ರಾಯಬಾಗ 21: ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಅದರಲ್ಲಿಯೂ ಹೃದಯ ರೋಗದ ಕಾಳಜಿ ವಹಿಸುವುದು ಅತೀ ಅವಶ್ಯಕವಾಗಿದೆ ಎಂದು ಡಾ.ವರ್ಷಾ ವಿವೇಕರಾವ ಪಾಟೀಲ ಹೇಳಿದರು.
ಭಾನುವಾರ ಪಟ್ಟಣದ ವಿವೇಕಾನಂದ ಕನ್ನಡ ಶಾಲೆಯ ಆವರಣದಲ್ಲಿ ಆದರ್ಶ ಮಲ್ಟಿ ಸ್ಪೇಷಲಿಸ್ಟ್ ಆಸ್ಪತ್ರೆ ಅಂಕಲಿ ಹಾಗೂ ಅಭಾಜಿ ಫೌಂಡೇಶನ್ ರಾಯಬಾಗ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡಕರ ಅವರ ಜಯಂತಿಯ ನಿಮಿತ್ಯ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ದೊಡ್ಡ ಕಾಯಿಲೆಗಳಿಗೆ ಖರ್ಚು ಮಾಡುವಷ್ಟು ಬಡವರು ಶಕ್ತರಾಗಿರುವದಿಲ್ಲ. ಆದ್ದರಿಂದ ಇಂಥಹ ಉಚಿತ ಆರೋಗ್ಯ ಮೇಳಗಳಲ್ಲಿ ತಪಾಸಣೆ ಮಾಡಿಸಿಕೊಂಡು ಕಾಯಿಲೆ ಕಡಿಮೆ ಪ್ರಮಾಣದಲ್ಲಿರುವಾಗಲೇ ಚಿಕಿತ್ಸೆ ಪಡೆದುಕೊಂಡರೆ ಬೇಗನೇ ಗುಣಮುಖರಾಗಲು ಸಾದ್ಯವೆಂದರು. ಇಂದಿನ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುತ್ತಿರುವ ಬಂಜೆತನಕ್ಕೆ ಕಾರಣಗಳ ಕುರಿತು ವಿವರಿಸಿ ಬಂಜೆತನಕ್ಕೆ ಹೆದರುವ ಅವಶ್ಯಕತೆ ಇಲ್ಲ ವೈಜ್ಞಾನಿಕತೆ ಸಾಕಷ್ಟು ಮುಂದುವರೆದಿದೆ. ಸರಿಯಾದ ಸಮಯಕ್ಕೆ ಸರಿಯಾಗಿ ಓಷಧೋಪಚಾರ ಮಾಡಿಕೊಂಡರೆ ಯಾವುದೇ ತೊಂದರೆ ಇಲ್ಲವೆಂದರು.
ಡಾ.ರಾಹುಲ ಬಂತೆ, ಡಾ.ಐ.ಐ.ಮುಲ್ಲಾ, ಡಾ.ವಾಯ್.ಎಸ್.ಬಂತೆ ಆರೋಗ್ಯ ತಪಾಸಣೆ ನಡೆಸಿದರು. ಆಕರ್ಷ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯ ಮೆನೇಜಿಂಗ ಡೈರೆಕ್ಟರ ಡಾ.ದಯಾನಂದ ಕೋರೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆದರ್ಶ ಆಸ್ಪತ್ರೆಯ ಡಾ.ಆದರ್ಶ ವಸವಾಡೆ, ಡಾ.ಸೋನಾಲಿ ವಸವಾಡೆ, ಡಾ.ಪುರುಷೋತ್ತಮ ಹೂಗಾರ, ಡಾ.ಮಹೇಶ ಮನಗೂಳಿ ಹಾಗೂ ಅಭಾಜಿ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.