ಪ್ರತಿ ವ್ಯಕ್ತಿಯ ಖಾಸಗಿ ಮತ್ತು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಇರಬೇಕು

ಪ್ರತಿ ವ್ಯಕ್ತಿಯ ಖಾಸಗಿ ಮತ್ತು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಇರಬೇಕು There should be honesty and transparency in every person's private and public life

ಪ್ರತಿ ವ್ಯಕ್ತಿಯ ಖಾಸಗಿ ಮತ್ತು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಇರಬೇಕು

ಧಾರವಾಡ 27:  ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಎನ್ನುವುದು ಸರಕಾರಿ ನೌಕರನೆ ಆಗಿರಲಿ, ಸಾರ್ವಜನಿಕರೆ ಆಗಿರಲಿ, ಪ್ರತಿ ವ್ಯಕ್ತಿಯ ಜೀವನದಲ್ಲಿ ಅಳವಡಿಸಿಕೊಂಡಿರಬೇಕು. ಅಂದಾಗ ಮಾತ್ರ ನಾವು ಸ್ವಸ್ಥ, ನೆಮ್ಮದಿಯ ಜೀವನ ಕಾಣಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಇಂದು (ಅ.27) ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇಲಾಖೆಗಳು ಸಂಯುಕ್ತವಾಗಿ ಆಯೋಜಿಸಿದ್ದ ಜಾಗೃತಿ: ನಮ್ಮ ಒಟ್ಟು ಜವಾಬ್ದಾರಿ ಧ್ಯೇಯವಾಕ್ಯದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಪ್ರಾಮಾಣಿಕತೆ, ಪಾರದರ್ಶಕತೆ ವ್ಯಕ್ತಿಯ ವೈಯಕ್ತಿಕ, ಸಾರ್ವಜನಿಕ ಜೀವನದಲ್ಲಿ ಅಗತ್ಯವಿದೆ. ಬ್ರಷ್ಟಾಚಾರ, ಅನೈತಿಕತೆ ಬಗ್ಗೆ ಜಾಗೃತಿ ಮೂಡಿಸುವ ಇಂದಿನ ಅಗತ್ಯತೆಯ ಬಗ್ಗೆ ಸಾರ್ವಜನಿಕ ಚಿಂತನೆ ಅಗತ್ಯವಿದೆ. ಪ್ರತಿ ಹಂತದಲ್ಲೂ ಕಾನೂನಾತ್ಮಕವಾಗಿ, ನೈತಿಕವಾಗಿ ಶುದ್ಧ ಜೀವನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಕಾನೂನು ಹೇಳುವ ರೀತಿಯಲ್ಲಿ ಎಲ್ಲರೂ ನಡೆದುಕೊಳ್ಳಬೇಕು. ಇದರಿಂದ ಸಾರ್ವಜನಿಕ ಸ್ನೇಹಿ ಆಡಳಿತ ಸಾಧ್ಯವಾಗುತ್ತದೆ. ಸರಕಾರದ ಪ್ರಾಮುಖ್ಯತೆ, ಮಹತ್ವದ ಬಗ್ಗೆ ಅರಿವು ಸರಕಾರಿ ನೌಕರರಿಗೆ ಮೂಡಬೇಕು ಎಂದು ಅವರು ತಿಳಿಸಿದರು.  ಕಚೇರಿಗೆ ಬರುವ ಸಾರ್ವಜನಿಕರಿಗೆ ಅವರ ಕೆಲಸದ ಬಗ್ಗೆ ಸುಳ್ಳು ಹೇಳುವುದು ಬೇಡ. ಪ್ರಾಮಾಣಿಕತೆ ಇರಬೇಕು ಎಂದರು. ಸರಕಾರಿ ಅಧಿಕಾರಿ, ನೌಕರರ ವೃತ್ತಿಯಲ್ಲಿ ಪ್ರಾಮಾಣಿಕತೆ, ಮಾನವೀಯತೆ ಇರಬೇಕು. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಕಾರ್ಯಕ್ರಮ ಉದ್ಘಾಟಿಸಿದ (ಪ್ರಭಾರ) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಕುಮಾರ ಸಿ. ಅವರು ಮಾತನಾಡಿ, ಬ್ರಷ್ಟಾಚಾರ ಒಂದು ರೀತಿಯ ಕ್ಯಾನ್ಸರ್‌. ಅದಕ್ಕೆ ಆರಂಭದಲ್ಲೆ ಚಿಕಿತ್ಸೆ ನೀಡಬೇಕು. ಪ್ರತಿಯೊಬ್ಬ ಸರಕಾರಿ ಅಧಿಕಾರಿ, ನೌಕರರು ತಮ್ಮ ದಿನನಿತ್ಯದ ವೃತ್ತಿಯಲ್ಲಿ ಪ್ರಾಮಾಣಿಕತೆ, ಮಾನವೀಯತೆ ಅಳವಡಿಕೊಂಡು, ನಿರ್ವಹಿಸಿದರೆ ಮಾತ್ರ ಉತ್ತಮ ಆಡಳಿತ, ಕಲ್ಯಾಣ ರಾಜ್ಯದ ಕಲ್ಪನೆ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು. ದಿನನಿತ್ಯ ಕೆಲಸದಲ್ಲಿ ವೃತ್ತಿಪರತೆ ಇರಬೇಕು. ಸಾರ್ವಜನಿಕರಲ್ಲಿಯೂ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವುದು ನಮ್ಮ ಜವಾಬ್ದಾರಿ ಆಗಿದೆ. ಬ್ರಷ್ಟಾಚಾರದ ವಿರುದ್ಧ ಎಲ್ಲರೂ ಹೊರಾಡಬೇಕು. ನೌಕರರು ತಮ್ಮ ಜೀವನದಲ್ಲಿ  ಬದ್ಧತೆ ಹೊಂದಿರಬೇಕು ಎಂದು ಅವರು ಹೇಳಿದರು. 

