ಬಳ್ಳಾರಿಯಲ್ಲಿ ಜಂಟಿ ಕಾರ್ಯಾಚರಣೆ: 7 ಬಾಲಕಾರ್ಮಿಕರ ರಕ್ಷಣೆ, ಮಾಲೀಕರ ವಿರುದ್ಧ ಪ್ರಕರಣ ದಾಖಲು

ಬಳ್ಳಾರಿಯಲ್ಲಿ ಜಂಟಿ ಕಾರ್ಯಾಚರಣೆ: 7 ಬಾಲಕಾರ್ಮಿಕರ ರಕ್ಷಣೆ, ಮಾಲೀಕರ ವಿರುದ್ಧ ಪ್ರಕರಣ ದಾಖಲು Joint operation in Bellary: 7 child laborers rescued, case registered against employer

ಬಳ್ಳಾರಿ 23:  ನಗರದ ವಿವಿಧ ಉದ್ದಿಮೆಗಳ ಮೇಲೆ ಮಂಗಳವಾರ ಜಂಟಿ ಜಾಗೃತ ದಳ (ಟಾಸ್ಕ್‌ ಫೋರ್ಸ್‌) ದಾಳಿ ನಡೆಸಿ, 7 ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಚೈಲ್ಡ್‌ಲೈನ್ ಸಂಸ್ಥೆಗಳ ಸಹಯೋಗದಲ್ಲಿ ಈ ದಾಳಿ ನಡೆದಿದೆ. 

ಬಳ್ಳಾರಿ ನಗರದ ಬೆಂಗಳೂರು ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ರೈಸ್ ಮಿಲ್, ಕೃಷಿ ದಸ್ತಾನು ಉಗ್ರಾಣ, ಎಸ್‌.ಪಿ. ಸರ್ಕಲ್ ಹತ್ತಿರದ ಗ್ಯಾರೇಜ್, ಹೋಟೆಲ್ ಮತ್ತು ಬೇಕರಿ ಸೇರಿದಂತೆ ಸುಮಾರು 25 ಉದ್ದಿಮೆಗಳ ಮೇಲೆ ಏಕಕಾಲದಲ್ಲಿ ಪರೀಶೀಲನೆ ನಡೆಸಲಾಯಿತು. ರಕ್ಷಿಸಲ್ಪಟ್ಟ ಒಟ್ಟು 7 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಮಕ್ಕಳ ವಯಸ್ಸಿನ ದಾಖಲೆಗಳನ್ನು ಪರೀಶೀಲಿಸಿದ ನಂತರ, ಬಾಲಕಾರ್ಮಿಕ ಕಾಯ್ದೆಯಡಿ ತಪ್ಪು ಎಸಗಿದ ಮಾಲೀಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಅಂಗಡಿ ಮತ್ತು ಉದ್ದಿಮೆಗಳ ಮಾಲೀಕರಿಗೆ ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳದಂತೆ ಎಚ್ಚರಿಕೆ ನೀಡಿ, ಪೋಸ್ಟರ್‌ಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು. ಈ ವಿಶೇಷ ಟಾಸ್ಕ್‌ ಫೋರ್ಸ್‌ ಸಮಿತಿಯಲ್ಲಿ ಉಪತಹಶೀಲ್ದಾರ್ ಮಂಜುನಾಥ್, 2ನೇ ವೃತ್ತದ ಕಾರ್ಮಿಕ ನೀರೀಕ್ಷಕ ಪರಶುರಾಮ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ನಿರ್ದೇಶಕ ಎ. ಮೌನೇಶ್, ಎಸ್‌ಜೆಪಿಯು ಹಕ್ಕಪಡೆ ಸಿಬ್ಬಂದಿ ಲಲಿತಮ್ಮ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹೊನ್ನೂರ​‍್ಪ, ಚೈಲ್ಡ್‌ ಲೈನ್ ಸಿಬ್ಬಂದಿ ಕಿರಣ್, ಪ್ಯಾರಾಲೀಗಲ್ ಸ್ವಯಂಸೇವಕಿ ಲಕ್ಷ್ಮಿದೇವಿ ಹಾಗೂ ರೀಚ್ ಸಂಸ್ಥೆಯ ಹನುಮಂತಪ್ಪ ಉಪಸ್ಥಿತರಿದ್ದರು.