ರೈತರಿಗಾಗಿ ಹಸಿರು ಬರಗಾಲ ಘೋಷಣೆ ಯಾವಾಗ : ಮಾಯಗೇರಿ

ರೈತರಿಗಾಗಿ ಹಸಿರು ಬರಗಾಲ ಘೋಷಣೆ ಯಾವಾಗ : ಮಾಯಗೇರಿ  When will the 'green drought' be declared for farmers – Mayageri


ಶಿಗ್ಗಾವಿ, ಆ.17: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ ರೈತರು ಮುಂಗಾರು ಬೆಳೆ ನಷ್ಟದಿಂದ ಸಂಕಷ್ಟಕ್ಕೀಡಾಗಿದ್ದರೂ, ರಾಜ್ಯ ಕಾಂಗ್ರೆಸ್ ಸರ್ಕಾರ ಹಸಿರು ಬರಗಾಲ ಘೋಷಣೆ ಮಾಡದೆ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮಾಯಗೇರಿ ಆರೋಪಿಸಿದರು.  

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬಿತ್ತಿದ್ದ ಬೀಜ ಮೊಳಕೆಯೊಡೆದು ಬೆಳೆ ಬೆಳೆಯುತ್ತಿದ್ದ ಸಂದರ್ಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ಬೆಳೆ ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಒಂದು ತಿಂಗಳ ಬಳಿಕ ಮಳೆ ಬಂದರೂ ಭೂಮಿ ಹಾಗೂ ಮಳೆಯನ್ನೇ ನಂಬಿ ಮತ್ತೆ ಸಾಲ ಮಾಡಿ ಬಿತ್ತನೆ ಮಾಡಿದ ರೈತರಿಗೆ ಸಮರ​‍್ಕ ಮಳೆಯಾಗದೆ ಬೆಳೆ ನಾಶವಾಗಿದೆ ಎಂದು ಹೇಳಿದರು.  

ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬೆಳೆ ಹಾನಿಯ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ, ಹಸಿರು ಬರಗಾಲ ಘೋಷಣೆ ಮಾಡಿಲ್ಲ. ಕೂಡಲೇ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆಯನ್ನು ಹಸಿರು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಮಧ್ಯಂತರ ಪರಿಹಾರ ಹಾಗೂ ಬೆಳೆ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.  

ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ, ತುಂಗಾ, ಕುಮದ್ವತಿ ಹಾಗೂ ಧರ್ಮಾ ನದಿಗಳ ನೀರನ್ನು ಬರಪೀಡಿತ ಪ್ರದೇಶಗಳ ಎಲ್ಲ ಕೆರೆಗಳಿಗೆ ತುಂಬಿಸಬೇಕು. ಇಲ್ಲವಾದರೆ ಬೇಸಿಗೆಯಲ್ಲಿ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿ ಅಂತರ್ಜಲ ಮಟ್ಟ ಕುಸಿಯುವ ಆತಂಕವಿದೆ ಎಂದು ಹೇಳಿದರು.  

ರೈತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ ಹೊಲಗಳಿಗೆ ನೀರಾವರಿ ಸೌಲಭ್ಯ, ಉಚಿತ ಟಿಸಿ ಹಾಗೂ ಕಂಬ-ತಂತಿ ಸೇರಿದಂತೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ರೈತರ ಹೊಲಗಳಲ್ಲಿಯೇ ಉದ್ಯೋಗ ಸೃಷ್ಟಿಸುವ ಸಹಾಯಧನ ಯೋಜನೆಗಳನ್ನು ರೂಪಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಮಾಯಗೇರಿ ಆಗ್ರಹಿಸಿದರು.