ಅನಧೀಕೃತ ಜಾನುವಾರುಗಳ ವಧೆ ಮತ್ತು ಸಾಗಾಣಿಕೆ ಮೇಲೆ ತೀವ್ರ ನಿಗಾವಹಿಸಿ - ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
ಕೊಪ್ಪಳ 04: ಜೂನ್ 7ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅನಧೀಕೃತ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಾಣಿಕೆ ಮೇಲೆ ತೀವ್ರ ನಿಗಾವಹಿಸುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಕ್ರೀದ್ ಆಚರಣೆ ಸಂದರ್ಭದಲ್ಲಿ ಅನಧೀಕೃತ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಾಣಿಕೆಯನ್ನು ತಡೆಗಟ್ಟುವ ಕುರಿತು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಕಾಯ್ದೆ ಮತ್ತು ಸಂರಕ್ಷಣೆ ಅಧಿನಿಯಮ-2020ರ ಅನ್ವಯ ಗೋ ಹತ್ಯೆ ನಿಷೇಧಿಸಲಾಗಿದೆ. ಪ್ರಾಣಿಗಳ ಸಾಗಾಣಿಕೆ ನಿಯಮ ಬಾಹಿರವಾಗಿದ್ದು, ಎಲ್ಲಾ ವಯಸ್ಸಿನ ಆಕಳು, ಆಕಳು ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ, ಕೋಣ ಹಾಗೂ ಉಚ್ಚ ನ್ಯಾಯಾಲಯದ ಆದೇಶದನ್ವಯ ಒಂಟೆಗಳನ್ನು ಹತ್ಯೆ ಮಾಡುವಂತಿಲ್ಲ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಅತ್ಯವಶ್ಯಕತೆ ಇದ್ದು, ಈ ಕುರಿತು ಪಶು ಇಲಾಖೆ, ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಂಡಗಳನ್ನು ರಚಿಸಿ, ಸೂಕ್ತ ನಿಗಾ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾದ ಸ್ಥಳಗಳಲ್ಲಿ ಚೆಕ್ಪೋಸ್ಟ್ ತೆರೆಯಬೇಕು. ಚೆಕ್ಪೋಸ್ಟಗಳಲ್ಲಿ ಪೊಲೀಸ್ ಹಾಗೂ ಪಶು ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಕರ್ನಾಟಕ ಗೋವಧೆ ಪ್ರತಿಭಂಧಕ ಮತ್ತು ಜಾನುವಾರು ಪರಿ ರಕ್ಷಣೆ ಅಧಿ ನಿಯಮಗಳ ಪ್ರಕಾರ ನಿರ್ದಿಷ್ಟಪಡಿಸಿದ ಪ್ರಾಣಿ, ಗೋವುಗಳ ವಧೆಗೆ ನಿಷೇಧವಿರುತ್ತದೆ. ಅದೇ ರೀತಿ ಕೆಲ ನಿರ್ದಿಷ್ಟಪಡಿಸಿದ ಪ್ರಾಣಿ ಅಥವಾ ಗೋವುಗಳ ವಧೆಗೆ ವಿನಾಯ್ತಿ ನೀಡಲಾಗಿರುತ್ತದೆ. ವಿನಾಯ್ತಿ ಇರುವ ಪ್ರಾಣಿಗಳನ್ನು ಹೊರತುಪಡಿಸಿ ನಿಷೇಧ ಇರುವ ಪ್ರಾಣಿಗಳ ವಧೆಯನ್ನು ತಡೆಯಬೇಕಾಗಿರುತ್ತದೆ. ಪ್ರಾಣಿ ವಧೆ, ಜಾನುವಾರು ಸಾಗಣೆ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಜಾನುವಾರು ಹತ್ಯೆ ಪ್ರತಿಭಂದಕ ಕಾಯ್ದೆಯನ್ವಯ ಅಗತ್ಯ ಕ್ರಮ ವಹಿಸಬೇಕು. ಬಕ್ರೀದ್ ಹಬ್ಬವನ್ನು ಶಾಂತಿಯಿಂದ ಆಚರಣೆಗೆ ಎಲ್ಲರೂ ಸಹಕರಿಸಬೇಕು. ಪ್ರಾಣಿ ವಧೆಗೆ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಿಂದ ಪ್ರತ್ಯೇಕ ಸ್ಥಳ ನಿಗದಿಪಡಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಬಕ್ರೀದ್ ಪ್ರಯುಕ್ತ ಜೂನ್ 6 ರೊಳಗಾಗಿ ಜಿಲ್ಲೆಯ ಎಲ್ಲಾ ಪೋಲಿಸ್ ಠಾಣೆಗಳಲ್ಲಿ ಜನಪ್ರತಿನಿಧಿಗಳು ಹಾಗೂ ಮುಖಂಡರ ಸಮ್ಮೂಖದಲ್ಲಿ ಶಾಂತಿ ಸಭೆಯನ್ನು ಕರೆದು, ಈ ಸಭೆಯಲ್ಲಿ ಪ್ರಾಣಿಗಳ ಅಕ್ರಮ ಸಾಗಾಣಿಕೆ ಮತ್ತು ವಧೆಯನ್ನು ತಡೆಯಲು ಅಗತ್ಯ ಕ್ರಮವಹಿಸಬೇಕು. ಕರ್ನಾಟಕ ಗೋವಧೆ ಪ್ರತಿಭಂಧಕ ಮತ್ತು ಜಾನುವಾರು ಪರಿ ರಕ್ಷಣೆ ಅಧಿ ನಿಯಮ 1964ರ ಪ್ರಕಾರ ಒಂಟೆಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಭಕ್ರೀದ್ ಹಬ್ಬದ ಸಮಯದಲ್ಲಿ ಒಂಟೆಗಳನ್ನು ತಂದು ವಧೆ ಮಾಡುವ ಸಂಭವಗಳಿರುವುದರಿಂದ ಒಂಟೆಗಳ ಸಾಗಾಣಿಕೆ ಮತ್ತು ವಧೆಯನ್ನು ತಡೆಯಲು ಅಗತ್ಯ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ ಅವರು ಮಾತನಾಡಿ, ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಿಸುವುದಕ್ಕಾಗಿ ಮತ್ತು ಜಾನುವಾರುಗಳ ಸಂರಕ್ಷಣೆಗಾಗಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2021 ಕಾಯ್ದೆ ಜಾರಿಯಾಗಿದೆ. ಈ ಕಾಯ್ದೆಯನ್ವಯ “ಜಾನುವಾರು” ಎಂದರೇ, ಎಲ್ಲಾ ವಯಸ್ಸಿನ ಆಕಳು, ಆಕಳ ಕರು, ಗೂಳಿ ಮತ್ತು ಎತ್ತು ಹಾಗೂ ಹದಿಮೂರು ವರ್ಷದೊಳಗಿನ ಕೋಣ ಮತ್ತು ಎಮ್ಮೆ ಸೇರಿವೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧೀಕೃತ ಜಾನುವಾರುಗಳ ಸಾಗಾಟದ ಮೇಲೆ ನಿಗಾವಹಿಸಲು ಪಶು ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ತಂಡಗಳನ್ನು ರಚಿಸಿ ಕ್ರಮ ವಹಿಸಲಾಗುತ್ತಿದೆ ಎಂದರು. ಜಾನುವಾರು ಸಾಗಾಣಿಕೆಯ ಮೇಲೆ ನಿರ್ಬಂಧ: ರೈತರು ಕೃಷಿ ಉದ್ದೇಶಕ್ಕೆ ಸ್ಥಳೀಯವಾಗಿ 15 ಕಿಲೋಮೀಟರ್ ದೂರದವರೆಗೆ ಪರವಾನಗಿ ಇಲ್ಲದೆ ಎರಡು ಹಸು ಮತ್ತು ಎರಡು ಕರುಗಳನ್ನು ಮಾತ್ರ ಕೊಂಡೊಯ್ಯಬಹುದು. ರಾತ್ರಿ ವೇಳೆ ಗೋವುಗಳ ಸಾಗಣೆ ಸಂಪೂರ್ಣ ನಿಷೇಧವಿದೆ. ಕೃಷಿ ಅಥವಾ ಪಶುಸಂಗೋಪನೆಯ ಉದ್ದೇಶಕ್ಕೆ ಹಸು, ಕರು, ಎತ್ತು, ಎಮ್ಮೆ, ಕೋಣಗಳನ್ನು ಸಾಗಿಸುವಾಗಲೂ ಸಾಗಣೆಯ ಪರವಾನಗಿ ಹೊಂದಿರಬೇಕಾದುದು ಕಡ್ಡಾಯ. ಅದರೊಂದಿಗೆ ಮಾಲೀಕತ್ವದ ದಾಖಲೆ ಮತ್ತು ಪಶುವೈದ್ಯಕೀಯ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನೂ ಹೊಂದಿರಬೇಕು. ವಾಹನದಲ್ಲಿರುವ ಗೋವುಗಳ ಸಂಖ್ಯೆ, ಕಳುಹಿಸಿದವರು ಮತ್ತು ಪಡೆಯುವವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ದೊಡ್ಡ ಅಕ್ಷರಗಳಲ್ಲಿ ವಾಹನದ ಮೇಲೆ ಬರೆಯುವುದು ಕಡ್ಡಾಯ. ಜಾನುವಾರುಗಳ ಮಾಲೀಕರು ಮಾಲೀಕತ್ವದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದರು. ಪ್ರಾಣಿ ಬಲಿ ನಿಷೇದ ಕಾಯ್ದೆ-1959 ಕಾಯ್ದೆಯ ಸೆಕ್ಷನ್ (3) ರನ್ವಯ ಸಾರ್ವಜನಿಕ ಸ್ಥಳಗಳಲ್ಲಿ, ಪೂಜಾ ಸ್ಥಳಗಳಲ್ಲಿ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರಾಣಿಯ ಬಲಿಯನ್ನು ಸಂಪೂರ್ಣವಾಗಿ ನಿಷೇದಿಸಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಸಭೆಯಲ್ಲಿ ವಿವರಿಸಿದರು. ಸಭೆಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸರವಗೋಳ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ಪಶುವೈದ್ಯಾಧಿಕಾರಿಗಳು ಸೇರಿದಂತೆ ಇತರೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.