ಪತ್ರಕರ್ತನಿಗೆ ಧಮ್ಕಿ: ವಿವಿಧ ಸಂಘಟನೆಗಳಿಂದ ಖಂಡನೆ

ಪತ್ರಕರ್ತನಿಗೆ ಧಮ್ಕಿ: ವಿವಿಧ ಸಂಘಟನೆಗಳಿಂದ ಖಂಡನೆ Threat to journalist: Condemnation from various organizations


ಲೋಕದರ್ಶನ ವರದಿ   

ಇಂಡಿ 29: ವಿಜಯಪೂರದ ಪತ್ರಕರ್ತ ಪರಶುರಾಮ ಶಿವಶರಣ ಅವರ ಕುಂಟುಂಬಸ್ಥರಿಗೆ ಧಮ್ಕಿ ಹಾಕಿದ ಪ್ರಕರಣವನ್ನು ಖಂಡಿಸಿ, ಇಂಡಿ ನಗರದಲ್ಲಿ ವಿವಿಧ ಸಂಘಟನೆಗಳ ಒಕ್ಕೂಟಗಳ ನೇತೃತ್ವದಲ್ಲಿ ಶನಿವಾರ ಇಂಡಿ ಕಂದಾಯ ಉಪ ವಿಭಾಗಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  

ರೈತ ಸಂಘದ ಜಿಲ್ಲಾಧ್ಯಕ್ಷ ಎಸ್‌.ಬಿ. ಕೆಂಬೋಗಿ ಮಾತನಾಡಿ, ಪತ್ರಕರ್ತ ಪರಶುರಾಮ ಶಿವಶರಣ ಅವರು ಅನ್ನ ಭಾಗ್ಯ ಅಕ್ಕಿಯ ಕಳ್ಳ ಸಾಗಾಣೆ ಕುರಿತು ಸರಣಿ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಈ ಬೆದರಿಕೆ ಹಾಕಲಾಗಿದೆ. ಪತ್ರಕರ್ತರ ಕುಟುಂಬಕ್ಕೆ ಬೆದರಿಕೆ ಹಾಕುವ ಯತ್ನವನ್ನು ತೀವ್ರವಾಗಿ ಖಂಡಿಸಿದರು. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಪತ್ರಕರ್ತರ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.  

ಜೆಡಿಎಸ್ ಮುಖಂಡ ಡಾ. ರಮೇಶ್ ರಾಠೋಡ ಮಾತನಾಡಿ, ಸತ್ಯವನ್ನು ಸಮಾಜಕ್ಕೆ ತಿಳಿಸುವ ಪತ್ರಕರ್ತರ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.  

ಬಿಜೆಪಿ ಮುಖಂಡ ಅದೃಶ್ಯಪ್ಪ ವಾಲಿ ಮಾತನಾಡಿ, ಅನ್ನ ಭಾಗ್ಯ ಅಕ್ಕಿ ಕಳ್ಳಸಾಗಣೆ ದಂಧೆಯ ಹಿಂದೆ ದೊಡ್ಡ ಜಾಲವೇ ಇರುವ ಶಂಕೆಯಿದೆ. ಈ ಪ್ರಕರಣದ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.  

ಕರವೇ ತಾಲೂಕಾಧ್ಯಕ್ಷ ಬಾಳು ಮುಳಜಿ ಮಾತನಾಡಿ, ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಪತ್ರಕರ್ತರ ಬೆನ್ನಿಗೆ ಎಲ್ಲ ಸಂಘಟನೆಗಳು ಸದಾ ಇರಲಿವೆ ಎಂದರು. ಸರ್ಕಾರ ಮಾಧ್ಯಮದವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.  

ಪತ್ರಕರ್ತ ಶರಣು ಕಾಂಬಳೆ ಮಾತನಾಡಿ, ಇಂತಹ ಬೆದರಿಕೆಗಳಿಗೆ ಪತ್ರಕರ್ತರು ಧೃತಿಗೆಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮುಕ್ತ ಮತ್ತು ನಿರ್ಭೀತ ಪತ್ರಿಕೋದ್ಯಮಕ್ಕೆ ಧಕ್ಕೆ ತರುವ ಶಕ್ತಿಗಳನ್ನು ಒಟ್ಟಾಗಿ ಎದುರಿಸಲಾಗುವುದು ಎಂದು ಎಚ್ಚರಿಸಿದರು.  

ಪ್ರಕಾಶ ಬಿರಾದಾರ, ಸಿದ್ದು ಡಂಗಾ, ಶಿವಾನಂದ ಕಲ್ಲೊಳ್ಳಿ, ಸಂಜೀವ ದಶವಂತ, ಲಕ್ಷ್ಮಣ ಲಾಳಸಂಗಿ, ಅಂಬುರಾಯ ಕವಟಗಿ, ರೇವಣ್ಣ ಹತ್ತಳ್ಳಿ, ದುಂಡು ಬಿರಾದಾರ, ಬಿ.ಡಿ. ಇನಾಮದಾರ, ವಿಲಾಸ ಉಮರ್ಜಿ, ಮಲ್ಲು ಗುಡ್ಲ, ಮಹೇಶ ಹೂಗಾರ, ವಿಠೋಬಾ ಗುಡ್ಲ, ಶಾಂತಯ್ಯ ಮಠ, ಮಲ್ಲು ಬಿರಾದಾರ,  ಪತ್ರಕರ್ತರಾದ ಉಮೇಶ ಬಳಬಟ್ಟಿ, ಯಲಗೊಂಡ ಬೇವನೂರ, ಖಾಜು ಸಿಂಗೆಗೋಳ, ಶಂಕರ ಜಮಾದಾರ, ನಿಂಗನಗೌಡ ಬಿರಾದಾರ, ಸಚಿನ ಇಂಡಿ, ಆನಂದ ಗಣಾಚಾರಿ, ಶರಣು ಕಾಂಬ್ಳೆ, ಮಲ್ಲಿಕಾರ್ಜುನ ಹಾವಿನಾಳಮಠ, ತುಕಾರಾಮ ಪವಾರ, ಅರವಿಂದ ಕಾಂಬಳೆ, ಆನಂದ ಅಗರಖೇಡ, ಫಯಾಜ ಬಾಗವಾನ, ಸಿದ್ದು ಹತ್ತಳ್ಳಿ, ಅಲ್ಲಾಭಕ್ಷ ಗೋರೆ, ಲಾಲಸಿಂಗ ರಾಠೋಡ ಸೇರಿದಂತೆ ಇನ್ನಿತರರು ಇದ್ದರು.