ಸನಾತನ ಸಂಸ್ಕೃತಿಯನ್ನು ಮರೆಯಬೇಡಿ: ಕೃಷ್ಣ ಹಡಪದ ಮನವಿ

ಸನಾತನ ಸಂಸ್ಕೃತಿಯನ್ನು ಮರೆಯಬೇಡಿ: ಕೃಷ್ಣ ಹಡಪದ ಮನವಿ  Do not forget Sanatana culture: Krishna Hadapada's appeal

ಗದಗ, ಜು.10: ಭಾರತೀಯ ಸಂಸ್ಕೃತಿಗೆ ವಿಶ್ವ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ನಮ್ಮ ಹಿರಿಯರು ರೂಪಿಸಿದ ಪ್ರತಿಯೊಂದು ಸಂಪ್ರದಾಯದ ಹಿಂದೆ ವೈಜ್ಞಾನಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮಹತ್ವ ಅಡಗಿದೆ. ವಿಶೇಷವಾಗಿ ಮಹಿಳೆಯರ ಗೌರವ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಸನಾತನ ಪದ್ಧತಿಗಳನ್ನು ಇಂದಿನ ಪೀಳಿಗೆ ಆಧುನಿಕತೆಯ ಹೆಸರಿನಲ್ಲಿ ಕಡೆಗಣಿಸುತ್ತಿರುವುದು ಆತಂಕಕಾರಿ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣ ಎಚ್‌. ಹಡಪದ ಅಭಿಪ್ರಾಯಪಟ್ಟಿದ್ದಾರೆ.  

ಪತ್ರಿಕಾ ಪ್ರಕಟಣೆಯಲ್ಲಿ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರು ಸೀರೆ ಧರಿಸುವುದು, ಹಣೆಗೆ ಕುಂಕುಮ ಇಡುವುದು, ಕೈಗೆ ಬಳೆ ಧರಿಸುವುದು, ಕಾಲಿಗೆ ಗಜ್ಜೆ ಅಥವಾ ಬೆಳ್ಳಿಯ ಸರ ಧರಿಸುವುದು ಸೇರಿದಂತೆ ಹಲವು ಸಂಪ್ರದಾಯಗಳು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ, ಆರೋಗ್ಯ, ಸೌಭಾಗ್ಯ ಹಾಗೂ ಸಾಮಾಜಿಕ ಗೌರವದ ಸಂಕೇತಗಳಾಗಿವೆ ಎಂದು ಹೇಳಿದರು.  ಆದರೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಸಾಂಪ್ರದಾಯಿಕ ಉಡುಪು ಹಾಗೂ ಆಚರಣೆಗಳು ಕ್ರಮೇಣ ಕಡಿಮೆಯಾಗುತ್ತಿವೆ. ಕುಂಕುಮ, ಬಳೆ ಸೇರಿದಂತೆ ಅನೇಕ ಸಂಪ್ರದಾಯಗಳನ್ನು ನಿರ್ಲಕ್ಷಿಸುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದು ನಮ್ಮ ಮೂಲ ಸಂಸ್ಕೃತಿಯಿಂದ ದೂರವಾಗುತ್ತಿರುವುದಕ್ಕೆ ಸಂಕೇತವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.  

ಭಾರತೀಯ ನಾರಿ ಸಂಸ್ಕಾರ, ಶೀಲ ಮತ್ತು ಜೀವನ ಮೌಲ್ಯಗಳನ್ನು ವಿಶ್ವವೇ ಗೌರವಿಸುತ್ತಿದೆ. ಆದ್ದರಿಂದ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಹಿರಿಯರು ನೀಡಿದ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕೃಷ್ಣ ಹಡಪದ ಹೇಳಿದರು.  ಗದಗ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ದೇಶದ ಮಹಿಳೆಯರು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಮರೆಯದೆ ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.