ರಾಜ್ಯದ ಪಂಚಗ್ಯಾರಂಟಿಗಳು ದೇಶಕ್ಕೆ ಮಾದರಿಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ರಾಜ್ಯದಲ್ಲೇ ಹಾವೇರಿ ಜಿಲ್ಲೆ ಶ್ರೇಷ್ಠ -ಮುಖ್ಯಮಂತ್ರಿ ಸಿದ್ದರಾಮಯ್ಯ
The state's Panchagarantis are a model for the country. Haveri district is the best in the state in
ಲೋಕದರ್ಶನ ವರದಿ
ರಾಜ್ಯದ ಪಂಚಗ್ಯಾರಂಟಿಗಳು ದೇಶಕ್ಕೆ ಮಾದರಿಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ರಾಜ್ಯದಲ್ಲೇ ಹಾವೇರಿ ಜಿಲ್ಲೆ ಶ್ರೇಷ್ಠ -ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾವೇರಿ 05:ಹಾವೇರಿ ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕರ್ನಾಟಕ ರಾಜ್ಯದಲ್ಲಿಯೆ ಹೆಚ್ಚು ಶ್ರೇಷ್ಠವಾದ ಜಿಲ್ಲೆಯಾಗಿದೆ ಹಾಗೂ ಇದು ನಮ್ಮ ಸರ್ಕಾರಕ್ಕೆ ಶಕ್ತಿ ನೀಡಿದೆ ಜಿಲ್ಲೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಹೇಳಿದರು.
ಹಾನಗಲ್ ತಾಲೂಕು ಅಕ್ಕಿಆಲೂರು ಎಪಿಎಂಸಿ ಆವರಣದಲ್ಲಿ ರವಿವಾರ ಜಿಲ್ಲಾಡಳಿತ ಜಿ.ಪಂ., ವಿವಿಧ ಇಲಾಖೆಗಳು ಕೆ ಪಿ ಟಿ ಸಿ ಎಲ್ ಹಾಗೂ ಕೆ ಎನ್ ಎನ್ ಎಲ್ ಸಹಯೋಗದಲ್ಲಿ ರೂ.650 ಕೋಟಿ ಮೊತ್ತದ ಹಾನಗಲ್ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಅಧಿಕಾರ ಬಂದ ಒಂದು ವರ್ಷದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದುಕೊಂಡಿದ್ದೇವೆ. ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯ ಅಭಿವೃದ್ಧಿಗೆ ಸಹ ಆದ್ಯತೆ ನೀಡಲಾಗಿದೆ. 2024-25 ನೆ ಸಾಲಿನಲ್ಲಿ ರೂ. 3 ಲಕ್ಷ 71 ಸಾವಿರ ಕೋಟಿ ಮೊತ್ತದ ಆಯವ್ಯಯ ಹಾಗೂ 2025-26 ನೇ ಸಾಲಿಗೆ ರೂ. 4 ಲಕ್ಷ 9 ಸಾವಿರ ಕೋಟಿ ಆಯವ್ಯಯ ಮಂಡನೆ ಮಾಡಲಾಗಿದೆ. ಹಾಗೆಯೇ ಬಂಡವಾಳ ವೆಚ್ಚ 24-25 ಸಾಲಿನಲ್ಲಿ ರೂ.52 ಸಾವಿರ ಕೋಟಿ, 25-26 ಸಾಲಿನಲ್ಲಿ ರೂ.83 ಸಾವಿರ ಕೋಟಿ ಮಾಡಿದ್ದೇವೆ. ಕಳೆದ ಸಾಲಿನಲ್ಲಿ ರೂ. 50 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿ ಯೋಜನೆ ವೆಚ್ಚ ಮಾಡಲಾಗಿದೆ. 2025-26 ನೇ ಸಾಲಿನಲ್ಲಿ ರೂ.50 ಸಾವಿರ 18 ಕೋಟಿ ಕಾಯ್ದಿರಿಸಲಾಗಿದೆ. ರೂ. 153 ಸಾವಿರ ಕೋಟಿ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಚಿನ್ನ ಹಾಗೂ ಬೆಳ್ಳಿ ದರ ಗಗನಕ್ಕೇರಿದೆ, ಪೆಟ್ರೋಲ್, ಡಿಸೇಲ್, ಗ್ಯಾಸ್, ಬೆಲೆ ಹೆಚ್ಚಿಸಿ ಜನರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಇದರಿಂದ ಬಡರ ಜೀವನಕ್ಕೆ ಕಷ್ಟವಾಗಿದೆ. ಆದರೆ ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಶಕ್ತಿ ತುಂಬಿದೆ ಎಂದು ಹೇಳಿದರು.
