ಬೆಂಗಳೂರು 27: ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರವರ ಅವರ ಪ್ರಥಮ ಕಾಣಿಕೆ ನಟ ವಿಜಯ ರಾಘವೇಂದ್ರ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವ ‘ರುದ್ರಾಭಿಷೇಕಂ’ ಚಲನಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ.
ಸತತ 25 ದಿನಗಳ ಕಾಲ ಚಿತ್ರೀಕರಣ ಮುಗಿಸಿ, ಕಳೆದ ವಾರದಿಂದ ಎರಡು ಹಾಡುಗಳ ಚಿತ್ರೀಕರಣ ಸುಂದರ ನಿಸರ್ಗ ತಾಣಗಳಾದ ಕುಮಟಾ, ಕಾರವಾರ, ಹೊನ್ನಾವರ ಸುತ್ತಮುತ್ತ ನಡೆಸಿದ್ದು ,ಕಾರವಾರದ ಬಹುತೇಕ ಸ್ಥಳಗಳಲ್ಲಿ ಆಘನಾಶಿನಿ ಹಿನ್ನೀರ ತಾಣಗಳಲ್ಲಿ ಭರದಿಂದ ಚಿತ್ರೀಕರಣ ಸಾಗಿದೆ , ನಾಯಕ ಚಿನ್ನಾರಿ ಮುತ್ತ, ಕಲಾಕುಸುಮ, ವಿಜಯ ರಾಘವೇಂದ್ರ ಹಾಗೂ ನಾಯಕಿ ಪ್ರಿಯಾಂಕ ಜೋಡಿ ಎರಡು ಹಾಡುಗಳನ್ನು ನಿರ್ದೇಶಕ ವಸಂತ್ ಕುಮಾರ್ ಅವರ ನಿರ್ದೇಶನದಂತೆ ಖ್ಯಾತ ಕೋರಿಯೋಗ್ರಾಫರ್ ಭಜರಂಗಿ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದು, ಈಗಾಗಲೇ ಒಂದು ಹಾಡಿನ ಚಿತ್ರೀಕರಣ ಮುಗಿಸಿ ಇದೀಗ ಎರಡನೇ ಹಾಡು “ಹೃದಯದ ಬಾಗಿಲು ತೆರೆದರೆ ನೀನು ಅದರಲಿ ಬೆಚ್ಚಗೆ ಮಲಗಿಕೋ” ಚಿತ್ರೀಕರಣ ಭರ್ಜರಿಯಾಗೇ ನಡೆಸಿದೆ.
ಚಿತ್ರದಲ್ಲಿ ನಾಯಕರಾಗಿ ವಿಜಯರಾಘವೇಂದ್ರ, ನಾಯಕಿಯಾಗಿ ಪ್ರಿಯಾಂಕ , ಬಲರಾಜ್ ವಾಡಿ , ಶಂಕರ ನಾರಾಯಣ್, ಮೈಸೂರು ಬಸವರಾಜ್, ಬ್ಯಾಂಕ್ ಪ್ರಸಾದ, ಮನು, ಬುಲೆಟ್ ವಿನು, ವಿನಯ್, ಸನತ್, ಸಂದೀಪ್, ಮಹಾಲಿಂಗ್ ಹೂಗಾರ್, ಸೌಂದರ್ಯ, ನವನೀತ, ಮಮತಾ, ಮಂಜುಳಾ, ಧನಲಕ್ಷ್ಮಿ, ಸ್ವಾತಿ, ಪ್ರಿಯಾಂಕ್ ತಿಮ್ಮೇಶ ಮೊದಲಾದವರಿದ್ದಾರೆ.
ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ಮುತ್ತುರಾಜ್ , ವಿ.ಮನೋಹರ್ ಸಂಗೀತ ಚಿತ್ರಕ್ಕಿದ್ದು ಐದು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಥ್ರಿಲ್ಲರ್ಮಂಜು ಸಾಹಸ, ಬಾಬುಖಾನ್ ಕಲಾ ನಿರ್ದೇಶನ, ಮೇಕಪ್ ನೊಣವಿನಕೆರೆ ಕುಮಾರ , ವಸ್ತ್ರಾಲಂಕಾರ ಪಶುಪತಿ , ಸಂಕಲನ ಮುತ್ತುರಾಜ್ ಟಿ , ಪಿ. ಆರ್. ಓ. ನಾಗೇಂದ್ರ, ಡಾ. ಪ್ರಭು.ಗಂಜಿಹಾಳ, ಡಾ.ವೀರೇಶ್ ಹಂಡಿಗಿ , ಸಹ ನಿರ್ದೇಶನ ಮನು ಮತ್ತು ಧೀರಜ್ ಅವರದಿದ್ದು, ಕೆ ವಸಂತ್ ಕುಮಾರ್ ಅವರ ನಿರ್ದೇಶನ ಜೊತೆಗೆ ಚಿತ್ರಕ್ಕೆ ಅವರೇ ಐದು ಹಾಡುಗಳನ್ನು ಬರೆದಿದ್ದು ವಿಶೇಷವಾಗಿದೆ.
ಜಯರಾಮ್, ಮಂಜುನಾಥ್ ,ಚಿದಾನಂದ, ವೆಂಕಟೇಶ್, ಶಿವಕುಮಾರ್ ಮತ್ತು ಸ್ನೇಹಿತರು ನಿರ್ಮಾಪಕರಾಗಿದ್ದಾರೆ. ನಿರ್ಮಾಣ ಸಹಕಾರ ಅಶ್ವಥ್ ಮತ್ತು ಬಾಬು ಅವರದಿದೆ. ಅದಷ್ಟು ಬೇಗ ಚಿತ್ರೀಕರಣ ಮುಗಿಸಿ ಬೆಳ್ಳಿತರೆಗೆ ಬರಲಿದೆ ಎಂದು ನಿರ್ದೇಶಕ ಕೆ. ವಸಂತ್ ಕುಮಾರ್ ತಿಳಿಸಿದರು.