ಲಕ್ಷ್ಮೇಶ್ವರದಲ್ಲಿ ಶಿಕ್ಷಕ ಈಶ್ವರ ನೇಕಾರರಿಗೆ ಸನ್ಮಾನ

ಲಕ್ಷ್ಮೇಶ್ವರದಲ್ಲಿ ಶಿಕ್ಷಕ ಈಶ್ವರ ನೇಕಾರರಿಗೆ ಸನ್ಮಾನ   Teacher Ishwar Nekara honored in Lakshmeshwara

ಲಕ್ಷ್ಮೇಶ್ವರ 28: 36 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಈಶ್ವರ ನೇಕಾರ ಅವರಿಗೆ ಅಭಿಮಾನದ ಅಭಿನಂದನಾ ಸಮಾರಂಭ ಹಾಗೂ ನೇಕಾರ ದಂಪತಿಗಳ ಷಷ್ಟ್ಯಬ್ಧಿ ಕಾರ್ಯಕ್ರಮ ಭಾನುವಾರ ಪಟ್ಟಣದ ನೂತನ ಅಂಬಾಭವಾನಿ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದಲ್ಲಿ ಸಂಭ್ರಮದಿಂದ ನಡೆಯಿತು.  

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ 36 ವರ್ಷಗಳ ಕಾಲ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸೌಮ್ಯ ಸ್ವಭಾವದಿಂದ ಸೇವೆ ಸಲ್ಲಿಸಿದ ಈಶ್ವರ ನೇಕಾರ ಅವರ ಸೇವೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.  

ಹಿರಿಯ ಸಾಹಿತಿ ಪೂರ್ಣಾಜಿ ಕರಾಟೆ ಮಾತನಾಡಿ, ಶಿಕ್ಷಣ ಸೇವೆ ಅತ್ಯಂತ ಶ್ರೇಷ್ಠವಾದುದು. ತಮ್ಮ ಸುದೀರ್ಘ ಸೇವೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಈಶ್ವರ ನೇಕಾರ ಅವರ ನಿವೃತ್ತಿ ಜೀವನ ಆರೋಗ್ಯ, ನೆಮ್ಮದಿ ಮತ್ತು ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶ್ವರ ನೇಕಾರ, ತಮ್ಮ ಸಾಧನೆಗೆ ತಂದೆ-ತಾಯಿ, ಅತ್ತೆ-ಮಾವ ಹಾಗೂ ಸಹೋದ್ಯೋಗಿ ಶಿಕ್ಷಕರ ಮಾರ್ಗದರ್ಶನ ಮತ್ತು ಸಹಕಾರವೇ ಕಾರಣ ಎಂದು ತಿಳಿಸಿದರು. 36 ವರ್ಷಗಳ ಶಿಕ್ಷಕ ವೃತ್ತಿ ಜೀವನವು ತಮಗೆ ಅಪಾರ ತೃಪ್ತಿ ನೀಡಿದ್ದು, ಎಲ್ಲರ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಜಿ.ಎಂ. ಮುಂದಿನಮನಿ, ಶಂಕರ್ ಕೋಳಿವಾಡ, ಬಿ.ಎಸ್‌. ಹರ್ಲಾಪುರ, ರಾಘವೇಂದ್ರ ಜ್ಯೋತಿ, ಪ್ರವೀಣ್ ಬಾಳಿಕಾಯಿ, ಬಸಣ್ಣ ಓದನವರ, ಬಸವರಾಜ ಕುಂಬಾರ, ಶರಣು ಸೋಗಿ, ಬಿ.ಎಂ. ಯರಗುಪ್ಪಿ ಸೇರಿದಂತೆ ಅನೇಕ ಶಿಕ್ಷಕರು, ಅಭಿಮಾನಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಗೀರೀಶ್ ನೇಕಾರ ಮತ್ತು ಹೆಚ್‌.ಡಿ. ನಿಂಗರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.