ಶಾಸಕ ಶ್ರೀನಿವಾಸ ಮಾನೆ ಅವರು, ಕ್ರಿಯಾಶೀಲವ್ಯಕ್ತಿಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೆಲಸ ಮಾಡಿಸುವುದರಲ್ಲಿ ಅವರು ನಿಸ್ಸಿಮರು. ಅವರ ಅಭಿವೃದ್ಧಿ ಕೆಲಸಗಳಿಗೆ ನಮ್ಮ ಸರ್ಕಾರ ಸದಾ ಸಹಾಯ ಹಾಗೂ ಸಹಕಾರ ನೀಡುತ್ತದೆ ಎಂದು ಹೇಳಿದರು
ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ರವರು ಮಾತನಾಡಿ, ಹಾನಗಲ್ ಕ್ಷೇತ್ರದ ಜನರ ಋಣ ತೀರಿಸಲು ಇಲ್ಲಿಗೆ ಬಂದಿದ್ದೇವೆ. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಮತದಾರರೆ ನಮಗೆ ದೇವರು. ಮತದಾರರಿಗೆ ಸೇವೆ ಮಾಡಬೇಕಾದ್ದದ್ದು ನಮ್ಮ ಸರ್ಕಾರ ಸಂಕಲ್ಪವಾಗಿದೆ. ಈ ಕೆಲಸವನ್ನು ನಾವು ರಾಜ್ಯದ ಉದ್ದಗಲಕ್ಕೂ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು,
ಹಾವೇರಿ ಜಿಲ್ಲೆಯು ಒಂದು ಐತಿಹಾಸಿಕ ಭೂಮಿಯಾಗಿದೆ, ಶಿಶುನಾಳ ಷರೀಫರು, ಕನಕದಾರು, ಸಂತರು, ಸೂಫಿಗಳನ್ನು ನೀಡಿದ ಪುಣ್ಯ ಭೂಮಿ. ಈಗಾಗಲೇ ವರದಾ-ಬೇಡ್ತಿ ನದಿ ಜೋಡಣೆ ಕುರಿತು ಈಗಾಗಲೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬ ಪ್ರತಿ ಮಾಹೆ 5 ಸಾವಿರ ನೀಡಲಾಗುತ್ತಿದೆ. ಸಿ.ಎಂ.ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂತಹ ಕೆಲಸ ಮಾಡಿದೆ. ಅದೇ ರೀತಿ ಈ ಕ್ಷೇತ್ರದ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ಜನರು ಅವರಿಗೆಯಾವಾಗಲೂ ಶಕ್ತಿಯಾಗಿ ನಿಲ್ಲಬೇಕು ಎಂದು ಹೇಳಿದರು.
ರಾಜ್ಯದ ಜನರು ಇಂದು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ.ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ರೂ.ನಾಲ್ಕು ಲಕ್ಷ ಕೋಟಿಗೂ ಅಧಿಕ ಮೊತ್ತದ ದಾಖಲೆ ಆಯವ್ಯಯವನ್ನು ಮುಖ್ಯಮಂತ್ರಿಗಳು ಮಂಡಿದ್ದಾರೆ. ಜಿಲ್ಲೆಯ ಕುಡಿಯುವ ನೀರು, ರಸ್ತೆ, ವಿದ್ಯುತ್ ಪೂರೈಕೆ ಸುಧಾರಣೆ ಕೆಲಸ ಮಾಡಲಾಗುವುದು. ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳು ನಮ್ಮ ಸರ್ಕಾರ ಮುಂದಿವೆ , ನಮ್ಮ ಸರ್ಕಾರ ಯಾವಾಗಲು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಹಾಗೂ ಜನರ ಬದುಕಿನ ಶ್ರಮ, ಕಷ್ಟ-ಸುಖಗಳಲ್ಲಿ ನಾವು ನಿಮ್ಮೊಂದಿದ್ದೇವೆ ಎಂದು ಹೇಳಿದರು.
ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಮಾತನಾಡಿ, ನಮ್ಮ ಸರ್ಕಾರ ಜನತೆ ನೀಡಿದ ಭರವಸೆಗಳನ್ನು ಇಡೇರಿದೆ ಹಾಗೂ ನುಡಿದಂತೆ ನಡೆದುಕೊಂಡಿದೆ. ಈ ಭಾಗದ ಶಾಸಕ ಹಾಗೂ ಜನರ ಬೇಡಿಕೆ ಅನುಸಾರ 9 ಕಿ.ಮೀ. ಬೈಪಾಸ್ ರಸ್ತೆ ನಿರ್ಮಾಣದ ಸರ್ವೇಗೆ ಟೆಂಡರ್ ಕರೆಯಲಾಗಿದೆ. ಮೊದಲ ಹಂತದಲ್ಲಿ ಭೂಸ್ವಾಧೀನಮಾಡಿಕೊಂಡು ನಮ್ಮ ಅಧಿಕಾರ ಅವಧಿಯಲ್ಲೇ ರಸ್ತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಫಸಲಾ ಭಿಮಾ ಯೋಜನೆಯಡಿ ಹಾವೇರಿ ಜಿಲ್ಲೆ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಹಾವೇರಿ ವೈದ್ಯಕೀಯ ಕಾಲೇಜಿನ ಕಟ್ಟಡ ಕಾಮಗಾರಿಯನ್ನು ಶೇ.98 ರಷ್ಟು ಪೂರ್ಣಗೊಳಿಸಿ ನೂತನ ಕಟ್ಟಡದಲ್ಲಿ ಮೂರು ವರ್ಷದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜಿಲ್ಲೆಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಿಸಿದೆ. ಎರಡು ವರ್ಷದಲ್ಲಿ ಏಳು ಕೆಡಿಪಿ ಸಭೆಗಳನ್ನು ಮಾಡುವ ಮೂಲಕ ಹಾವೇರಿ, ಶಿಗ್ಗಾಂವ, ಸವಣೂರ ಬಂಕಾಪುರ ಸೇರಿದಂತೆ ಜಿಲ್ಲೆಯ ಕುಡಿಯುವ ನೀರಿ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗಿದೆ. ಶೈಕ್ಷಣಿಕ, ರಸ್ತೆ ಸೇರಿದಂತೆ ವಿವಿಧ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡಲಾಗಿದೆ ಎಂದು ಹೇಳಿದರು.
ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಪೌರಕಾರ್ಮಿಕ ಖಾಯಂಗೊಳಿಸಲು ಆದೇಶ ಹೊರಡಿಸಿದ ಸಂದರ್ಭದಲ್ಲಿ ಜಿಲ್ಲೆಯ 150 ಪೌರಕಾರ್ಮಿಕರನ್ನು ಖಾಯಂ ಉದ್ಯೋಗ ನೀಡಲಾಗಿದೆ. ಈ ಶ್ರೇಯಸ್ಸು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ಅನಾಹುತಗಳು ಸಂಭವಿಸಿದ ಸಂದರ್ಭದಲ್ಲಿ ಹಾವೇರಿ ಜನತೆ ಹುಬ್ಬಳ್ಳಿ ಅಥವಾ ದಾವಣಗೆರೆ ಚಿಕಿತ್ಸೆಗೆ ಹೋಗಬೇಕಾಗುತ್ತದೆ. ಇದನ್ನು ತಪ್ಪಿಸಲು ಸ್ಥಳೀಯವಾಗಿ ಚಿಕಿತ್ಸೆ ದೊರಕುವಂತಾಗಲು ನೂತನ ವೈದ್ಯಕೀಯ ಕಾಲೇಜಿನ ಆವರಣದಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಹಾಗೂ ಹಾವೇರಿ ಹಾಗೂ ಗದಗ ಜಿಲ್ಲೆಗೆ ಸಮರ್ಕ ನೀರು ಪೂರೈಕೆಗೆ ಅನುಕೂಲವಾಗುವಂತೆ ಕಂಚಾರಗಟ್ಟಿಯಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ರೂ.150 ಕೋಟಿ ಅನುದಾನ ಮಂಜೂರಾತಿಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಸಚಿವರು ಮನವಿ ಮಾಡಿಕೊಂಡರು.
