ಅಂಧ ಅನಾಥರ ಸೇವೆಯೇ ದೇವರ ಸೇವೆ ಪಂಡಿತ ಕಲ್ಲಯ್ಯಜ್ಜ
ಕೊಪ್ಪಳ 12: ನಗರದ ತಾಲೂಕ ಕ್ರೀಡಾಂಗಣದ ಬಯಲು ರಂಗಮಂದಿರದಲ್ಲಿ, ಪಂಡಿತ ಪಂಚಾಕ್ಷರ ಗವಾಯಿಗಳವರ 80 ನೇ ಪುಣ್ಯಸ್ಮರಣೆ, ಪದ್ಮಭೂಷಣ ಡಾ, ಪಂಡಿತ ಪುಟ್ಟರಾಜ ಗವಾಯಿಗಳವರ 14 ನೇ ಪುಣ್ಯಸ್ಮರಣೆ ಅಂಗವಾಗಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ಅಂಧ - ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಡಾ. ಪಂಡಿತ ಕಲ್ಲಯ್ಯಜ್ಜನವರ ಪಂಚ ತುಲಾಭಾರ ಹಾಗೂ ಸಂಗೀತ ಸಮಾರಾಧನೆ.ಗುರು ಪುಟ್ಟರಾಜ ಗವಾಯಿಗಳವರ ಮಹಿಳಾ ಸಂಗೀತ ಹಾಗೂ ಕಲಾ ಶಿಕ್ಷಣ ಸಂಸ್ಥೆ ಭಾಗ್ಯನಗರ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜರುಗಿತು.
ವೀರೇಶ್ವರ ಪುಣ್ಯಾಶ್ರಮಕ್ಕೆ ದವಸ, ಧಾನ್ಯ, ಬೆಳ್ಳಿ, ಬಂಗಾರ ಕೊಡಿ ಅಂತ ನಾ ಕೇಳುವುದಿಲ್ಲ.ಬದಲಾಗಿ ಅಂಧರು, ಅನಾಥರು, ಭಿಕ್ಷೆ ಬೇಡುವವರು ಕಂಡರೆ ನನ್ನ ಆಶ್ರಮಕ್ಕೆ ತಂದು ಬಿಡಿ. ಇದೆ ನೀವು ಕೊಡುವ ದಾನ.ಇದೆ ನಾನು ನಿಮ್ಮಲ್ಲಿ ಕೇಳುವುದು. ಅವರ ಸೇವೆಯೇ ದೈವ ಸೇವೆ ಅಂತ ನನ್ನ ಪುಟ್ಟರಾಜ ಗುರುಗಳು ಅವರಿಗಾಗಿ ಜೀವನವನ್ನೇ ಮಡಿಪಿಟ್ಟರು. ನಾನು ಅದೇ ದಾರಿಯಲ್ಲಿ ಸಾಗುವೆ. ನಿಮ್ಮ ಭಕ್ತಿ ಸೇವೆ, ಸಂಗೀತ ಸೇವೆ ಸದಾ ನಡೆಯುತ್ತಿರಲಿ ಎಂದು ಸಾನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಧಾನಪರಿಷತ್ ಸದಸ್ಯೆ ಹೇಮಲತಾನಾಯಕ ಅವರು ಮಾತನಾಡಿ , ಅಂಧ -ಅನಾಥರ ಬಾಳಿಗೆ ಬೆಳಕಾದ ಪುಟ್ಟರಾಜ ಗವಾಯಿ ಸ್ಮರಣೆ ಹಾಗೂ ಸಂಗೀತ ಕಾರ್ಯಕ್ರಮ ಏರಿ್ಡಸಿರುವುದು ಕೊಪ್ಪಳ ಜನತೆಗೆ ಸಂತಸದ ಸಂಗತಿ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಲಾವಿದರ ಸಂಗೀತ ಸುಧೆಯನ್ನು ಕೇಳುವಂಥ ಅವಕಾಶವನ್ನು ಕಲ್ಪಿಸಿದ ಸಂಗೀತ ಪಾಠಶಾಲೆಗೆ ಧನ್ಯವಾದಗಳು ಸಲ್ಲಿಸಿ, ವೀರೇಶ್ವರ ಪುಣ್ಯಾಶ್ರಮದ ಅಭಿವೃದ್ಧಿಗೆ ಹದಿನೈದು ಸಾವಿರ ರೂಪಾಯಿಗಳನ್ನು ಸ್ಥಳದಲ್ಲಿಯೇ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಸಮಾಜ ಸೇವಕರಾದ ಸೋಮಶೇಖರ ಹಿಟ್ನಾಳ ಅವರು ಅಂಧ ಅನಾಥರ ಬಾಳಿಗೆ ಬೆಳಕಾಗಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಹೆಮ್ಮೆ ಅನಿಸಿದೆ. ಶ್ರೀಗಳ ಸೇವಾ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ತಬಲಾದಲ್ಲಿ ಪಂಡಿತ್ ರಾಜೇಂದ್ರ ನಾಕೋಡ್, ಸಿತಾರದಲ್ಲಿ ಪಂಡಿತ್ ಶಫಿಕಖಾನ್ ಮತ್ತು ಗಾಯನದಲ್ಲಿ ಪಂಡಿತ್ ಕುಮಾರ್ ಮರಡೂರ್, ಸದಾಶಿವ ಐಹೊಳೆ, ರವೀಂದ್ರ ಜಕಾತಿ, ಶಹನಾಯಿ ವಾದಕ ಮಾರುತಿ ನಾವಲಗಿ ಅಂತಹ ಸಂಗೀತ ದಿಗ್ಗಜರು ತಮ್ಮ ರಾಗ -ಆಲಾಪದ ಮೂಲಕ ಪ್ರೇಕ್ಷಕರ ಮನಕ್ಕೆ ಸವಿಯುಣಿಸಿದರು.ಈ ಎಲ್ಲರೊಂದಿಗೆ ಕಾರ್ಯಕ್ರಮದ ರೂವಾರಿಗಳಾದ ಪಂಡಿತ ಶಂಕರ ಬಿನ್ನಾಳ ಅವರು ಹಾರ್ಮೋನಿಯಂ ಸಾಥ್ ನೀಡಿದರು.
ಕಲ್ಲಯ್ಯಜ್ಜನವರಿಗೆ ಸಂಗೀತ ಸಾಹಿತ್ಯ ಸಿರಿ ಪ್ರಶಸ್ತಿ, ಖ್ಯಾತ ಸಂಗೀತಗಾರ ಸೋಮನಾಥ ಮರಡೂರ ಅವರಿಗೆ ಗಾನಗಂಧರ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇಪ್ಪತ್ತೆಂಟು ಸಾಧಕರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು.
ಕೊಪ್ಪಳ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣಪ್ಪಗೌಡ ಹದಿನೈದು ಸಾವಿರ ರೂಪಾಯಿಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶ್ಸ್ತಿ ಪುರಸ್ಕೃತ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಪತ್ರಕರ್ತ ಮಹೆಬೂಬ ಹುಸೇನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮನವರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹೊಳಿಬಸಯ್ಯ, ಶಿವಪ್ಪ ಜೋಗಿ, ಸದಾಶಿವ ಪಾಟೀಲ, ರಾಮಣ್ಣ ಶ್ಯಾವಿ, ಬಾಳಪ್ಪ ಕಾಳೆ, ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್, ಚಾಂದಪಾಷ ಕಿಲ್ಲೇದಾರ, ಬೀರ್ಪ ಅಂಡಗಿ, ಮಂಜುನಾಥ ಮ್ಯಾಗಳಮನಿ, ಮಾರುತಿ ಬಿನ್ನಾಳ, ನಾಗರಾಜ ಶ್ಯಾವಿ, ಕುಮಾರ ಬಿನ್ನಾಳ, ಮಂಜುನಾಥ .ಬಿ, ಮತ್ತಿತರರು ಹಾಜರಿದ್ದರು.
ಹೇಮರಾಜಶಾಸ್ರ್ತೀ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಪ್ರಾಣೇಶ ಪೂಜಾರ ನಿರೂಪಿಸಿದರು, ಯೋಗಾನರಸಿಂಹ ಪಿ.ಕೆ ಸ್ವಾಗತಿಸಿದರು, ನಾಗರಾಜನಾಯಕ ಡೊಳ್ಳಿನ ವಂದಿಸಿದರು.