂಗಳಿಗೊಮ್ಮೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸುವ ಮೂಲಕ ಸದೃಢ ಆರೋಗ್ಯ ಹೊಂದಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. 

ಶುಕ್ರವಾರ ಸಂಡೂರು ತಾಲ್ಲೂಕಿನ ವಿಠಲಾಪುರ ಮತ್ತು ಮೆಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. 

ಯಾರಿಗಾದರೂ ಬಾಯಿ ಒಣಗಿದಂತೆ ಆಗುವುದು ಅಥವಾ ವಿಪರೀತ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಹಸಿವು ಹೆಚ್ಚಾಗುವುದು, ಮಂದದೃಷ್ಟಿ ಕಾರಣವಿಲ್ಲದೇ ಆಯಾಸ ಕಂಡುಬಂದಲ್ಲಿ ತಕ್ಷಣ ವೈದ್ಯರ ಬಳಿ ತೆರಳಿ ಪರಿಕ್ಷೀಸಿಕೊಳ್ಳಬೇಕು. 30 ವರ್ಷ ಮೇಲ್ಪಟ್ಟವರು ಪ್ರತಿ 6 ತಿಂಗಳಿಗೊಮ್ಮೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸುವ ಮೂಲಕ ಸದೃಢ ಆರೋಗ್ಯ ಹೊಂದಬಹುದಾಗಿದೆ ಎಂದು ತಿಳಿಸಿದರು. 

30 ರಿಂದ 59 ವರ್ಷ ಹೆಚ್ಚಿನ ಸಾವುಗಳಿಗೆ ಅಸಾಂಕ್ರಾಮಿಕ ರೋಗಗಳೇ ಕಾರಣವಾಗಿವೆ. 2026 ರ ಹೊತ್ತಿಗೆ ದೇಶದಲ್ಲಿ 75 ಮಿಲಿಯನ್ ಮಧುಮೇಹಿಗಳು ಕಂಡುಬರುವ ಸಾಧ್ಯತೆಯಿದ್ದು, ಇದರಿಂದ ದುಡಿಯುವ ವಯಸ್ಸಿನಲ್ಲಿಯೇ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು. 

ಮಧುಮೇಹ ಕುರಿತು ಎಫ್‌ಬಿಎಸ್, ಪಿಪಿಬಿಎಸ್ ಖಾಲಿ ಹೊಟ್ಟೆಯಲ್ಲಿ ಪರೀಕ್ಷೆ, ಊಟ ಮಾಡಿದ 2 ಗಂಟೆಯ ನಂತರ ಪರೀಕ್ಷೆ ಶರೀರದ ಮೂಲಸಕ್ಕರೆ ಮಟ್ಟ ತೋರಿಸುತ್ತದೆ. ಊಟಕ್ಕೆ ಶರೀರ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ತೋರಿಸುತ್ತದೆ. ಮಧುಮೇಹ ಪತ್ತೆಗೆ ಮುಖ್ಯ ಚಿಕಿತ್ಸೆ ಪರಿಣಾಮಕಾರಿಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗಿದೆ. ಈ ಸೇವೆಯು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ರೋಗ ನಿಯಂತ್ರಣಕ್ಕಾಗಿ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ತೂಕ ಕಡಿಮೆ ಮಾಡಿಕೊಳ್ಳುವುದು. ಇದಕ್ಕಾಗಿ ಸೈಕಲ್ ತುಳಿಯುವುದು, ಬಿರಿಸಿನ ನಡಿಗೆ, ನಿರ್ದಿಷ್ಟ ದೂರದಲ್ಲಿ ಓಡುವುದು ಅಥವಾ ಮನೆಯಲ್ಲಿಯೇ ವ್ಯಾಯಾಮ ಮಾಡುವುದು, ಮದ್ಯ, ಧೂಮಪಾನ ತ್ಯಜಿಸುವುದು ಮುಂತಾದವುಗಳ ಮೂಲಕ ರೋಗ ತಡೆಗಟ್ಟಬಹುದಾಗಿದೆ ಎಂದರು. 

ಪ್ರಸ್ತುತ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳಿಂದ ಮತ್ತು ಗ್ರಾಮೀಣ ಭಾಗದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳಿಂದ ಸಕ್ಕರೆ ಖಾಯಿಲೆ ಮತ್ತು ರಕ್ತದೊತ್ತಡ ಪರೀಕ್ಷೆಯನ್ನು ಕೈಗೊಂಡು ಸಂಶಯಾತ್ಮಕ ವ್ಯಕ್ತಿಗಳನ್ನು ವೈದ್ಯಾಧಿಕಾರಿಗಳ ಬಳಿ ಕಳುಹಿಸಿದಾಗ ಪುನಃ ದೃಢಪಟ್ಟಲ್ಲಿ ಆಯಾ ಗ್ರಾಮದಲ್ಲಿಯೇ ಉಚಿತವಾಗಿ ಮಾತ್ರೆಗಳನ್ನು ನೀಡುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. 

ಮಧುಮೇಹ ಪರೀಕ್ಷೆಯು ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆ ಮಾಡಲಾಗುತ್ತದೆ. ಎಲ್ಲಾ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು. 

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ಹರೀಶ್, ಡಾ.ಮಹೇಶ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಹಾಜರಿದ್ದರು.