ವಿರಾಠ ವಿಶ್ವ ಗ್ಲೋಬಲ್ ಫೌಂಡೇಶನ್ ಶೈಕ್ಷಣಿಕ ನೆರವು ವಿತರಣೆ
ಗದಗ, 19 : ಸರಿದುಹೋದ ಸಮಯ ಮರಳಿ ಬಾರದು, ಹೀಗಾಗಿ ಸಮಯ ಹಾಳು ಮಾಡದೇ ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕು, ಅದರಲ್ಲೂ ವಿದ್ಯಾರ್ಥಿ ಜೀವನದ ಸಮಯ ನಮ್ಮ ಬದುಕಿನ ಅತ್ಯಂತ ಅಮೂಲ್ಯ ಸಮಯವಾಗಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಪೂರ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯಬಹುದು ಎಂದು ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಡಿ. ಕಡ್ಲಿಕೊಪ್ಪ ಹೇಳಿದರು.
ಅವರು ನಗರದ ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ, ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ, ಪ್ರತಿಭಾ ಪುರಸ್ಕಾರ ಹಾಗೂ ಮಕ್ಕಳ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರ ಆಯೋಜನೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿರಾಠ ವಿಶ್ವ ಗ್ಲೋಬಲ್ ಫೌಂಡೇಶನ್ ಬೆಂಗಳೂರು ಅವರು ನೀಡಿದ ಪ್ರತಿಭಾ ಪುರಸ್ಕಾರದ ಚಕ್ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಸಮಾಜದ ಮಕ್ಕಳ ಶಿಕ್ಷಣಕ್ಕೆ ವಿರಾಠ ವಿಶ್ವ ಗ್ಲೋಬಲ್ ಫೌಂಡೇಶನ್ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಪ್ರಸಕ್ತ ವರ್ಷ ಜಿಲ್ಲೆಯ 10 ವಿದ್ಯಾರ್ಥಿಗಳಿಗೆ ಸಹಾಧನ ನೀಡಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಯ. ಕಮ್ಮಾರ ಇವರನ್ನು ವಿರಾಠ ವಿಶ್ವ ಗ್ಲೋಬಲ್ ಫೌಂಡೇಶನ್ನನ ಈ ಭಾಗದ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಸಾಧಕ ವಿದ್ಯಾರ್ಥಿಗಳು ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಬ್ಯಾಂಕ್ ಮ್ಯಾನೇಜರ್ ಮನು ಪತ್ತಾರ, ನಿವೃತ್ತ ಅಧಿಕಾರಿ ಗುಂಡಪ್ಪನವರು, ವಿಶ್ವಕರ್ಮ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ. ಎಸ್. ಬಡಿಗೇರ, ವಿಶ್ವಕರ್ಮ ನೌಕರರ ಸಂಘದ ನಿರ್ದೇಶಕರಾದ ಬಿ. ಎಮ್. ಬಡಿಗೇರ, ವಿಶ್ವಕರ್ಮ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷರಾದ ಮೌನೇಶ ಸಿ. ಬಡಿಗೇರ(ನರೇಗಲ್ಲ), ವಿಶ್ವಕರ್ಮ ಮಹಿಳಾ ಪತ್ತಿನ ಸಂಘದ ಅಧ್ಯಕ್ಷರಾದ ರಿಂದಮ್ಮ ವಡ್ಡಟ್ಟಿ, ನಿರ್ದೇಶಕರಾದ ಬಿ. ಎಂ. ಯರಕದ, ವಿಶ್ವಕರ್ಮ ಯುವ ಪರಿಷತ್ ಅಧ್ಯಕ್ಷರಾದ ಮಹೇಶ ಕಮ್ಮಾರ ಉಪಸ್ಥಿತರಿದ್ದರು.
ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಯ. ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು. ಕೆ. ಎಸ್. ಬಡಿಗೇರ ಸ್ವಾಗತಿಸಿದರು. ಎಸ್. ಎನ್ ಬಡಿಗೇರ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಅಂಗ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮತ್ತು ಸಮಾಜ ಬಾಂಧವರು ಪಾಲ್ಗೊಂಡಿದ್ದರು.