ರಾಜ್ಯದ ಡಿಜಿಟಲ್ ಆಡಳಿತದಲ್ಲಿ ಸೈಬರ್ ಭದ್ರತೆ ಬಲಪಡಿಸಲು ರಾಜ್ಯಮಟ್ಟದ ಕಾರ್ಯಾಗಾರ

ರಾಜ್ಯದ ಡಿಜಿಟಲ್ ಆಡಳಿತದಲ್ಲಿ ಸೈಬರ್ ಭದ್ರತೆ ಬಲಪಡಿಸಲು ರಾಜ್ಯಮಟ್ಟದ ಕಾರ್ಯಾಗಾರ  State-level workshop to strengthen cybersecurity in the state's digital governance

ಬಳ್ಳಾರಿ 13: ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಇ-ಆಡಳಿತ ಕೇಂದ್ರ, ಕರ್ನಾಟಕ ಸೈಬರ್ ಭದ್ರತಾ ಉತ್ಕೃಷ್ಟತಾ ಕೇಂದ್ರ ಹಾಗೂ ರಾಷ್ಟ್ರೀಯ ಇ-ಆಡಳಿತ ವಿಭಾಗದ ಸಹಯೋಗದಲ್ಲಿ ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ‘ರಾಜ್ಯ ದತ್ತಾಂಶಕ್ಕಾಗಿ ಸೈಬರ್ ಭದ್ರತಾ ಚೌಕಟ್ಟನ್ನು ಬಲಪಡಿಸುವುದು’ ವಿಷಯದ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಸೋಮವಾರ ನಡೆಯಿತು. ರಾಜ್ಯದ ಡಿಜಿಟಲ್ ಆಡಳಿತ ವ್ಯವಸ್ಥೆಯಲ್ಲಿ ಸೈಬರ್ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಾಗಾರದಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳು, ನಿಗಮಗಳು, ಮಂಡಳಿಗಳು ಹಾಗೂ ವಿವಿಧ ರಾಜ್ಯ ಸಂಸ್ಥೆಗಳ 80ಕ್ಕೂ ಅಧಿಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.  

ಸೈಬರ್ ಭದ್ರತಾ ಉತ್ಕೃಷ್ಟತಾ ಕೇಂದ್ರದ ಮುಖ್ಯಸ್ಥ ರಂಜಿತ್ ಮಿಶ್ರಾ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಕರ್ನಾಟಕ ಇನ್ನೋವೇಷನ್ ಮತ್ತು ಟೆಕ್ನಾಲಜಿ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.  

ಕಾರ್ಯಾಗಾರದಲ್ಲಿ ಭವಿಷ್ಯದ ಸೈಬರ್ ಭದ್ರತಾ ಸವಾಲುಗಳು, ಇ-ಆಡಳಿತದಲ್ಲಿ ಸೈಬರ್ ಸ್ಥಿತಿಸ್ಥಾಪಕತೆ  ನಾಗರಿಕರ ದತ್ತಾಂಶ ರಕ್ಷಣೆ, ಸರ್ಕಾರದ ಡಿಜಿಟಲ್ ಮೂಲಸೌಕರ್ಯದ ಭದ್ರತೆ ಹಾಗೂ ಸಮನ್ವಯಿತ ಭದ್ರತಾ ವ್ಯವಸ್ಥೆಗಳ ಅಗತ್ಯತೆ ಕುರಿತು ವಿಸ್ತೃತ ಚರ್ಚೆ ನಡೆಯಿತು.  ತಾಂತ್ರಿಕ ಅಧಿವೇಶನಗಳಲ್ಲಿ ರಾಜ್ಯ ದತ್ತಾಂಶ ಕೇಂದ್ರದ ಸೈಬರ್ ಭದ್ರತೆಯ ಅತ್ಯುತ್ತಮ ಪದ್ಧತಿಗಳು, ಕರ್ನಾಟಕದ ಏಕೀಕೃತ ಸೈಬರ್ ಭದ್ರತಾ ಕಾರ್ಯತಂತ್ರ, ವಿವಿಧ ಇಲಾಖೆಗಳು ಅನುಸರಿಸುತ್ತಿರುವ ಭದ್ರತಾ ಕ್ರಮಗಳು ಹಾಗೂ ಎದುರಿಸುತ್ತಿರುವ ಸವಾಲುಗಳ ಕುರಿತು ಪ್ರಾತ್ಯಕ್ಷಿಕೆಗಳು ಮತ್ತು ಪ್ರಸ್ತುತಿಗಳು ನಡೆದವು.