ಅನಾಥ ಹುಡುಗನ ಪ್ರೀತಿಯ ಹುಡುಕಾಟದಲ್ಲಿ ಋತುವಿನ ಒಲವು

ಅನಾಥ ಹುಡುಗನ ಪ್ರೀತಿಯ ಹುಡುಕಾಟದಲ್ಲಿ ಋತುವಿನ ಒಲವು The season's affection in an orphan boy's search for love

ಲೋಕದರ್ಶನ ವರದಿ 

ನಾವು ಇಷ್ಟಪಡುವವರು ಸಿಗದಿದ್ದರು, ನಮ್ಮನ್ನು ಇಷ್ಟ ಪಡುವವರು ಸಿಕ್ಕಾಗ ಲೈಫ್ ಸೂಪರ್ ಎಂಬ ಮಾತಿದೆ. ಆದರೆ, ಆ ಪ್ರೀತಿ ಕೂಡ ಅರ್ಧದಲ್ಲೇ ಕೈ ಕೊಟ್ಟರೆ! ಏನಾಗುತ್ತೆ ಎಂಬುದರ ಮೇಲೆ 'ಲವ್ ಸೀಸನ್ಸ್‌' ಸಿನಿಮಾ ಸಾಗುತ್ತದೆ. ಅನಾಥನಾದ ರಾಮ್ (ಮುಕುಂದ ರಾಮಸ್ವಾಮಿ) ಆಸರೆ ಫೌಂಡೇಶನ್‌ನಲ್ಲಿ ಓದುತ್ತಾ ಬೆಳೆದವ. ಇವನಿಗೆ ಮೊದಲ ಕ್ರಶ್ ಆದದ್ದು ಸ್ಕೂಲ್ ಡೇಸ್‌ನಲ್ಲಿ. ಅದು ಕೂಡ ಒನ್ ಸೈಡ್ ಪ್ರೀತಿ. ನಂತರ ಡಿಗ್ರಿಯಲ್ಲಿ ರಷಿಕಾ (ಶ್ವೇತಾ ಕೊಗ್ಲೂರು) ಮೇಲೆ ಲವ್ ಆಯ್ತು. ಅವಳಿಗಾಗಿ ಅನಾಥಾಶ್ರಮ ಬಿಟ್ಟು ಬಂದ ರಾಮ್‌. ಆದರೆ ಆ ಪ್ರೀತಿಯಲ್ಲಿ ಅವನಿಗೆ ಮೋಸ ಆಯ್ತು. ಈ ಪ್ರೀತಿ ಗೀತಿ ಪುಸ್ತಕದ ಬದನೆಕಾಯಿ ಎಂದು ಅರಿತು ತನ್ನಷ್ಟಕ್ಕೇ ತಾನು ಲೈಫ್ ಲೀಡ್ ಮಾಡುತ್ತಿದ್ದಾಗ ಮತ್ತೊಂದು ಲವ್ ರಾಮ್‌ನನ್ನು ಅರಸಿ ಬಂತು. ನಾವು ಬಯಸಿದ್ದು ಸಿಗದಿದ್ದರೇ, ನಮ್ಮನ್ನು ಬಯಸಿ ಬಂದದನ್ನು ಬಿಡಬಾರದು ಎಂದು ಮೇರಿ (ದಿಯಾ ಕೀರ್ತಿ)ಯ ಪ್ರೀತಿಯನ್ನು ರಾಮ್ ಒಪ್ಪಿಕೊಳ್ಳುತ್ತಾನೆ. ಆದರೆ ಮೊದಲಿನ ಎರಡು ಲವ್ ನಂತೆ ಸಿರಿಯಸ್ ಆಗಿ ಮೇರಿಯನ್ನು ಪ್ರೀತಿ ಮಾಡಲಿಲ್ಲ ರಾಮ್‌. ಇದೇ ಅವನಿಗೆ ಹೇಗೆ ಮುಳುವಾಯ್ತು? ಅನಾಥನಾಗಿದ್ದ ರಾಮ್‌ಗೆ ಫ್ಯಾಮಿಲಿ ಸಿಕ್ಕದ್ದು ಹೇಗೆ? ಪವಿತ್ರ, ರಷಿಕಾ, ಮೇರಿ ಈ ಮೂವರಲ್ಲಿ ರಾಮ್‌ಗೆ ಜೊತೆಯಾದವರು ಯಾರು? ಎಂದು ತಿಳಿಯಲು 'ಲವ್ ಸೀಸನ್ಸ್‌' ಸಿನಿಮಾ ನೋಡಲೇ ಬೇಕು. 

