ಲೋಕ ಅದಾಲತ್ ಸಾರ್ವಜನಿಕರಿಗೆ ಶೀಘ್ರ, ಉಚಿತ ಹಾಗೂ ಸೌಹಾರ್ದಯುತ ನ್ಯಾಯ ಒದಗಿಸುವ ವೇದಿಕೆ: ನ್ಯಾಯಾಧೀಶ

ಲೋಕ ಅದಾಲತ್ ಸಾರ್ವಜನಿಕರಿಗೆ ಶೀಘ್ರ, ಉಚಿತ ಹಾಗೂ ಸೌಹಾರ್ದಯುತ ನ್ಯಾಯ ಒದಗಿಸುವ ವೇದಿಕೆ:  ನ್ಯಾಯಾಧೀಶ  Lok Adalat is a platform that provides speedy, free, and amicable justice to the public: Judge

ಬಳ್ಳಾರಿ 11: ಲೋಕ ಅದಾಲತ್ ಸಾರ್ವಜನಿಕರಿಗೆ ಶೀಘ್ರ, ಉಚಿತ ಹಾಗೂ ಸೌಹಾರ್ದಯುತ ನ್ಯಾಯ ಒದಗಿಸುವ ಪರಿಣಾಮಕಾರಿ ವ್ಯವಸ್ಥೆಯಾಗಿದ್ದು, ನ್ಯಾಯಕ್ಕಾಗಿ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಹೇಳಿದರು.  

ನಗರದ ಜಿಲ್ಲಾ ನ್ಯಾಯಾಲಯದ ವಿಡಿಯೋ ಸಭಾಂಗಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯ ಪ್ರಮುಖ ವೇದಿಕೆಯಾಗಿರುವ ರಾಷ್ಟ್ರೀಯ ಲೋಕ ಅದಾಲತ್ ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.  

"ಎಲ್ಲರಿಗೂ ನ್ಯಾಯ, ಶೀಘ್ರ ನ್ಯಾಯ ಹಾಗೂ ಉಚಿತ ನ್ಯಾಯ" ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ವ್ಯವಸ್ಥೆಯು, ದೀರ್ಘಕಾಲದ ನ್ಯಾಯಾಂಗ ಪ್ರಕ್ರಿಯೆಯಿಂದ ಸಾರ್ವಜನಿಕರನ್ನು ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.  

ಸಾಮಾನ್ಯ ನ್ಯಾಯಾಲಯಗಳಲ್ಲಿ ವರ್ಷಗಳ ಕಾಲ ಬಾಕಿ ಉಳಿಯುವ ಪ್ರಕರಣಗಳಿಗೆ ಲೋಕ ಅದಾಲತ್ನಲ್ಲಿ ವಾದ-ಪ್ರತಿವಾದಗಳಿಲ್ಲದೆ, ಉಭಯ ಪಕ್ಷಗಳ ಪರಸ್ಪರ ಒಪ್ಪಂದದ ಮೂಲಕ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.  

ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಕುಟುಂಬ ಕಲಹಗಳು ಹಾಗೂ ಭೂಸ್ವಾಧೀನ ಪರಿಹಾರ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಬಹುದು ಎಂದು ವಿವರಿಸಿದರು.  

ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 36,188 ಬಾಕಿ ಪ್ರಕರಣಗಳ ಪೈಕಿ 8,882 ಪ್ರಕರಣಗಳನ್ನು ಲೋಕ ಅದಾಲತ್ಗೆ ಉಲ್ಲೇಖಿಸಲಾಗಿದ್ದು, ಅವುಗಳಲ್ಲಿ 4,957 ಪ್ರಕರಣಗಳು ಸೌಹಾರ್ದಯುತ ರಾಜಿ ಮೂಲಕ ಇತ್ಯರ್ಥಗೊಂಡಿವೆ ಎಂದು ಮಾಹಿತಿ ನೀಡಿದರು.