ಹೊಳಗುಂದಿ ಮಳೆಗಾಗಿ ರೈತ ಮಹಿಳೆಯರಿಂದ ಗುರ್ಜಿ ಪೂಜೆ

ಹೊಳಗುಂದಿ ಮಳೆಗಾಗಿ ರೈತ ಮಹಿಳೆಯರಿಂದ ಗುರ್ಜಿ ಪೂಜೆ  Farmer women perform Gurji puja for abundant rain

ಲೋಕದರ್ಶನ ವರದಿ  

ಹೂವಿನಹಡಗಲಿ 19:     ಗುರ್ಜಿ, ಗುರ್ಜಿ ಹಳ್ಳಾಡಿ ಬಂದೆ, ಹಳ್ಳಕೊಳ್ಳ ತೀರಿಗ್ಯಾಡಿ ಬಂದೆ, ಕಾರ ಮೇಳೆಯೋ ಕಪ್ಪತ್ತು ಮಳೆಯೋ, ಸುರಿಸುರಿ ಸುರಿಯೋ ಮಳೆಯೋ.... ಎಂದು ಗ್ರಾಮೀಣ ಪ್ರದೇಶದಲ್ಲಿ ಮಳೆಗಾಗಿ ರೈತ ಮಹಿಳೆಯರು ಪ್ರಾರ್ಥಿಸಿದರು.ಆರಂಭದಲ್ಲಿ ಸುರಿದ ಆಶಾದಾಯಕ ಮಳೆಯಿಂದಾಗಿ ರೈತರು ಹುಮ್ಮಸ್ಸಿನಿಂದ ಮುಂಗಾರಿನ ಬಿತ್ತನೆ ಮಾಡಿದ್ದು, ಈಗ ಮಳೆ ಮಾಯವಾಗಿ, ಬೇಸಿಗೆ ಕಾಲದಂತೆ ಬಿಸಿಲು ಬಿದ್ದಿದೆ. ಇದರಿಂದ ರೈತ ಸಮುದಾಯ ಸಂಕಷ್ಟಕ್ಕೆ ಈಡಾಗಿದೆ. ಹೀಗಾಗಿ ರೈತ ಮಹಿಳೆಯರು ಮತ್ತು ರೈತರ ಮಕ್ಕಳಿಂದ ಮಳೆಗಾಗಿ ಗುರ್ಜಿ ಪೂಜೆಗೆ ಮೊರೆ ಹೋಗಿದ್ದಾರೆ. ರೊಟ್ಟಿಯ ಹೆಂಚನ್ನು ಬಾಲಕ ವಿ.ಅಂಬರೀಶ್ ತಲೆಯ ಮೇಲೆ ಹೊತ್ತು ಸೆಗಣಿಯಿಂದ ಗುರ್ಜಿ ಮಾಡಿ ಹೆಂಚಿನ ಮೇಲೆ ಇಟ್ಟು ಓಣಿ ಓಣಿ ತಿರುಗಿದರು.

ವಿಶಿಷ್ಟ ರೀತಿಯಲ್ಲಿ ಹಾಡುತ್ತ ಪರಸ್ಪರ ನೀರು ಎರಚಿಕೊಳ್ಳುತ್ತ, ಪರಿಪರಿಯಾಗಿ ಮಳೆರಾಯನನ್ನು ಪ್ರಾರ್ಥಿಸಿದರು. ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ,ಹೈಬ್ರೀಡ್ ಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಭೂಮಿ ಒಡಲಲ್ಲಿ ಬಿತ್ತನೆ ಮಾಡಲಾಗಿದ್ದು ತೇವಾಂಶ ಕೊರತೆಯಿಂದಾಗಿ ಬೀಜ ಮೊಳಕೆ ಒಡೆದು ಬಾಡುತ್ತಿದೆ. ದುಬಾರಿ ಬೀಜ ಗೊಬ್ಬರ ತಂದು ಭೂಮಿಗೆ ಹಾಕಿದ್ದು ನಾಲೈದು ದಿನದಲ್ಲಿ ಮಳೆ ಆಗದಿದ್ದರೆ ಮೊಳಕೆಯ ಬೀಜ ಕಮರಿ ಹೋಗುತ್ತವೆ ಎಂದು ರೈತ ಮಹಿಳೆರಾದ ಸಿದ್ಲಿಂಗಮ್ಮ, ನೇವಾರ ಮಲ್ಲಮ್ಮ, ಮುದೇಗೌಡ್ರ ರತ್ನಮ್ಮ, ಸುಶೀಲಮ್ಮ, ಬಡಿಗೇರ ರೇಖಾ, ಹೆಚ್‌.ಎಂ. ಅಕ್ಕಮ್ಮ  ಎಂದು ಆತಂಕ ವ್ಯಕ್ತಪಡಿಸಿದರು.ಮಳೆದೇವ ಮಳೆ ಸುರಿಸುವಂತೆ ಪ್ರಾರ್ಥನೆ ಮಾಡಿದರು.