ರಸ್ತೆ ಕಾಮಗಾರಿ ಮೊದಲು ಭೂಸರ್ವೆಗೆ ಒತ್ತಾಯ

ರಸ್ತೆ ಕಾಮಗಾರಿ ಮೊದಲು ಭೂಸರ್ವೆಗೆ ಒತ್ತಾಯ   Land survey required before road works

ಲೋಕದರ್ಶನ ವರದಿ 

 ಕಂಪ್ಲಿ 29 : ತಾಲೂಕಿನ ಹೊನ್ನಹಳ್ಳಿ ಗ್ರಾಮದ ಸರ್ವೇ ನಂ.36, 38 ಹಾಗೂ 39ರ ಭೂಮಿಗಳಿಗೆ ಹೊಂದಿಕೊಂಡಿರುವ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವ ಮೊದಲು ಅಧಿಕೃತ ಸರ್ವೆ ನಡೆಸಿ ರೈತರ ಪಟ್ಟ ಭೂಮಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವ ಜೊತೆಗೆ ಜಮೀನು ಹದ್ದುಬಸ್ತು ಮಾಡುವವರೆಗೂ ಮನೆಗಳ ತೆರವು ಮಾಡಬಾರದೆಂದು ಆಗ್ರಹಿಸಿ, ಪಿಂಜಾರ್ ನದಾಫ್ ಸಂಘದ ನೇತೃತ್ವದಲ್ಲಿ ಹೊನ್ನಳ್ಳಿ ಗ್ರಾಮಸ್ಥರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮನವಿ ಪತ್ರ ಸೋಮವಾರ ಸಲ್ಲಿಸಿದರು. ನಂತರ ಪಿಂಜಾರ್ ನದಾಫ್ ಸಂಘದ ಅಧ್ಯಕ್ಷ ಓ.ಎಸ್‌.ದಾದಾಪೀರ್ ಮಾತನಾಡಿ, ಹೊನ್ನಹಳ್ಳಿ ಗ್ರಾಮದ ಸರ್ವೇ ನಂ. 36, 38 ಹಾಗೂ 39 ರಲ್ಲಿರುವ ನಮ್ಮ ಪಟ್ಟ ಭೂಮಿಗಳು ಗ್ರಾಮದ ರಸ್ತೆಗೆ ಹೊಂದಿಕೊಂಡಿವೆ.

ಪ್ರಸ್ತುತ ಸರ್ಕಾರ ರಸ್ತೆ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಕಾಮಗಾರಿಗೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ, ರಸ್ತೆ ಅಭಿವೃದ್ಧಿ ಕಾಮಗಾರಿಯ ನೆವದಲ್ಲಿ ಗುತ್ತಿಗೆದಾರರು ರಸ್ತೆ ವ್ಯಾಪ್ತಿಯನ್ನು ಮೀರಿ ನಮ್ಮ ಪಟ್ಟ ಭೂಮಿಯನ್ನು ಬಳಸಲು ಮುಂದಾಗಿರುವುದರಿಂದ ನಮಗೆ ಅನ್ಯಾಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಜೀವನೋಪಾಯವು ಈ ಅಲ್ಪ ಪ್ರಮಾಣದ ಕೃಷಿ ಭೂಮಿಯನ್ನೇ ಅವಲಂಬಿಸಿರುವುದರಿಂದ, ಯಾವುದೇ ಕಾನೂನುಬದ್ಧ ಭೂಸ್ವಾಧೀನ ಪ್ರಕ್ರಿಯೆ ಅಥವಾ ಅಧಿಕೃತ ಸರ್ವೆ ನಡೆಸದೆ ನಮ್ಮ ಭೂಮಿಯನ್ನು ರಸ್ತೆಗೆ ಬಳಸುವುದು ನಮ್ಮ ಹಕ್ಕುಗಳಿಗೆ ಧಕ್ಕೆ ಉಂಟುಮಾಡುತ್ತದೆ.