ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯ-ಸಚಿವ ಶಿವರಾಜ ತಂಗಡಗಿ

ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯ-ಸಚಿವ ಶಿವರಾಜ ತಂಗಡಗಿ Decision taken to release water to Tungabhadra canals for only 90 days – Minister Shivaraj Tangadagi

ಬಳ್ಳಾರಿ 12: ತುಂಗಭದ್ರಾ ಜಲಾಶಯದಲ್ಲಿ ಸದ್ಯ 82 ಟಿಎಂಸಿ ನೀರು ಶೇಖರಣೆಯಾಗಿದ್ಧು, ಈ ಲಭ್ಯತೆ ಆಧರಿಸಿ ಕಾಲುವೆಗಳಿಗೆ 90 ದಿನಗಳ ಅವಧಿವರೆಗೆ ಮಾತ್ರ ನೀರು ಹರಿಸಲು ಸಚಿವ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುನಿರಾಬಾದ್‌ನ ಕಾಡಾ ಟಿ.ಬಿ.ಪಿ. ಸಭಾಂಗಣದಲ್ಲಿ ಮಂಗಳವಾರ ನಡೆದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು. ಸದ್ಯ ಈಗ ಜಲಾಶಯದಲ್ಲಿ 82 ಟಿಎಂಸಿ ನೀರು ಇದೆ. 

120 ದಿನಗಳವರೆಗೆ ನೀರು ಹರಿಸಲು ಜಲಾಶಯದಲ್ಲಿ 16 ಟಿಎಂಸಿ ನೀರಿನ ಕೊರತೆಯಿದೆ. ಮುಂದಿನ ದಿನಗಳಲ್ಲಿ ಇನ್ನು 16 ಟಿಎಂಸಿ ನೀರು ಬರುತ್ತದೆ ಎಂದು ನೀರೀಕ್ಷಿಸಲಾಗಿದೆ. ಕುಡಿಯುವ ನೀರಿಗಾಗಿ ಜಲಾಶಯದಲ್ಲಿ 10 ಟಿಎಂಸಿ ನೀರು ಇಟ್ಟುಕೊಳ್ಳಲೇಬೇಕಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ರೈತರ ಬೇಡಿಕೆಯಂತೆ 120 ಗಳವರೆಗಾದರು ಸದ್ಯ ಕಾಲುವೆಗಳಿಗೆ ನೀರು ಹರಿಸುವುದು ತುಂಬಾ ಅಗತ್ಯವಿದೆ ಎಂದು ಸಚಿವ ಬಿ.ನಾಗೇಂದ್ರ ಹಾಗೂ ಶಾಸಕರಾದ ಜೆ.ಎನ್ ಗಣೇಶ ಮತ್ತು ಬಿ.ಎಂ ನಾಗರಾಜ ಅವರು ಸಲಹೆ ಮಾಡಿದರು. 

ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳ ಶಾಸಕರು ಸಹ ಕಾಲುವೆಗಳಿಗೆ ತುರ್ತಾಗಿ ನೀರು ಬಿಡಲು ಸಲಹೆ ಮಾಡಿದ್ದಾರೆ. ಕಾಲುವೆಗಳಿಗೆ ಸದ್ಯ ನೀರು ಹರಿಸಲೇಬೇಕು ಎಂದು ಬೆಳಗ್ಗೆ ರೈತ ಮುಖಂಡರು ಸಹ ಹಕ್ಕೋತ್ತಾಯ ಮಾಡಿದ್ದಾರೆ. ಎಲ್ಲರ ಸಲಹೆಯಂತೆ ನೀರಿನ ಲಭ್ಯತೆ ಆಧರಿಸಿ ಸದ್ಯ 90 ದಿನಗಳ ಅವಧಿವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸುವುದು ಸೂಕ್ತ ಎಂದು ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಲಾಯಿತು.*ಸೆಪ್ಟೆಂಬರ್ 11ಕ್ಕೆ ಪುನಃ ಸಭೆ:* 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಲುವೆಗೆ ನೀರು ಹರಿಸುವ ಸಂಬಂಧ ಬೆಳಗ್ಗೆ ರೈತರ ಸಲಹೆ ಪಡೆಯಲಾಗಿದೆ. ಬಳಿಕ ಈ ಭಾಗದ ಎಲ್ಲ ಜನ ಪ್ರತಿನಿಧಿಗಳ ಸಭೆ ನಡೆಸಿ ಅವರ ಸಲಹೆ ಪಡೆಯಲಾಗಿದೆ. ಎಲ್ಲರ ಸಲಹೆ ಪಡೆದುಕೊಂಡೇ ಸದ್ಯ 90 ದಿನಗಳವರೆಗೆ ಮಾತ್ರ ಕಾಲುವೆ ನೀರು ಹರಿಸಲು ನಿರ್ಣಯಿಸಲಾಗಿದೆ. ಸದ್ಯ ಜಲಾಶಯದಲ್ಲಿ ಇರುವ ನೀರಿನ ಲಭ್ಯತೆ ಆಧರಿಸಿಯೇ ಈಗ 90 ದಿನಗಳಿಗೆ ಮಾತ್ರ ನೀರು ಹರಿಸಲು ರೈತರಿಗೆ ಗ್ಯಾರಂಟಿ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ನೀರು ಹರಿಸುವುದನ್ನು ಮಳೆ ಆಧರಿಸಿಯೇ ನಿರ್ಧರಿಸುತ್ತೇವೆ. ಈ ಬಗ್ಗೆ ಚರ್ಚಿಸಲು ಮುಂದಿನ ತಿಂಗಳು ಸೆಪ್ಟೆಂಬರ್ 11ಕ್ಕೆ ಪುನಃ ಸಭೆ ನಡೆಸಿ ಚರ್ಚಿಸುತ್ತೇವೆ ಎಂದು ಸಚಿವರು ತಿಳಿಸಿದರು. 

ಸಭೆಯಲ್ಲಿ ಸಚಿವರಾದ ಬಿ ನಾಗೇಂದ್ರ, ಕಾಡಾ ಅಧ್ಯಕ್ಷರಾದ ಹಸನಸಾಬ ನಬಿಸಾಬ ದೋಟಿಹಾಳ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ, ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ, ಜಾಹ್ನವಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಂಜಿನಿಯರ್ ಮನೋಜಕುಮಾರ ಗಡಬಳ್ಳಿ, ಮುನಿರಾಬಾದನ ತುಂಗಭದ್ರಾ ಯೋಜನೆ ವೃತ್ತ ಅಧೀಕ್ಷಕ ಅಭಿಯಂತರ ಎಸ್‌.ಬಿ ಮಲ್ಲಿಗವಾಡ, ಯರಮರಸನ ತುಂಗಭದ್ರಾ ಕಾಲುವೆ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರ ಸತ್ಯ ನಾರಾಯಾಣ ಶೆಟ್ಟಿ ಹಾಗೂ ಇನ್ನಿತರರು ಇದ್ದರು.