ಕಾರ್ಯಕ್ರಮ ಉದ್ದೇಶಿಸಿ ಮಹಾನಗರ ಪೊಲೀಸ್ ಆಯುಕ್ತ ಎನ್‌.ಶಶಿಕುಮಾರ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್‌.ದೊಡ್ಡಮನಿ ಅವರು ಮಾತನಾಡಿದರು. ಲೋಕಾಯುಕ್ತ ಸಿಪಿಐ ಪ್ರಭುಲಿಂಗಯ್ಯ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಆರತಿ ದೇವಶಿಖಾಮಣಿ ಮತ್ತು ಮೊಹಮ್ಮದಾಲಿ ತಹಸಿಲ್ದಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಸಭಿಕರಿಗೆ ಪ್ರತಿಜ್ಞಾವಿಧಿ ಭೋದಿಸಿದರು. ವೇದಿಕೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್‌.ಟಿ.ಸಿದ್ಧಲಿಂಗಪ್ಪ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡ್ರ ಇದ್ದರು. ಕಾರ್ಯಕ್ರಮದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ವೆಂಕನಗೌಡ ಪಾಟೀಲ, ರವೀಂದ್ರ ಕುರಬಗಟ್ಡಿ, ಪೊಲೀಸ್ ಇನ್ಸ್ಪೆಕ್ಟರ್ ಅವರಾದ ಕರುಣೇಶಗೌಡ, ಬಸವರಾಜ ಬುದ್ನಿ, ಪ್ರಸಾದ ಪರಣೇಕರ, ತಹಸಿಲ್ದಾರ ಡಿ.ಎಚ್‌.ಹೂಗಾರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಛಾಯಾಚಿತ್ರ ಶೀರ್ಷಿಕೆ: ಜಿಲ್ಲಾ ಪಂಚಾಯತ್ ನವೀಕೃತ ವಿಡಿಯೋ ಕಾನ್ಫರೆನ್ಸ್‌ ಸಭಾಂಗಣವನ್ನು ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಅವರು ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಎನ್‌. ಹೆಚ್‌. ಕೋನರಡ್ಡಿ, ಎಂ.ಆರ್‌.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಫ್‌.ಹೆಚ್‌.ಜಕ್ಕಪ್ಪನವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಸೇರಿದಂತೆ ಇತರರು ಇದ್ದರು.