ವಿಜಯಪುರ 13: ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಸತ್ಯದ ದಾರಿ ತೋರಿದ ಮಹಾನ್ ದಾರ್ಶನಿಕ ಗೌತಮ ಬುದ್ಧ ಎಂದು ಠಾಣೆ ಮುಂಬಯಿ ಮತ್ತು ಪಂಢರಪುರದ ಫಾರ್ಮಸಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಜೆ. ಎಸ್. ಪಾಟೀಲ ಎಂದು ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ. ಬಿ. ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡಗಳ ಘಟಕದ ಸಹಯೋಗಲ್ಲಿ ಸೋಮವಾರ ಆಯೋಜಿಸಿದ್ದ ಗೌತಮ ಬುದ್ಧನ 2569 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವೀಯ ಮೌಲ್ಯಗಳನ್ನು ಸಾರಿದ ಈ ಮಹಾಚೇತನ ಅವರ ತತ್ವಗಳು ಜೀವನದ ಪರಿಪೂರ್ಣತೆಗೆ ದಾರಿ ತೋರಿಸುತ್ತವೆ. ಬುದ್ಧ ಸ್ಥಾಪಿಸಿದ ಬೌದ್ಧಧರ್ಮವು ಭಾರತದ ಮೂಲೆ ಮೂಲೆಯಲ್ಲೂ ಹರಡಿದ್ದು, ಸಾವಿರಾರು ಜನರಿಗೆ ನೆಮ್ಮದಿಯ ಜೀವನ ನೀಡಿದೆ. ಆದರೆ ಇಂದಿನ ಕೆಲ ಆಚರಣೆಗಳು ಮತ್ತು ಸಂಪ್ರದಾಯಗಳು ಮೌಢ್ಯದಿಂದ ಕೂಡಿವೆ ಎಂಬದು ವಿಷಾದಕರ. ಬುದ್ಧ, ಬಸವ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ರವರು ಬೋಧಿಸಿದ ತತ್ವಗಳನ್ನು ಅನುಸರಿಸುವ ಮೂಲಕ ನಾವೆಲ್ಲರೂ ಸಮಾನತೆ, ಶಾಂತಿ ಮತ್ತು ನೈತಿಕ ಮೌಲ್ಯಗಳ ನಿರ್ಮಿಸಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಮಾತನಾಡಿ, ಇಂದಿನ ಮೋಸ, ದರೋಡೆ, ಕೊಲೆ ಸೇರಿದಂತೆ ವಿವಿಧ ಕುಕೃತ್ಯಗಳ ಕಾಲದಲ್ಲಿ ಗೌತಮ ಬುದ್ಧನ ತತ್ವ ಆದರ್ಶಗಳು ಅಪಾರ ಪ್ರಸ್ತುತತೆಯನ್ನು ಹೊಂದಿವೆ ಎಂಬುದು ಸತ್ಯ. ನಾವು ಬುದ್ಧನ ಸನ್ಮಾರ್ಗದಲ್ಲಿ ನಡೆಯುತ್ತಿದ್ದರೆ, ಜೀವನ ಉಜ್ವಲವಾಗುತ್ತದೆ ಮತ್ತು ಸಾರ್ಥಕತೆಯನ್ನು ಹೊಂದುತ್ತದೆ. ಪ್ರತಿಯೊಬ್ಬರೂ ಸುಖವಾಗಿ, ಶಾಂತಿಯಿಂದ ಬದುಕಲು ಬುದ್ಧನು ಪ್ರತಿಪಾದಿಸಿದ ಪಂಚಶೀಲ ಅಹಿಂಸೆ, ಸತ್ಯ, ಕಳ್ಳತನವಿಲ್ಲದ ಜೀವನ, ಹಾಗೂ ಮಾದಕವಸ್ತುಗಳಿಂದ ದೂರವಿರುವ ನಡವಳಿಕೆ ಇವುಗಳನ್ನು ನಿಷ್ಠೆಯಿಂದ ಪಾಲಿಸುವ ಅಗತ್ಯವಿದೆ ಎಂದರು.
ಕುಲಸಚಿವ ಶಂಕರಗೌಡ ಸೋಮನಾಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ವಿದ್ಯಾರ್ಥಿನಿಯರಿಗೆ ರಸಪ್ರಶ್ನೆಗಳನ್ನು ಕೇಳುವ ಮೂಲಕ ಉತ್ಸಾಹ ಮತ್ತು ಪ್ರೇರಣೆಯನ್ನು ತಂದರು.
ಪ್ರೊ. ಮಹೇಶ ಚಿಂತಾಮಣಿ, ಪ್ರೊ. ಪಿ ಕಣ್ಣನ್, ಪ್ರೊ.ಡಿಎಮ್ ಮದರಿ, ಪ್ರೊ. ಸಕ್ಪಾಲ್ ಹೂವಣ್ಣ, ಪ್ರೊ. ವೆಂಕೋಬಾ ಎನ್. ಡಾ.ರಮೇಶ ಸೊನಕಾಂಬಳೆ ಹಾಗು ಬೋಧಕ, ಬೊಧಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಡಾ. ಬಿ. ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಂಜೀವ ಕುಮಾರಗಿರಿ ಸ್ವಾಗತಿಸಿದರು, ಡಾ. ಕಲಾವತಿ ಕಾಂಬಳೆ ನಿರೂಪಿಸಿ ವಂದಿಸಿದರು.