ಅಧ್ಯಕ್ಷತೆ ವಹಿಸಿದ ಶಾಸಕರಾದ ಮಾನ್ಯ ಶ್ರೀನಿವಾಸ ಮಾನೆ ಅವರು ಮಾತನಾಡಿ, ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ಒಂಭತ್ತು ಗ್ರಾಮಗಳ 78 ಕೆರೆಗಳು ತುಂಬಿಸಲಾಗುತ್ತಿದೆ. ಕೆರೆ-ಕಟ್ಟೆಗಳು ಭರ್ತಿಯಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ನೀರವಾರಿ ಯೋಜನೆಗಳಿಂದ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ವಿದ್ಯುತ್ ಸಮಸ್ಯೆ ಬಗೆಹರಿಸಲು ಬಾಳಂಬೀಡ 110 ಕೆವಿ ಗ್ರಿಡ್ ಆರಂಭಿಸಲಾಗಿದೆ. 14 ಗ್ರಾಮಗಳ 1500 ಪಂಪಸೆಟ್ಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ಸರ್ಕಾರಿ ಜಮೀನಿನಲ್ಲಿ ಕಳೆದ 30 ವರ್ಷಗಳಿಂದ ವಾಸುವವರಿಗೆ 13,677 ಜನರಿಗೆ ಹಕ್ಕು ಪತ್ರಗಳನ್ನು 2025 ವರ್ಷದ ಅಂತ್ಯದೊಳಗಾಗಿ ಹಕ್ಕುಪತ್ರಗಳನ್ನು ನೀಡಲಾಗುವುದು. ಈಗಾಗಲೇ ಸಾವಿರ ಪತ್ರಗಳನ್ನು ತಯಾರಿಸಲಾಗಿದೆ. ಮೇ 20 ರಂದು ರಾಜ್ಯದ 1 ಲಕ್ಷ ಜನರಿಗೆ ಮಾನ್ಯ ಮುಖ್ಯಮಂತ್ರಿಗಳು ಹಕ್ಕುಪತ್ರ ನೀಡಲಿದ್ದಾರೆ ಎಂದರು.
ವಿವಿಧ ಬೇಡಿಕೆ: ವರದಾ-ಬೆಡ್ತಿ ನದಿ ಜೋಡಣೆ, ಬೈಪಾಸ್ ರಸ್ತೆ, ಕುಸನೂರ-ಮಾರನಬೀಡ 110 ಕೆವಿ ಗ್ರೀಡ್, ಅಕ್ಕಿಆಲೂರ ಗ್ರಾ.ಪಂಚಾಯತ್ನ್ನು ಪಟ್ಟಣ ಪಂಚಾಯತ್ಗೆ ಉನ್ನತೀಕರಿಸಲು, ಹುಬ್ಬಳ್ಳಿ-ಮುಂಡಗೋಡ ಹೆಸ್ಕಾಂ ವಿದ್ಯುತ್ ಲೈನ್ ಹಾನಗಲ್ವರೆಗೆ ಜೋಡಣೆ ಮಾಡಲು ಹಾಗೂ ರಸ್ತೆ ಅಗಲೀಕರಣಕ್ಕೆ ಅನುದಾನ ಹಾಗೂ ಹಾವೇರಿ ಜಿಲ್ಲೆ ಓದ್ಯೋಗಿಕವಾಗಿ ಅಭಿವೃದ್ಧಿ ಮಾಡಲು ಹಾಗೂ ಕೈಗಾರಿಕೆ ಉತ್ತೇಜಿಸಲು ಹಾವೇರಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ವಿಸ್ತರಣೆಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಶಾಸಕರು ಮನವಿ ಮಾಡಿಕೊಂಡರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ಅಜೀಮ್ಪೀರ ಖಾದ್ರಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಶಾಸಕರಾದ, ಪ್ರಕಾಶ ಕೋಳಿವಾಡ, ಯಾಸಿರ್ ಅಹ್ಮದ್ಖಾನ್ ಪಠಾಣ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಹಾವೇರಿ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಅಕ್ಕಿ ಆಲೂರ ಗ್ರಾ.ಪಂ.ಅಧ್ಯಕ್ಷ ಮಕಬುಲಖಾನ ಪಠಾಣ, ಬಾಳಂಬೀಡ, ಕೂಡಲ, ನರೇಗಲ್ ಸೇರಿದಂತೆ ವಿವಿಧ ಗ್ರಾ.ಪಂ.ಅಧ್ಯಕ್ಷರು, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಪೊಲೀಸ್ ಮಹಾ ನಿರ್ದೇಶಕ ರವಿಕಾಂತ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಆನಂದ ಗಡ್ಡದ್ದೇವರಮಠ ಇತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ತಹಶೀಲ್ದಾರ ರೇಣುಕಾ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 