ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗುತ್ತಿಗೆದಾರರ ಬಿಲ್ ಪಾವತಿಸಿ: ಪ್ರಕಾಶ ಹುಕ್ಕೇರಿ

ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗುತ್ತಿಗೆದಾರರ ಬಿಲ್ ಪಾವತಿಸಿ: ಪ್ರಕಾಶ ಹುಕ್ಕೇರಿ Pay the contractor's bill after the work is completed: Prakash Hukkeri


ಚಿಕ್ಕೋಡಿ 06: ತಾಲೂಕಿನಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದೊಂದಿಗೆ ಪೂರ್ಣಗೊಂಡ ಬಳಿಕವೇ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿಸಬೇಕು ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅಧಿಕಾರಿಗಳಿಗೆ ಸೂಚಿಸಿದರು. ಯಕ್ಸಂಬಾ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಮತ್ತು ವಿವಿಧ ಕಾಮಗಾರಿಗಳ ಅನುದಾನದ ಆದೇಶ ಪತ್ರ ವಿತರಿಸಿ  ಅವರು ಮಾತನಾಡಿ, ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ತೊಂದರೆ ಇದ್ದರೆ ಬಿಲ್ ಬಿಡುಗಡೆ ಮಾಡಬಾರದು. ಸಾರ್ವಜನಿಕ ಹಣ ವ್ಯರ್ಥವಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು ಎಂದು ಹೇಳಿದರು ತಾಲೂಕಿನ ವಿವಿಧ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಒಟ್ಟು ರೂ.4.90 ಕೋಟಿ ರೂ ಅನುದಾನ ಶಾಸಕ ಗಣೇಶ ಹುಕ್ಕೇರಿ ಮಂಜೂರು ಮಾಡಿಸಿದ್ದಾರೆ ಎಂದರು. 

ಹಳೆಯಡೂರ ಗ್ರಾಮದ ಪವಾಡಸಿದ್ದೇಶ್ವರ ದೇವಾಲಯ ನಿರ್ಮಾಣಕ್ಕೆ ರೂ. 15 ಲಕ್ಷ ಅನುದಾನ ಮಂಜೂರಾಗಿದ್ದು, ಮುಜರಾಯಿ ಇಲಾಖೆ ನೀಡಿದ ರೂ. 5 ಲಕ್ಷ ಸೇರಿ ದೇವಾಲಯ ನಿರ್ಮಾಣಕ್ಕೆ ಒಟ್ಟು ರೂ. 20 ಲಕ್ಷ ಅನುದಾನ ಲಭಿಸಿದೆ. ಚಂದೂರ ಗ್ರಾಮದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ರೂ. 40 ಲಕ್ಷ, ಚಂದೂರ ಪಠಾರಹಿಡೋಣಿಹಿಸೈನಿಕ ಟಾಕಳಿ ಸಂಪರ್ಕ ರಸ್ತೆ ಸುಧಾರಣೆಗೆ ರೂ. 1.10 ಕೋಟಿ ಹಾಗೂ ಮಾಂಜರಿವಾಡಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ರೂ. 1 ಕೋಟಿ ಅನುದಾನ ಮಂಜೂರಾಗಿದೆ. 

ಪಟ್ಟಣಕುಡಿ ಗ್ರಾಮದ ದತ್ತ ದೇವಸ್ಥಾನದ ಸಮುದಾಯ ಭವನ ಪೂರ್ತಿಗೆ ಸಂಸದರ ನಿಧಿಯಿಂದ ರೂ. 10 ಲಕ್ಷ ಅನುದಾನ ಮಂಜೂರಾಗಿದ್ದು, ಇದುವರೆಗೆ ಒಟ್ಟು ರೂ. 17.50 ಲಕ್ಷಗಳು ದೇವಾಲಯ ಕಾಮಗಾರಿಗೆ ವಿನಿಯೋಗವಾಗಿವೆ. ಇದೇ ರೀತಿಯಾಗಿ ತಾಲೂಕಿನ ಆರು ಗ್ರಾಮಗಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕಾಗಿ ಒಟ್ಟು ರೂ. 2.15 ಕೋಟಿ  ಅನುದಾನ ಮಂಜೂರಾಗಿದೆ. ಬೆಳಗಲಿ, ಜೋಡಟ್ಟಿ, ನಾಗರಮುನ್ನೋಳ್ಳಿ, ಯಡೂರ ಮತ್ತು ಮಾಂಜರಿವಾಡಿ ಗ್ರಾಮಗಳ ಸಹಕಾರ ಸಂಘಗಳಿಗೆ ರೂ. 25 ಲಕ್ಷದಿಂದ ರೂ. 50 ಲಕ್ಷದವರೆಗೆ ಅನುದಾನ ನೀಡಲಾಗಿದೆ. 

ಶಾಸಕ ಗಣೇಶ ಹುಕ್ಕೇರಿ, ಸಿದ್ದಪ್ಪಾ ಮರಾ​‍್ಯಯಿ, ದುಂಡಪ್ಪಾ ಕೋಟೇಪ್ಪಗೋಳ, ಮಹಾದೇವ ಈಟಿ, ಕಲ್ಲಪ್ಪ ಕರಗಾಂವೆ, ಅನೀಲ ಪಾಟೀಲ, ಬಾಬು ಡೋಣೆ, ಅನೀಲ ಮಾನೆ, ಮಹೇಶ ಕಾಗವಾಡೆ, ಅಶೋಕ ಹವಳೆ, ತೇಜಗೌಡಾ ಪಾಟೀಲ, ಸಂಜು ಪಾಟೀಲ, ಮಾರುತಿ ಕಾಂಬಳೆ ಸೇರಿದಂತೆ ವಿವಿಧ ಗ್ರಾಮಗಳ ಪಂಚಾಯತ್ ಸದಸ್ಯರು, ದೇವಸ್ಥಾನ ಹಾಗೂ ಸಹಕಾರ ಸಂಘದ ಅಧ್ಯಕ್ಷರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.