ನವದೆಹಲಿ 22: ಜನಪ್ರಿಯ ಪಾನೀಯ ರೂಹ್ ಅಫ್ಜಾವನ್ನು ಗುರಿಯಾಗಿರಿಸಿಕೊಂಡು “ಶರಬತ್ ಜಿಹಾದ್ “ನಂತಹ ಪದಗಳನ್ನು ಬಳಸಿದ ಬಾಬಾ ರಾಮ್ ದೇವ್ ವಿರುದ್ಧ ದೆಹಲಿ ಹೈಕೋರ್ಟ್ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹಮ್ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ ರಾಮ್ದೇವ್ ಅವರ ಪತಂಜಲಿ ಫುಡ್ಸ್ ಲಿಮಿಟೆಡ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್, ಈ ಹೇಳಿಕೆಯು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಆಘಾತಗೊಳಿಸುವಂತಿದೆ. ಇಂತಹ ಹೇಳಿಕೆಗಳು ಸಮರ್ಥನೀಯವಲ್ಲ. ಈ ರೀತಿ ಮಾತನಾಡುವಾಗ ಗಮನವಿಟ್ಟುಕೊಳ್ಳುವಂತೆ ನಿಮ್ಮ ಕಕ್ಷಿದಾರರಿಗೆ ಹೇಳಿ. ಇಲ್ಲದಿದ್ದರೆ, ನ್ಯಾಯಾಲಯದಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಮ್ದೇವ್ ಪರ ವಕೀಲರಿಗೆ ಸೂಚಿಸಿದೆ.
“ಒಂದು ವೇಳೆ ನೀವು ಆ ಶರಬತ್ ಕುಡಿದರೆ, ಮದರಸಾ ಮತ್ತು ಮಸೀದಿಗಳನ್ನು ಕಟ್ಟುತ್ತಾರೆ. ಆದರೆ ಒಂದು ವೇಳೆ ನೀವು ಈ (ಪತಂಜಲಿ ರೋಸ್ ಶರಬತ್) ಪಾನೀಯ ಕುಡಿದರೆ ಗುರುಕುಲ ನಿರ್ಮಿಸುತ್ತೇವೆ, ಪತಂಜಲಿ ಯೂನಿರ್ವಸಿಟಿಯನ್ನು ವಿಸ್ತರಿಸುತ್ತೇವೆ ಮತ್ತು ಭಾರತೀಯ ಶಿಕ್ಷಣ ಮಂಡಳಿ ಅಭಿವೃದ್ಧಿಯಾಗುತ್ತದೆ” ಎಂದು ಬಾಬಾ ರಾಮ್ ದೇವ್ ಹೇಳಿದ್ದರು. ನಂತರ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ರಾಮದೇವ್, ತಾವು ಯಾವುದೇ ಬ್ರ್ಯಾಂಡ್ ಅಥವಾ ಸಮುದಾಯವನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ ಎಂದಿದ್ದರು.
ಹಮ್ದರ್ದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಈ ಪ್ರಕರಣವು ಅವಹೇಳನವನ್ನು ಮೀರಿದ್ದು, ಇದು ಕೋಮು ವಿಭಜನೆಯನ್ನು ಸೃಷ್ಟಿಸುವ ಪ್ರಕರಣವಾಗಿದೆ. ಇದು ದ್ವೇಷ ಭಾಷಣಕ್ಕೆ ಸಮನಾಗಿದೆ. 'ಶರಬತ್ ಜಿಹಾದ್' ಎಂದು ಅವರು ಹೇಳುತ್ತಾರೆ. ಅವರು ಅವರ ವ್ಯವಹಾರವನ್ನು ನೋಡಿಕೊಳ್ಳಲಿ. ನಮಗೇಕೆ ತೊಂದರೆ ನೀಡುತ್ತಿದ್ದಾರೆ?' ಎಂದು ಪ್ರಶ್ನಿಸಿದರು.