5ನೇ ಹಣಕಾಸು ಸಭೆ: ಜನರ ಅಭಿವೃದ್ಧಿಗೆ ಸಹಕಾರ: ನಾರಾಯಣಸ್ವಾಮಿ
ಹಾವೇರಿ 04: ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಯಾಗಲು ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮಾಹಿತಿ ನೀಡಿ ಜಿಲ್ಲೆಯ ಜನರ ಅಭಿವೃದ್ಧಿ ಕನಸಿಗೆ ಆಯೋಗ ಸಹಾಯ ಮಾಡಲಿದೆ ಎಂದು ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಜರುಗಿದ 5ನೇ ಹಣಕಾಸು ಆಯೋಗದ ಸಭೆಯಲ್ಲಿ ಜನರ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆ ಹಲವಾರು ಮಹಾನ್ ನಾಯಕರಿಗೆ ಜನ್ಮತಾಳಿದ ಸ್ಥಳವಾಗಿದೆ. ಜಿಲ್ಲೆಯಾಗಿ 25 ವರ್ಷಕ್ಕಿಂತ ಹೆಚ್ಚು ವರ್ಷಗಳಾದವು. ಜಿಲ್ಲೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ನಗರಸಭೆಯ ಜನಪ್ರತಿನಿಧಿಗಳು ತಿಳಿಸಿದ್ದೀರಿ. ಅಭಿವೃದ್ಧಿಯಾಗಲು ಹಣಕಾಸಿನ ಅಗತ್ಯದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಜಿಲ್ಲೆಯ ಪರಿಪೂರ್ಣ ಚಿತ್ರಣದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಹಣಕಾಸು ನೀಡಲು ವರದಿಯಲ್ಲಿ ಉಲ್ಲೇಖ ಮಾಡಿ ತಮಗೆ ಹಣಕಾಸು ಬರಲು ಸಹಕಾರ ನೀಡಲಾಗುವುದು ಎಂದು ಅಧ್ಯಕ್ಷರಾದ ಸಿ ನಾರಾಯಣಸ್ವಾಮಿ ಅವರು ಭರವಸೆ ನೀಡಿದರು.
ನಗರಸಭೆ ಪೌರಾಯುಕ್ತರಾದ ಗಂಗಾಧರ ಅವರು ಸಭೆಯಲ್ಲಿ ನಗರದ ಹಾಗೂ ನಗರಸಭೆಯ ಆಡಳಿತ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ವರದಿ ಮಂಡಿಸಿ ಚರ್ಚಿಸಲಾಯಿತು. ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯರಾದ ಐ ಯು ಪಠಾಣ ಚನ್ನಮ್ಮ ಬ್ಯಾಡಗಿ, ಶಿವಯೋಗಿ ಹುಲಿ ಕಂತಿಮಠ, ಪ್ರಸನ್ನ ಧಾರವಾಡಕರ, ನಾಗರಾಜ ತಳವಾರ, ನಾಗರಾಜ ಬಡೆಮ್ಮನವರ ಸೇರಿದಂತೆ ಅನೇಕರು ಸಭೆಯಲ್ಲಿ ಹಣಕಾಸು ಆಯೋಜದ ಮುಂದೆ ಅಭಿವೃದ್ಧಿಗೆ ಹೆಚ್ಚಿನ ಹಣಕಾಸಿನ ನೆರವಿಗೆ ಒತ್ತಾಯಿಸಿದರು.
ಇದೇ ಅವಧಿಯಲ್ಲಿ ಆಯೋಗದ ಅಧ್ಯಕ್ಷರಾದ ಸಿ ನಾರಾಯಣಸ್ವಾಮಿ ಹಾಗೂ ನಿಯೋಗದ ಎಲ್ಲಾ ಸದಸ್ಯರಿಗೆ ನಗರಸಭೆ ವತಿಯಿಂದ ಸವಿನೆನಪಿನ ಕಾಣಿಕೆಯೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ 5ನೇ ಹಣಕಾಸು ಆಯೋಗದ ಸದಸ್ಯರು, ನಗರಸಭೆ ಸದಸ್ಯರು, ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.