ಒಂದು ಒಳ್ಳೆಯ ಫ್ಯಾಮಿಲಿ ಕಥೆಯಲ್ಲಿ ಪ್ರೀತಿ-ಪ್ರೇಮ, ಎಮೋಷನ್, ಗೆಳೆತನ, ಚಿತ್ರರಂಗದಲ್ಲಿ ಅವಕಾಶ ಅರಸಿ ಬಂದ ಯುವಕರ ಕಷ್ಟ-ನಷ್ಟ ಹೀಗೆ ಒಂದಿಷ್ಟು ಅಂಶಗಳ ಮೇಲೆ ಕಥೆ ಸಾಗುತ್ತದೆ. ಮೊದಲಭಾಗ ಯುವಕನೋಬ್ಬ ತನ್ನ ಫ್ಯಾಮಿಲಿಗಾಗಿ ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾನೆ. ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದ್ರೆ ಏನೆಲ್ಲಾ ಎದುರಿಸಬೇಕಾಗುತ್ತೆ ಎಂಬ ಅಂಶದ ಮೇಲೆ ಕಥೆ ಸಾಗಿದರೆ, ಎರಡನೇ ಭಾಗ ಸಂಪೂರ್ಣ ಭಿನ್ನವಾಗಿದೆ. ಈ ಭಾಗದಲ್ಲಿ ರಾಮ್‌ನ ಲೈಫ್‌ನಲ್ಲಿ ಬಂದ ಮೂರು ಲವ್‌ಗಳ ಬಗ್ಗೆ ವಿವರಣೆ ಇದೆ. ಮೊದಲ ಭಾಗದಲ್ಲಿ ನೋಡುಗರಿಗೆ ಒಂದಿಷ್ಟು ಪ್ರಶ್ನೆಗಳು ಮೂಡುತ್ತವೆ. ಎರಡನೇ ಭಾಗದಲ್ಲಿ ಅವುಗಳಿಗೆ ಉತ್ತರ ಇದೆ. ಮೊದಲ ಭಾಗ ಒಂದಿಷ್ಟು ಕುತೂಹಲ ಅಂಶದಿಂದ ಸಿನಿಮಾ ನೋಡಿಸಿಕೊಂಡು ಸಾಗಿದ್ರೆ, ಎರಡನೇಭಾಗದಲ್ಲಿ ಬರುವ ಲವ್ ಸ್ಟೋರಿಗಳು ಅಷ್ಟಾಗಿ ಪ್ರೇಕ್ಷಕರಿಗೆ ಟಚ್ ಆಗುವುದಿಲ್ಲ. ಆದರೆ, ಪ್ರೀ ಕ್ಲೈಮ್ಯಾಕ್ಸ್‌ ಜನರಿಗೆ ತುಂಬಾ ಹಿಡಿಸುತ್ತದೆ.  

ಒಟ್ಟಿನಲ್ಲಿ ಹೊಸ ಪ್ರತಿಭೆಗಳು ಮಾಡಿರುವ ಒಂದಿಷ್ಟು ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಂಡು ಪ್ರೇಕ್ಷಕರು ಸಿನಿಮಾ ನೋಡಬೇಕು. ನಿರ್ದೇಶಕರು ಇಲ್ಲಿ ಪ್ರಾರಂಭದಿಂದಲೇ ನೋಡುಗರಿಗೆ ಗೊಂದಲ ಮೂಡಿಸುತ್ತಾ ಹೋಗುತ್ತಾರೆ. ಸ್ಕ್ರೀನ್ ಪ್ಲೇನಲ್ಲಿ ಏನೋ ಹೊಸ ತರ ಪ್ರಯತ್ನ ಮಾಡಿದ್ದಾರೆ. ಆದರೆ, ಅದು ಅಷ್ಟಾಗಿ ವರ್ಕಓಟ್ ಆಗಿಲ್ಲ. ಮೊದಲ ಪ್ರಯತ್ನದಲ್ಲೇ ನಾಯಕನಾಗಿ ಮುಕುಂದ ರಾಮಸ್ವಾಮಿ ಒಳ್ಳೆಯ ಅಭಿನಯ ಮಾಡಿದ್ದು, ಪಾತ್ರಕ್ಕಾಗಿ ಇನ್ನಷ್ಟು ತಯಾರಿ ಮಾಡಿಕೊಳ್ಳಬಹುದಿತ್ತು. ಮೂರು ಜನ ನಾಯಕಿಯರ ಪೈಕಿ ಮೇರಿ ಪಾತ್ರ ಮಾಡಿರುವ ದಿಯಾ ಅಭಿನಯ ಚನ್ನಾಗಿದೆ. ಇನ್ನು ಚಿತ್ರದಲ್ಲಿ ಬರುವ ಎರಡು ಹಾಡುಗಳು ಸಿನಿಮಾ ಮುಗಿದ ಮೇಲೂ ಪ್ರೇಕ್ಷಕರ ಮನಸಿನಲ್ಲಿರುತ್ತವೆ. ಉಳಿದಂತೆ ಕಾಮಿಡಿ ನಟರನ್ನು ಇನ್ನಷ್ಟು ಚನ್ನಾಗಿ ಬಳಸಿಕೊಳ್ಳಬಹುದಿತ್ತು. ಪೋಷಕ ಪಾತ್ರಗಳಲ್ಲಿ ರಾಜೇಶ್ ನಟರಂಗ, ಸಂಗೀತಾ ಅನಿಲ್ ಹಾಗೂ ಮಂಡ್ಯ ರಮೇಶ್ ಗಮನ ಸೇಳೆಯುತ್ತಾರೆ. ಇಂದಿನ ಯುವಕರು ನೋಡಲೇ ಬೇಕಾದ ಸಿನಿಮಾ ಇದಾಗಿದ್ದು, ಫ್ಯಾಮಿಲಿಗೂ ಕಥೆ ತುಂಬಾ ಇಷ್ಟ ಆಗುತ್ತದೆ.