ಹಾಡಹಗಲೇ ಸಚಿವೆ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ

ಹಾಡಹಗಲೇ ಸಚಿವೆ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ Minister Hebbalkar's son's car driver stabbed in broad daylight


ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳಕರನ ಕಾರು ಚಾಲಕನಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾದ ಘಟನೆ ಮಂಗಳವಾರ  ಮಧ್ಯಾಹ್ನ ನಗರದ ಕ್ಲಬ್ ರಸ್ತೆಯಲ್ಲಿ ನಡೆದಿದೆ.

ತಾಲೂಕಿನ ಬೆಳಗುಂದಿ ಗ್ರಾಮದ ಬಸವಂತ ಗಣಪತ ಕಡೋಲಕರ ಎಂಬ ಕಾರು ಚಾಲಕನಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳು ಬಸವಂತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ಎದೆ, ಭುಜ, ತೊಡೆ ಸೇರಿ ನಾಲ್ಕು ಕಡೆಗೆ ಗಾಯಗಳಾಗಿವೆ.

ಮೃಣಾಲ್ ಅವರ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವಂತನಿಗೆ ಯಾವ ಕಾರಣಕ್ಕೆ ಚಾಕು ಹಾಕಲಾಗಿದೆ ಎಂಬುದು ಇನ್ನೂ ಮಾಹಿತಿ ಸಿಕ್ಕಿಲ್ಲ. ಖಾಸಗಿ ಆಸ್ಪತ್ರೆಗೆ ಮೃಣಾಲ್ ಹೆಬ್ಬಾಳಕರ ದೌಡಾಯಿಸಿದ್ದಾರೆ. ಬೈಕ್ ಮೇಲೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದಾರೆ.

ಚಾಕು ಇರಿದ ಕ್ಲಬ್ ರಸ್ತೆಯ ಬಿ. ಶಂಕರಾನಂದ ಅವರ ಮನೆ ಎದುರಿನ ಸ್ಥಳದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಾಕು ಇರಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